ADVERTISEMENT

ಐಟಿಐಆರ್ ಪರಿಶೀಲನೆಗೆ ಸಮಿತಿ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2012, 19:30 IST
Last Updated 15 ಏಪ್ರಿಲ್ 2012, 19:30 IST

ನವದೆಹಲಿ (ಪಿಟಿಐ): ಬೆಂಗಳೂರಿನಲ್ಲಿ  ರೂ90 ಸಾವಿರ ಕೋಟಿ ವೆಚ್ಚದಲ್ಲಿ ಮಾಹಿತಿ ತಂತ್ರಜ್ಞಾನ ಹೂಡಿಕೆ ವಲಯ (ಐಟಿಐಆರ್) ಸ್ಥಾಪಿಸಲು ಕರ್ನಾಟಕ ಸರ್ಕಾರ ಸಲ್ಲಿಸಿರುವ ಪ್ರಸ್ತಾವ ಕುರಿತು ಪರಿಶೀಲನೆ ನಡೆಸಲು, ಕೇಂದ್ರ ಸರ್ಕಾರ ಉನ್ನತಾಧಿಕಾರ ಸಮಿತಿ ರಚಿಸಿದೆ.

ಸಂಸದೀಯ ಕಾರ್ಯದರ್ಶಿ ಅಜಿತ್ ಕುಮಾರ್ ಅಧ್ಯಕ್ಷತೆಯ ಈ ಸಮಿತಿಯು, ಇದೇ 18ರಂದು ಸಭೆ ಸೇರಲಿದ್ದು, ರಾಜ್ಯದ ಪ್ರಸ್ತಾವಕ್ಕೆ ಪ್ರಾಥಮಿಕ ಅನುಮೋದನೆ ನೀಡುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಎರಡು ಹಂತಗಳಲ್ಲಿ  ರೂ90 ಸಾವಿರ ಕೋಟಿ ಹೂಡಿಕೆಯಲ್ಲಿ, 42.51 ಚದರ ಕಿ.ಮೀ ವಿಸ್ತಾರದಲ್ಲಿ `ಐಟಿಐಆರ್~ ಸ್ಥಾಪಿಸಲು ಕರ್ನಾಟಕ ಸರ್ಕಾರ ಪ್ರಸ್ತಾವ ಸಲ್ಲಿಸಿದೆ. ಉದ್ದೇಶಿತ ಸ್ಥಳದಲ್ಲಿ ಐ.ಟಿ ಪಾರ್ಕ್‌ಗಳ ನಿರ್ಮಾಣ, ಮೂಲಸೌಕರ್ಯ ಅಭಿವೃದ್ಧಿ, ಸಂಶೋಧನೆ ಮತ್ತು ಅಭಿವೃದ್ಧಿ ಘಟಕ ತೆರೆಯಲು ಈ ಮೊತ್ತ ವಿನಿಯೋಗಿಸಲಾಗುವುದು. ಈಗಿರುವ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸುವುದು, ಸಾರಿಗೆ, ವಿದ್ಯುತ್ ಮತ್ತು ನೀರು ಪೂರೈಕೆ ಜಾಲ ಅಭಿವೃದ್ಧಿಪಡಿಸುವುದೂ ಈ ಯೋಜನೆಯಲ್ಲಿ ಸೇರಿವೆ.

ಮೊದಲ ಹಂತದ ಯೋಜನೆಗೆ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿ(ಕೆಐಎಡಿಬಿ) 2,072 ಏಕರೆಯಷ್ಟು ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಪ್ರಾಥಮಿಕ ಪ್ರಕಟಣೆ ಹೊರಡಿಸಿದೆ. 44 ಕಂಪನಿಗಳು ಈ ಯೋಜನೆಯಲ್ಲಿ ಬಂಡವಾಳ ತೊಡಗಿಸಲು ಆಸಕ್ತಿ ತೋರಿಸಿದ್ದು, ಇದರಿಂದ ನೇರವಾಗಿ 11 ಲಕ್ಷ ಮತ್ತು ಪರೋಕ್ಷವಾಗಿ 27 ಲಕ್ಷ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಐ.ಟಿ, ಐ.ಟಿ.ಇ.ಎಸ್ ಮತ್ತು ಎಲೆಕ್ಟ್ರಾನಿಕ್ ವಲಯದಲ್ಲಿ ಹೆಚ್ಚಿನ ಹೂಡಿಕೆ ಆಕರ್ಷಿಸಲು, `ಐಟಿಐಆರ್~ ಸ್ಥಾಪಿಸಲು ಇತ್ತೀಚೆಗೆ ವಾಣಿಜ್ಯ ವ್ಯವಹಾರಗಳ ಸಂಸದೀಯ ಸಮಿತಿ ರಾಜ್ಯಗಳಿಗೆ ಅನುಮತಿ ನೀಡಿತ್ತು. ಈಗಾಗಲೇ ಕರ್ನಾಟಕ, ಆಂಧ್ರಪ್ರದೇಶ, ಒಡಿಶಾ ಮತ್ತು ತಮಿಳುನಾಡು `ಐಟಿಐಆರ್~ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.