ನವದೆಹಲಿ: ಸಮರ್ಪಕವಾಗಿ ಜಾರಿಯಾಗುತ್ತಿರುವ ಜಿಎಸ್ಟಿ, ಸರಿಯಾದ ದಿಕ್ಕಿನಲ್ಲಿ ಸಾಗಿರುವ ಆರ್ಥಿಕ ಸುಧಾರಣಾ ಕ್ರಮಗಳಿಂದ ದೇಶಿ ಆರ್ಥಿಕತೆಯು ಸದೃಢವಾಗಿದೆ ಎಂದು ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಅಭಿಪ್ರಾಯಪಟ್ಟಿದೆ.
ಕೇಂದ್ರದಲ್ಲಿನ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರವು ನಾಲ್ಕು ವರ್ಷ ಪೂರ್ಣಗೊಳಿಸಿ ಐದನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ, ಆರ್ಥಿಕತೆಯು ಪ್ರಗತಿಪಥದಲ್ಲಿ ಮುನ್ನಡೆದಿದೆ ಎಂದು ‘ಸಿಐಐ’ ಶಹಬ್ಬಾಸಗಿರಿ ನೀಡಿದೆ.
ನಾಲ್ಕು ವರ್ಷಗಳಲ್ಲಿ ಸರ್ಕಾರವು ಆರ್ಥಿಕತೆಯ ಪ್ರಮುಖ ಸವಾಲುಗಳನ್ನು ಸಮರ್ಥವಾಗಿ ಬಗೆಹರಿಸಲು ಶ್ರಮಿಸಿದೆ. ಉದ್ದಿಮೆಗಳ ಸ್ಥಾಪನೆಗೆ ನಿಯಮಗಳ ಸರಳೀಕರಣ, ಬ್ಯಾಂಕ್ಗಳ ವಸೂಲಾಗದ ಸಾಲದ ಸಮಸ್ಯೆಗೆ ಪರಿಹಾರ, ವಿದೇಶಿ ನೇರ ಬಂಡವಾಳ ಹೂಡಿಕೆ, ಮೂಲಸೌಕರ್ಯಗಳ ನಿರ್ಮಾಣ, ನಷ್ಟಪೀಡಿತ ಉದ್ದಿಮೆಗಳ ಪುನಶ್ಚೇತನಕ್ಕೆ ಸರ್ಕಾರ ಗಮನಾರ್ಹ ಕೊಡುಗೆ ನೀಡಿದೆ ಎಂದು ಸಿಐಐ ತಿಳಿಸಿದೆ.
‘ಉದ್ದಿಮೆ ವಲಯದಲ್ಲಿ ಬಂಡವಾಳ ಹೂಡಿಕೆಗೆ ಈಗ ಉತ್ತೇಜಕರ ಪರಿಸ್ಥಿತಿ ಇದೆ. ಅಭಿವೃದ್ಧಿಗೆ ಒತ್ತು ನೀಡಿರುವ ಸರ್ಕಾರದ ಕ್ರಮಗಳು ಫಲ ನೀಡುತ್ತಿವೆ. ಇದು ಒಟ್ಟಾರೆ ಬೆಳವಣಿಗೆಗೆ ಬಹುಬಗೆಯಲ್ಲಿ ನೆರವಾಗುತ್ತಿದೆ’ ಎಂದು ಸಿಐಐನ ಮಹಾ ನಿರ್ದೇಶಕ ಚಂದ್ರಜೀತ್ ಬ್ಯಾನರ್ಜಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.