ನವದೆಹಲಿ, (ಪಿಟಿಐ): ಇಂಧನ ಬೆಲೆ ಹೆಚ್ಚಳ ತಡೆಗಟ್ಟಲು ಕಚ್ಚಾ ತೈಲ, ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಕಡಿತಗೊಳಿಸುವಂತೆ ವಿವಿಧ ರಾಜ್ಯಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸಿವೆ.
ಪ್ರಸಕ್ತ ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಮತ್ತು ಹಣದುಬ್ಬರಕ್ಕೆ ಕೇಂದ್ರದಲ್ಲಿನ ಯುಪಿಎ ಸರ್ಕಾರವೇ ಹೊಣೆ ಎಂದು ಕಾಂಗ್ರೆಸ್ಸೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳು ಆರೋಪಿಸಿವೆ. ಪ್ರಣವ್ ಮುಖರ್ಜಿ ಅವರು ಬುಧವಾರ ಕರೆದಿದ್ದ ಬಜೆಟ್ ಪೂರ್ವ ತಯಾರಿ ಸಭೆಯಲ್ಲಿ ಭಾಗವಹಿಸಿದ ವಿವಿಧ ರಾಜ್ಯಗಳ ಸಚಿವರು ಇದೇ ಅಭಿಪ್ರಾಯ ಮಂಡಿಸಿದರು.ಇಂಧನ ಬೆಲೆ ಹೆಚ್ಚಳ ತಡೆಯಲು ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸೀಮಾ ಸುಂಕ ಇಳಿಸುವಂತೆ ಬಿಹಾರ ಉಪ ಮುಖ್ಯಮಂತ್ರಿ ಸುಶಿಲ್ ಮೋದಿ ಒತ್ತಾಯಿಸಿದರು.
ಕಚ್ಚಾ ವಸ್ತುಗಳ ಮೇಲಿನ ಆಮದು ಸುಂಕವನ್ನು ಶೇ 5ರಷ್ಟು ಪ್ರಮಾಣದಲ್ಲಿ ಕಡಿತಗೊಳಿಸಿದಲ್ಲಿ ಇಂಧನ ಬೆಲೆ ಜನಸಾಮಾನ್ಯರಿಗೆ ಹೊರೆಯಾಗದು ಎಂದು ಅವರು ಅಭಿಪ್ರಾಯಪಟ್ಟರು. ದೆಹಲಿಯಲ್ಲಿ ಈಗಾಗಲೇ ತರಕಾರಿ, ದ್ವಿದಳ ಧಾನ್ಯಗಳನ್ನು ಮೌಲ್ಯವರ್ಧಿತ ತೆರಿಗೆ (ವ್ಯಾಟ್)ಯಿಂದ ಹೊರಗೆ ಇಟ್ಟಂತೆ ಪೆಟ್ರೋಲ್ ಮೇಲೆ ಒಂದು ನಿರ್ದಿಷ್ಟ ಮೊತ್ತದ ಸುಂಕವನ್ನು ವಿಧಿಸಬೇಕು ಎಂದು ದೆಹಲಿಯ ಹಣಕಾಸು ಸಚಿವ ಎ.ಕೆ. ವಾಲಿಯಾ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.