ADVERTISEMENT

ಮಲ್ಲಿಕಾರ್ಜುನಗೌಡ ತೂಲಹಳ್ಳಿ ಅವರ ಕವನ: ಕೆಂಡ ತೂರುವ ಆಟ

​ಪ್ರಜಾವಾಣಿ ವಾರ್ತೆ
Published 12 ಮೇ 2024, 1:29 IST
Last Updated 12 ಮೇ 2024, 1:29 IST
   

ಕೆಂಡ ತೂರುವ ಆಟವಂತೆ
ಊರ ಮುಂದೆ

ತರುಣರು
ಮುಷ್ಠಿ ತುಂಬಾ
ಹೂವಿನಂತೆ ಕೆಂಡ ಹಿಡಿದು
ಭೇರಿ ಹೊಡೆತಕೆ ಮತ್ತೇರಿ
ತೂರಿ ತೂರಿ
ರಾಶಿ ರಾಶಿ ಬೆಂಕಿ

ಪಡುವಣದ ಗಾಳಿ
ಮೂಡಣಕೆ ಬಿರು ನುಗ್ಗಿ
ಕೈಯೊಳಗೆ ಕೆಂಡ
ಬಾಯೊಳಗೆ ಕೆಂಡ
ಅಹ! ಜ್ವಾಲೆ ಹೂ
ಉಂಡೆ ಬಾಯುಗುಳಿದಷ್ಟು

ADVERTISEMENT

ನೆಲ ಮುಗಿಲು ದಶ ದಿಕ್ಕು
ಬೆಂಕಿಯಲೆ ಕುಣಿಯುತಿವೆ
ಯಾರ ಹುಕುಮಿಗೆ
ಹಿಡಿಯಿತೀಪರಿಯ ಹುಚ್ಚು!?
ಮನೆ ಮಾರು ಸಿಡಿವಂತ
ಅಬ್ಬರದ ಹಾಡುಗಳು
ಗ್ವಾಮಾಳ ಕೊಯ್ವಂತ
ಮಾರುದ್ದ ಕತ್ತಿಗಳು
ದೈವ ಕೆಟ್ಟ್ಹೋದವೋ!
ಇವರೆ ಕೆಡು ದೈವವೋ!

ಆಟ ರಂಗೇರುತಿದೆ
ಒಂದೊಂದು ಮೈ ಕೆಂಡ
ಒಂದೊಂದು ಕೈ ಜ್ವಾಲೆ
ಎಷ್ಟಂತ ಹೊಗಳುವಿರಿ
ಮೂಕ ಪ್ರೇಕ್ಷಕ ಗಣವೇ

ವಿಲಯವಿದು ಸಾಹಸವೆ?
ಹುಚ್ಚು ಮಚ್ಚರವುಂಡ
ನಮ್ಮದೇ ಕುನ್ನಿಗಳು
ನಮ್ಮ ಬಸಿರಲಿ
ಗೋರಿ ತೋಡುತಲೆ ನಲಿಯುವವು

ಮರುಳಿನಲಿ ಈ ಧರೆಯ
ಮರಳಾಗಿಸುವ ಮುನ್ನ
ನಮ್ಮೊಡಲಿನೊಂದೊಂದು
ಮೋಡ ಫುಗ್ಗೆಯನೆಸೆದು
ಮಳೆ ಸುರಿಸಿ ಪೈರ ನಿಲಿಸಿ
ಹುಚ್ಚು ತೊಡೆಯೋಣ
        

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.