ADVERTISEMENT

ಅಡಿಕೆ: ಆಮದು ಆತಂಕ!

​ಪ್ರಜಾವಾಣಿ ವಾರ್ತೆ
Published 15 ಜನವರಿ 2012, 19:30 IST
Last Updated 15 ಜನವರಿ 2012, 19:30 IST
ಅಡಿಕೆ: ಆಮದು ಆತಂಕ!
ಅಡಿಕೆ: ಆಮದು ಆತಂಕ!   

ದಾವಣಗೆರೆ: ರಾಜ್ಯದ ಅಡಿಕೆ ಬೆಳೆಗಾರರ ಬದುಕು ಮತ್ತೊಮ್ಮೆ ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಳದಿ ಎಲೆರೋಗ, ಕೀಟಗಳ ಹಾವಳಿ ಹಾಗೂ ಇಳುವರಿ ಕುಂಠಿತದೊಂದಿಗೆ ಸದಾ ಹೋರಾಟ ನಡೆಸುತ್ತಿರುವ ಬೆಳೆಗಾರರಿಗೆ ಮತ್ತೊಂದು ಆತಂಕ ಶುರುವಾಗಿದೆ!

ಉತ್ತರ ಭಾರತದ ಅಡಿಕೆ ಮಾರುಕಟ್ಟೆಗಳಿಗೆ ತಿಂಗಳ ಹಿಂದೆ ಸದ್ದಿಲ್ಲದೆ ಇಂಡೋನೇಷ್ಯಾ ಹಾಗೂ ಮಲೇಷ್ಯಾದಿಂದ ಅಡಿಕೆ ಬಂದಿದ್ದು, ಸದಾ ಬೆಲೆಯೊಂದಿಗೆ ಜೂಜಾಟ ನಡೆಸುತ್ತಿರುವ ರಾಜ್ಯದ ಬೆಳೆಗಾರರು ಮತ್ತೆ ಆತಂಕ ಎದುರಿಸುವಂತಾಗಿದೆ.

15 ದಿನಗಳಿಂದ ಮಾರುಕಟ್ಟೆಯಲ್ಲಿ ್ಙ 200, 300 ಹಾಗೂ 500 ಧಾರಣೆ ಇಳಿಮುಖವಾಗುತ್ತಿತ್ತು. ಗುಟ್ಕಾ ಕಂಪೆನಿಯವರು ಆಮದು ಅಡಿಕೆ ಖರೀದಿ ಮಾಡಿದ ಪರಿಣಾಮ ಕಳೆದ ವಾರ ಕೆಂಪು ಅಡಿಕೆ ಧಾರಣೆ ಇದ್ದಕ್ಕಿದ್ದಂತೆ ್ಙ 14,500ರಿಂದ 12,500ಕ್ಕೆ ಇಳಿಮುಖ ಕಂಡಿತ್ತು. ಈಗ ಆಮದಾಗಿರುವ ಅಡಿಕೆ ಸಂಪೂರ್ಣ ಖಾಲಿಯಾಗಿದೆ. ಇದರಿಂದ ಧಾರಣೆ ಮತ್ತೆ ಚೇತರಿಕೆ ಕಂಡಿದ್ದು, `ಸಂಕ್ರಾಂತಿ~ ಹಿಗ್ಗಿನಲ್ಲಿರುವ ಬೆಳೆಗಾರರಿಗೆ ಕೊಂಚ ನೆಮ್ಮದಿ ತಂದಿದೆ. ಆದರೆ, ಮತ್ತೆ ಇಂಡೋನೇಷ್ಯಾ ಹಾಗೂ ಮಲೇಷ್ಯಾದ ಅಡಿಕೆ ಪ್ರವೇಶಿಸುವ ಸಾಧ್ಯತೆಯಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸುತ್ತವೆ.

ದಾವಣಗೆರೆ, ಮಂಗಳೂರು, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಹಾಗೂ ಮೈಸೂರು ಕಡೆ ಹೆಚ್ಚಿನ ಪ್ರಮಾಣದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ರಾಜ್ಯದ 8 ಲಕ್ಷ ಎಕರೆ ಪ್ರದೇಶದಲ್ಲಿ ವಾರ್ಷಿಕ ್ಙ 64 ಲಕ್ಷಕ್ಕೂ ಹೆಚ್ಚು ಕ್ವಿಂಟಲ್ ಅಡಿಕೆ ಉತ್ಪಾದನೆಯಾಗುತ್ತಿದೆ. ದೇಶದಲ್ಲಿ ಅಡಿಕೆ ಬೆಳೆಯುವ ರಾಜ್ಯಗಳಲ್ಲಿ ಕರ್ನಾಟಕದ್ದೇ ಶೇ. 60ರಿಂದ 65ರಷ್ಟು ಪಾಲಿದೆ. ಜತೆಗೆ, ಗುಣಮಟ್ಟದ ಅಡಿಕೆ ಸಹ ಹೌದು.

ರಾಜ್ಯದ ವಿವಿಧೆಡೆ ಬೆಳೆಗಾರರು ಈಗ `ನಮ್ಮನ್ನು ಉಳಿಸಿ~ ಎಂದು ಮೊರೆ ಇಡುತ್ತಿದ್ದಾರೆ. ಸಾಲ ಮಾಡಿಕೊಂಡಿರುವ ಬೆಳೆಗಾರರ ಕೂಗು ಮಾತ್ರ ಸರ್ಕಾರಕ್ಕೆ ಕೇಳಿಸುತ್ತಿಲ್ಲ ಎಂಬುದು ಬೆಳೆಗಾರರ ಅಳಲು.
`ಕಳೆದ ವರ್ಷ ಇದೇ ಸಂದರ್ಭದಲ್ಲಿ ಕೆಂಪು ಅಡಿಕೆ ಬೆಲೆ ್ಙ 22 ಸಾವಿರದಷ್ಟಿತ್ತು. ಚಾಲಿ ಅಡಿಕೆಯ ಬೆಲೆ ್ಙ  13 ಸಾವಿರದಷ್ಟಿತ್ತು. ಗುಟ್ಕಾ ಪ್ಲಾಸ್ಟಿಕ್ ನಿಷೇಧಿಸುವಂತೆ ನ್ಯಾಯಾಲಯ ಸೂಚಿಸಿದ ಮೇಲೆ ಮಾರುಕಟ್ಟೆಯಲ್ಲಿ ಧಾರಣೆ ದಿಢೀರ್ ಕುಸಿಯಿತು. ಆಗ ಲಾಭ ತಂದುಕೊಡಬಹುದು ಎಂಬ ನಿರೀಕ್ಷೆ ಹುಸಿಯಾಯಿತು. ಈ ವರ್ಷ ಕೂಡ ಬೇರೆಡೆಯಿಂದ ಅಡಿಕೆ ಮಾರುಕಟ್ಟೆಗೆ ಬರುತ್ತಿದ್ದು ಬೆಲೆಯಲ್ಲಿ ಸ್ಥಿರತೆ ಇಲ್ಲ~ ಎಂದು ನೊಂದು ನುಡಿಯುತ್ತಾರೆ ಅಡಿಕೆ ಬೆಳೆಗಾರರಾದ ಪರಮೇಶ್.

ಹಿಂದೇಟು: ಪ್ರತಿವರ್ಷ ಗುಟ್ಕಾ ಕಂಪೆನಿಯವರು ಅಡಿಕೆ ಖರೀದಿಸಿ ದಾಸ್ತಾನು ಇಡುತ್ತಿದ್ದರು. ಈ ವರ್ಷ ದಾಸ್ತಾನಿಡಲು ಹಿಂದೇಟು ಹಾಕುತ್ತಿದ್ದಾರೆ. ರಾಜ್ಯದ ಉತ್ತಮ ಅಡಿಕೆ ಖರೀದಿಗೆ ಬದಲಾಗಿ ಕಡಿಮೆ ದರಕ್ಕೆ ಸಿಗುವ ಆಮದು ಅಡಿಕೆ ಖರೀದಿಗೆ ಗುಟ್ಕಾ ಕಂಪೆನಿಗಳು ಮುಂದಾಗಿವೆ. ಇದರಿಂದ ಧಾರಣೆ ನಿರೀಕ್ಷಿಸಿದಷ್ಟು ಹೆಚ್ಚುತ್ತಿಲ್ಲ. ಏಪ್ರಿಲ್ ನಂತರ ಬದಲಾಗಬಹುದು ಎನ್ನುತ್ತಾರೆ ಸ್ಥಳೀಯ ಅಡಿಕೆ ವ್ಯಾಪಾರಸ್ಥರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.