ನವದೆಹಲಿ (ಪಿಟಿಐ): ಆಹಾರ ಹಣದುಬ್ಬರ ನಿಯಂತ್ರಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಅನುಸರಿಸತ್ತಿರುವ ಬಿಗಿ ವಿತ್ತೀಯ ನೀತಿ ಸೂಕ್ತವಾಗಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಬೆಂಬಲ ವ್ಯಕ್ತಪಡಿಸಿದೆ.
`ಆಹಾರ ಹಣದುಬ್ಬರ ದರ ಹಿತಕರ ಮಟ್ಟಕ್ಕೆ ಇಳಿಯುವವರೆಗೆ ಬಿಗಿ ವಿತೀಯ ನೀತಿ ಅನುಸರಿಸಬೇಕಾಗುತ್ತದೆ. ಸದ್ಯ ಭಾರತ, ಚೀನಾ, ಮಲೇಷ್ಯಾ, ಕೊರಿಯಾದಲ್ಲಿ ಇಂತಹ ನೀತಿ ಅನುಸರಿಸಲಾಗುತ್ತಿದ್ದು, ಇದು ಸಂದರ್ಭೋಚಿತ ಎಂದು `ಐಎಂಎಪ್~ ತನ್ನ ಪ್ರಾದೇಶಿಕ ಏಷ್ಯಾ-ಫೆಸಿಫಿಕ್ ಮುನ್ನೋಟ ವರದಿಯಲ್ಲಿ ಹೇಳಿದೆ.
ಹಣದುಬ್ಬರ ನಿಯಂತ್ರಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಕಳೆದ ಮಾರ್ಚ್ 2010ರಿಂದ ಇಲ್ಲಿಯವರೆಗೆ 12 ಬಾರಿ ಅಲ್ಪಾವಧಿ ಬಡ್ಡಿ ದರಗಳಾದ ರೆಪೊ ಮತ್ತು ರಿವರ್ಸ್ ರೆಪೊ ದರಗಳನ್ನು ಹೆಚ್ಚಿಸಿದೆ. ಇದರಿಂದ ಬ್ಯಾಂಕುಗಳ ಸಾಲಗಳ ಮೇಲಿನ ಬಡ್ಡಿ ದರ ಕಳೆದ 20 ತಿಂಗಳುಗಳಲ್ಲಿ ಶೇ 3.5ರಷ್ಟು ಹೆಚ್ಚಾಗಿದೆ. ದುಬಾರಿ ಬಡ್ಡಿ ದರದ ಫಲವಾಗಿ ದೇಶದ ಒಟ್ಟು ಕೈಗಾರಿಕೆ ಉತ್ಪಾದನೆಯೂ ಗಣನೀಯ ಇಳಿಕೆ ಕಂಡಿದೆ.
`ಭಾರತವೂ ಸೇರಿದಂತೆ ಪ್ರವರ್ಧಮಾನಕ್ಕೆ ಬರುತ್ತಿರುವ ಹಲವು ದೇಶಗಳಲ್ಲಿ ಅಗತ್ಯ ಸರಕುಗಳ ದರ ಗರಿಷ್ಠ ಮಟ್ಟದಲ್ಲಿವೆ. ಈ ಹಿನ್ನೆಲೆಯಲ್ಲಿ ಬಿಗಿ ವಿತ್ತೀಯ ನೀತಿಯನ್ನು ಇನ್ನಷ್ಟು ದಿನಗಳ ಕಾಲ ಮುಂದುವರೆಸುವುದು ಅನಿವಾರ್ಯ ಎಂದು `ಐಎಂಎಫ್~ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.