ನಿನ್ನ ಬ್ರಹ್ಮಾಂಡದ ಯಮಪುರಿಯಲ್ಲಿ
ನೀನೇ ಚಿತ್ರಗುಪ್ತ, ನೀನೇ ಯಮಧರ್ಮ.
ಅದಕೆ,
ಬರೆಯಲಾರಂಭಿಸು ಬೆಳೆದ ಮೇಲೆ
ನಿನ್ನ ಬಾಳಿನ ಗ್ರಂಥ.
ನಿನ್ನ ಆಚಾರ ವಿಚಾರಗಳ
ನೀನಾಡಿದ ಸತ್ಯ ಅಸತ್ಯಗಳ
ಗುಪ್ತ ಕೃತ್ಯಗಳ ಬಾಹ್ಯ ಕರ್ಮಗಳ
ಯಾದಿಯನು ಮಾಡುತಿರು
ಚಿತ್ರಗುಪ್ತನ ತರಹ.
ಅವಲೋಕಿಸುತಿರು ನಿನ್ನ ದಾರಿಯನ
ನೀ ತುಳಿದ ಮುಳ್ಳು ಕಲ್ಲುಗಳ
ಏರುಪೇರು ಹಳ್ಳ ಕೊಳ್ಳಗಳ
ಅಡ್ಡ ದಾರಿಯೋ ನೇರ ದಾರಿಯೋ
ನೀನೇ ಆಯ್ದ ದಾರಿಯದು
ದೂರದಿರು ಯಾರನು.
ಕ್ಷಣಕ್ಷಣವೂ ದಿನದಿನವೂ
ಪರೀಕ್ಷೆಯಿಲ್ಲಿ
ಪ್ರಶ್ನೆ ಪತ್ರಿಕೆಯೂ ನಿನ್ನದು
ಉತ್ತರವೂ ನಿನ್ನದು
ಮಾನದಂಡವೂ ನಿನ್ನದು
ಮೌಲ್ಯಮಾಪಕನೂ ನೀನೇ.
ಮಲಗುವ ಮುನ್ನ
ನಿನ್ನ ನ್ಯಾಯಾಲಯದಲಿ
ಮಂಡಿಸು ವಾದ ಪ್ರತಿವಾದಗಳ
ತರ್ಕ ವಿತಾರ್ಕಗಳ.
ಅಂತ್ಯದಲಿ,
ಅಂತರಾಳದ ಧ್ವನಿಯ ಕೇಳಿ
ತೀರ್ಮಾನಿಸು ನಿನ್ನ ಯಾತ್ರೆಯ
ಸಫಲತೆ ವಿಫಲತೆಗಳ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.