ಬ್ಯಾಡಗಿ: ಇಲ್ಲಿಯ ಮಾರುಕಟ್ಟೆಗೆ ಸೋಮವಾರ ಭಾರಿ ಪ್ರಮಾಣದಲ್ಲಿ ಮೆಣಸಿನಕಾಯಿ ಆವಕವಾದ ಹಿನ್ನೆಲೆಯಲ್ಲಿ ದರ ಹಠಾತ್ ಕುಸಿಯಿತು. ಇದರಿಂದ ಕುಪಿತರಾದ ರೈತರು ಎಪಿಎಂಸಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಬೆಲೆ ಹೆಚ್ಚಳ ಮಾಡುವವರೆಗೂ ಜಾಗ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದ ರೈತರು, ವರ್ತಕರ ಮೇಲೆ ಒತ್ತಡ ಹೇರಲು ಮೆಣಸಿನಕಾಯಿ ಚೀಲಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆತೀವ್ರಗೊಳಿಸಿದರು. ಸಂಜೆ 6ಕ್ಕೆ ಆರಂಭವಾದ ಪ್ರತಿಭಟನೆ ರಾತ್ರಿ ಎಂಟು ಗಂಟೆಯಾದರೂ ಮುಂದುವರೆದಿತ್ತು. ಕೆಲ ಅಂಗಡಿಗಳಲ್ಲಿ ಹೆಚ್ಚು ಬೆಲೆ ನೀಡಿದ್ದರೆ ಅದೇ ಮೆಣಸಿನಕಾಯಿಗೆ ಇನ್ನೊಂದು ಅಂಗಡಿಯಲ್ಲಿ ಕಡಿಮೆ ಬೆಲೆ ನೀಡಲಾಗಿದೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು.
ಎಪಿಎಂಸಿ ಅಧ್ಯಕ್ಷ ಮಲ್ಲಯ್ಯ ಹಿರೇಮಠ, ಸದಸ್ಯರಾದ ಶಂಕ್ರಣ್ಣ ಮಾತನವರ, ಜಗದೀಶಗೌಡ ಪಾಟೀಲ, ವರ್ತಕರ ಸಂಘದ ಪುಂಡಲೀಕಪ್ಪ ನವಲೆ, ವಿ.ಎಸ್. ಮೋರಿಗೇರಿ, ವರ್ತಕರೊಂದಿಗೆ ಚರ್ಚಿಸಿ ರೈತರನ್ನು ಸಮಾಧಾನಪಡಿಸಲು ಯತ್ನಿಸಿದರು. ಅವರ ಮಾತಿಗೆ ಒಪ್ಪದೇ ರೈತರು ಪ್ರತಿಭಟನೆ ಮುಂದುವರಿಸಿದರು. ಸೋಮವಾರ ಇಲ್ಲಿಯ ಮಾರುಕಟ್ಟೆಗೆ 1.14 ಲಕ್ಷ ಚೀಲ ಮೆಣಸಿನಕಾಯಿ ಆವಕವಾಗಿರುವುದು ಬೆಲೆ ಕುಸಿತಕ್ಕೆ ಕಾರಣ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.