ನವದೆಹಲಿ: ಆರ್ಥಿಕ ವರ್ಷದ ಎರಡನೆ ತ್ರೈಮಾಸಿಕದಲ್ಲಿನ ಕಂಪನಿಗಳ ಆರ್ಥಿಕ ಸಾಧನೆ ಪ್ರಕಟಣೆ ಮುಕ್ತಾಯದ ಹಂತದಲ್ಲಿದೆ. ಹೀಗಾಗಿ ಇನ್ನೇನಿದ್ದರೂ ಜಾಗತಿಕ ವಿದ್ಯಮಾನಗಳು ದೇಶದ ಷೇರುಪೇಟೆಗಳ ಮೇಲೆ ಹೆಚ್ಚು ಪ್ರಭಾವ ಬರಲಿವೆ ಎನ್ನುವುದು ಪರಿಣತರ ವಿಶ್ಲೇಷಣೆಯಾಗಿದೆ.
‘ಸರ್ಕಾರಿ ಬಾಂಡ್ಗಳ ಸೆಪ್ಟೆಂಬರ್ ತಿಂಗಳ ವಾಯಿದಾ ವಹಿವಾಟು ಗುರುವಾರ ಮುಕ್ತಾಯವಾಗಲಿದೆ. ಅದೇ ದಿನ ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರ ಪರಾಮರ್ಶೆ ನಡೆಸಲಿದೆ. ಈ ಸುದ್ದಿಗಳ ಬಗ್ಗೆ ಹೂಡಿಕೆದಾರರು ಹೆಚ್ಚು ಆಸಕ್ತಿ ಹೊಂದಿದ್ದಾರೆ’ ಎಂದು ಎಚ್ಡಿಎಫ್ಸಿ ಸೆಕ್ಯುರಿಟೀಸ್ನ ಬಂಡವಾಳ ಮಾರುಕಟ್ಟೆ ಮುಖ್ಯಸ್ಥ ವಿ.ಕೆ.ಶರ್ಮಾ ಹೇಳಿದ್ದಾರೆ.
ಷೇರುಪೇಟೆ ವಹಿವಾಟು ಬಹುತೇಕ ಸಕಾರಾತ್ಮಕ ಮಟ್ಟದಲ್ಲಿ ಇರಲಿದೆ ಎಂದೂ ಕೆಲವು ತಜ್ಞರು ತಿಳಿಸಿದ್ದಾರೆ.
‘ಜಾಗತಿಕ ಸಾಲ ಮೌಲ್ಯಮಾಪನ ಸಂಸ್ಥೆಯು ಭಾರತದ ಸಾಲ ನೀಡಿಕೆ ಸಾಮರ್ಥ್ಯವನ್ನು ಮೇಲ್ದರ್ಜೆಗೆ ಏರಿಕೆ ಮಾಡಿದ ಬಳಿಕ ದೇಶದ ಷೇರುಪೇಟೆಗಳ ಚಿತ್ರಣ ಬದಲಾಗಿದೆ. ಹೆಚ್ಚಿನ ಬಂಡವಾಳ ಹರಿದು ಬರುವ ನಿರೀಕ್ಷೆ ವ್ಯಕ್ತವಾಗಿದೆ’ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವೀಸಸ್ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಅಭಿಪ್ರಾಯಪಟ್ಟಿದ್ದಾರೆ.
‘ಕಚ್ಚಾ ತೈಲ ಬೆಲೆ ಮತ್ತು ಅಮೆರಿಕದ ಫೆಡರಲ್ ರಿಸರ್ವ್ ಸಭೆಯ ಬಗ್ಗೆ ಹೂಡಿಕೆದಾರರು ಹೆಚ್ಚು ಗಮನ ಕೇಂದ್ರೀಕರಿಸಿದ್ದಾರೆ. ಈ ವಿದ್ಯಮಾನಗಳು ಚಂಚಲ ವಹಿವಾಟಿಗೆ ಕಾರಣವಾಗಬಹುದು’ ಎಂದೂ ನಾಯರ್ ಹೇಳಿದ್ದಾರೆ.
‘ಆರ್ಥಿಕ ಸುಧಾರಣೆಗೆ ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳು ಸೂಕ್ತವಾಗಿವೆ ಎನ್ನುವುದನ್ನು ಮೂಡೀಸ್ ವರದಿ ದೃಢಪಡಿಸಿದೆ. ಇದು ಭಾರತದ ಆರ್ಥಿಕತೆಗೆ ಸಕಾರಾತ್ಮಕ ಅಂಶವಾಗಿದ್ದು, ವಿದೇಶಿ ಹೂಡಿಕೆ ಆಕರ್ಷಿಸಲು ಪೂರಕವಾಗಲಿದೆ’ ಎಂದು ಮುತ್ತೂಟ್ ಫೈನಾನ್ಸ್ನ ವ್ಯವಸ್ಥಾಪಕ ನಿರ್ದೇಶಕ ಜಾರ್ಜ್ ಅಲೆಕ್ಸಾಂಡರ್ ಮುತ್ತೂಟ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.