ನವದೆಹಲಿ: 2018–19ನೇ ಹಣಕಾಸು ವರ್ಷಕ್ಕೆ ನಿಗದಿಪಡಿಸಿರುವ ನಿಧಿಗಳು ಏಪ್ರಿಲ್ 1 ರಿಂದಲೇ ಬಳಸಿಕೊಳ್ಳಲು ಲಭ್ಯವಾಗಿರಲಿದ್ದು, ಅವುಗಳನ್ನು ಸಮರ್ಪಕವಾಗಿ ವಿನಿಯೋಗಿಸಲು ಯೋಜನೆಗಳಿಗೆ ತ್ವರಿತವಾಗಿ ಚಾಲನೆ ನೀಡಬೇಕು ಎಂದು ಕೇಂದ್ರ ಸರ್ಕಾರವು ಎಲ್ಲ ಸಚಿವಾಲಯ ಮತ್ತು ಇಲಾಖೆಗಳಿಗೆ ಸೂಚಿಸಿದೆ.
ವಿವಿಧ ಯೋಜನೆಗಳು ಮತ್ತು ಕಾರ್ಯಕ್ರಮಗಳಿಗೆ ಮಾಡುವ ವೆಚ್ಚಗಳಿಗೆ ಏಪ್ರಿಲ್ 1ರಿಂದಲೇ ಚಾಲನೆ ನೀಡಬೇಕೆಂಬ ಉದ್ದೇಶದಿಂದಲೇ ಬಜೆಟ್ ಅನ್ನು ಮುಂಚಿತವಾಗಿಯೇ ಮಂಡಿಸಲಾಗಿದೆ. ಜತೆಗೆ, ಅದಕ್ಕೆ ಸಂಸತ್ತಿನ ಅನುಮೋದನೆಯನ್ನೂ ಪಡೆಯಲಾಗಿದೆ. ಹೀಗಾಗಿ ಹಣಕಾಸು ವರ್ಷದ ಆರಂಭದ ದಿನಗಳಲ್ಲಿಯೇ ಬಜೆಟ್ ಅನುದಾನದ ಬಳಕೆಗೆ ಮುಂದಾಗಬೇಕು ಎಂದು ಹಣಕಾಸು ಸಚಿವಾಲಯದ ಸುತ್ತೋಲೆಯಲ್ಲಿ ಹೇಳಲಾಗಿದೆ.
ಹಿಂದಿನ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ದೊಡ್ಡ ಮೊತ್ತದ ವೆಚ್ಚಗಳಿಗೆ ಚಾಲನೆ ನೀಡಲಾಗಿತ್ತು. ಇದರಿಂದ ನಿರೀಕ್ಷಿತ ಫಲಿತಾಂಶ ಪಡೆಯಲು ಸಾಧ್ಯವಾಗಿತ್ತು. ಕಳೆದ ವರ್ಷದ ಅನುಭವದ ಆಧಾರದಲ್ಲಿ ಹೇಳುವುದಾದರೆ, ಬಜೆಟ್ನಲ್ಲಿ ನಿಗದಿಪಡಿಸಿದ ನಿಧಿಗಳ ನೆರವು 2018–19ರ ಹಣಕಾಸು ವರ್ಷದ ಮೊದಲ ದಿನದಿಂದಲೇ ಲಭ್ಯ ಇರಲಿದೆ. ಹೀಗಾಗಿ ಯೋಜನೆಗಳನ್ನು ತ್ವರಿತವಾಗಿ ಕಾರ್ಯಗತಗೊಳಿಲು ಮುಂದಾಗಬೇಕು ಎಂದು ಸೂಚಿಸಲಾಗಿದೆ.
ಮೊದಲ ಮತ್ತು ದ್ವಿತೀಯ ತ್ರೈಮಾಸಿಕದಲ್ಲಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳಿಗೆ ಅಗತ್ಯವಾದ ಹಣಕಾಸಿನ ನೆರವನ್ನು ಎಲ್ಲ ಸಚಿವಾಲಯಗಳು ಮತ್ತು ಇಲಾಖೆಗಳು ಪರಾಮರ್ಶಿಸಬೇಕು.
ವೆಚ್ಚಗಳಿಗೆ ಸಕಾಲದಲ್ಲಿ ಒಪ್ಪಿಗೆ ಪಡೆದು ತ್ವರಿತವಾಗಿ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂದೂ ತಿಳಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.