ADVERTISEMENT

ನವ ಉದಾರೀಕರಣ ನೀತಿಗೆ ಬಿಜು ಆತಂಕ

ಜೀವವಿಮಾ ಪ್ರತಿನಿಧಿಗಳ ರಾಜ್ಯ ಮಟ್ಟದ ಸಮಾವೇಶ

​ಪ್ರಜಾವಾಣಿ ವಾರ್ತೆ
Published 8 ಜನವರಿ 2013, 19:59 IST
Last Updated 8 ಜನವರಿ 2013, 19:59 IST
ಪಿ.ಕೆ.ಬಿಜು
ಪಿ.ಕೆ.ಬಿಜು   

ದಾವಣಗೆರೆ: ಸರ್ಕಾರದ ನವ ಉದಾರೀಕರಣ ನೀತಿಯಿಂದಾಗಿ ವಿಮಾ ಕ್ಷೇತ್ರ ಸೇರಿದಂತೆ ಹಲವಾರು ವಲಯಗಳು ಆತಂಕ ಎದುರಿಸುತ್ತಿವೆ ಎಂದು ಸಂಸತ್ ಸದಸ್ಯ, ಕೇರಳದ ಪಿ.ಕೆ.ಬಿಜು ಕಳವಳ ವ್ಯಕ್ತಪಡಿಸಿದರು.

ನಗರದಲ್ಲಿ ಅಖಿಲ ಭಾರತ ಜೀವ ವಿಮಾ ಪ್ರತಿನಿಧಿಗಳ ಸಂಘಟನೆ     ಮಂಗಳವಾರ ಆಯೋಜಿಸಿದ್ದ ರಾಜ್ಯ ಮಟ್ಟದ 3ನೇ ಸಮ್ಮೇಳನದಲ್ಲಿ ಮಾತನಾಡಿ, ಭಾರತೀಯ ಜೀವ ವಿಮಾ ನಿಗಮ ಬಲವಾದ ಸಾಮಾಜಿಕ ಬದ್ಧತೆ ಹೊಂದಿದೆ, ಜನರ ನಂಬಿಕೆಗೆ ಪಾತ್ರವಾಗಿದೆ. ದೇಶದಲ್ಲಿ 24 ಕೋಟಿ ಪಾಲಿಸಿಗಳನ್ನು ಹೊಂದಿದೆ ಎಂದು ಗಮನ ಸೆಳೆದರು.

ನವ ಉದಾರವಾದ ನೀತಿಯ ಪರಿಣಾಮವಾಗಿ ಬ್ಯಾಂಕಿಂಗ್, ರೈಲ್ವೆ, ಇಂಧನ, ರಸಗೊಬ್ಬರ ಸೇರಿದಂತೆ ಮುಂದೆ ಕುಡಿಯುವ ನೀರೂ ಸಹ ಖಾಸಗೀಕರಣಗೊಳ್ಳುವ ಅಪಾಯವಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಭಾರತೀಯ ರಿಸರ್ವ್ ಬ್ಯಾಂಕ್‌ನ ಖಾಸಗೀಕರಣ ನೀತಿಯಿಂದಾಗಿ 1993ರಲ್ಲಿ 10, ಬಳಿಕ 2 ಖಾಸಗಿ ಬ್ಯಾಂಕ್‌ಗಳಿಗೆ ಅನುಮತಿ ನೀಡಲಾಯಿತು. ಕಳೆದ ಒಂದೂವರೆ ದಶಕದಲ್ಲಿ ಸರ್ಕಾರಿ ಸ್ವಾಮ್ಯದ 5 ಸಾವಿರ ಬ್ಯಾಂಕ್ ಶಾಖೆಗಳು ಮುಚ್ಚಿಹೋಗಿವೆ. ಎಡಪಕ್ಷಗಳ ಚಳವಳಿ ಪರಿಣಾಮವಾಗಿಯೇ 1969ರಲ್ಲಿ ಬ್ಯಾಂಕ್‌ಗಳ ರಾಷ್ಟ್ರೀಕರಣ ನಡೆಯಿತು ಎಂದರು.

ವಿದೇಶಿ ವಿಮಾ ಕಂಪೆನಿಗಳು ಅತ್ಯಂತ ಕಡಿಮೆ ಮಾಸಿಕ ಕಂತುಗಳಲ್ಲಿ ಅಧಿಕ ಲಾಭ ನೀಡುವ ಆಮಿಷ ಒಡ್ಡುತ್ತಿವೆ. ಕೊನೆಗೆ ಅದನ್ನು ಪೂರೈಸಲಾಗದೆ ಪಾಲಿಸಿದಾರರನ್ನು ವಂಚಿಸುತ್ತಿವೆ. ಜಾಗತಿಕ ಆರ್ಥಿಕ ಹಿಂಜರಿತ ಸಂದರ್ಭ ಅಮೆರಿಕದಲ್ಲಿ ಲಕ್ಷಾಂತರ ಮಂದಿ ಹಣ, ಮನೆಮಾರು ಕಳೆದುಕೊಂಡಿದ್ದಾರೆ. ವಿಮಾ ಕ್ಷೇತ್ರದ ಮಾರುಕಟ್ಟೆ ಅನಿಯಂತ್ರಿತಗೊಳಿಸಿರುವುದರ ಕೆಟ್ಟ ಪರಿಣಾಮವನ್ನು ಹಲವು ದೇಶಗಳು ಈಗಾಗಲೇ ಅನುಭವಿಸಿವೆ. ನ್ಯೂಯಾರ್ಕ್ ಮೂಲದ `ಎಐಜಿ' ಕಂಪೆನಿ ಇದಕ್ಕೆ ಒಳ್ಳೆಯ ಉದಾಹರಣೆ. ಅಮೆರಿಕದಲ್ಲಿನ ಕುಸಿತಕ್ಕೆ ಈ ಕಂಪೆನಿಯ `ಕೊಡುಗೆ'ಯೂ ಇದೆ ಎಂದರು.

2005ರಿಂದ 2009ರವರೆಗೆ ದೇಶದಲ್ಲಿ 36 ಖಾಸಗಿ ವಿಮಾ ಕಂಪೆನಿಗಳುರೂ5,850.5 ಕೋಟಿ ಬಂಡವಾಳ ಹೂಡಿದ್ದರೆ, ಸರ್ಕಾರಿ ಸ್ವಾಮ್ಯದ ಕಂಪೆನಿಗಳುರೂ51,252.9 ಕೋಟಿ ಹೂಡಿಕೆ ಮಾಡಿವೆ. ಆದರೆ, ಶೇ 26ರಷ್ಟಿದ್ದ ವಿಮಾ ಕ್ಷೇತ್ರದ ವಿದೇಶಿ ಹೂಡಿಕೆಯನ್ನು ಶೇ 49ಕ್ಕೆ ಏರಿಸುತ್ತಿರುವುದು ಅಪಾಯಕಾರಿ ಎಂದರು.

ಬಹುರಾಷ್ಟ್ರೀಯ ಕಂಪೆನಿಗಳ ಹಿತಾಸಕ್ತಿ ರಕ್ಷಿಸಲು ದೇಶವನ್ನು ಸಾಲದ ಕೂಪಕ್ಕೆ ತಳ್ಳಲು ವಿಮಾ ಕ್ಷೇತ್ರವನ್ನು ಖಾಸಗೀಕರಣಗೊಳಿಸಲು ಸರ್ಕಾರ ಹೊರಟಿದೆ. ಈಗಾಗಲೇ 12,23,049 ಪ್ರತಿನಿಧಿಗಳು ಉದ್ಯೋಗ ಕಳೆದುಕೊಂಡಿದ್ದಾರೆ. ಮುಂದೆ ಅವರ ಎಲ್ಲ ಸೌಲಭ್ಯ, ಪ್ರತಿನಿಧಿ ಸಂಖ್ಯೆ ಕಡಿತಗೊಳಿಸಿದರೆ 12,78,234 ಕುಟುಂಬಗಳು ಬೀದಿಗೆ ಬೀಳಲಿವೆ. `ಎಲ್‌ಐಸಿ'ಯನ್ನು ಸಂಪೂರ್ಣ ಇಲ್ಲವಾಗಿಸಲು ಯುಪಿಎ ಸರ್ಕಾರಕ್ಕೆ ವಿಮಾ ನಿಯಂತ್ರಣ ಅಭಿವೃದ್ಧಿ ಪ್ರಾಧಿಕಾರ ಎಲ್ಲ ಬೆಂಬಲ ನೀಡುತ್ತಿದೆ. ಜನರ ಹಿತಾಸಕ್ತಿಗೆ ಧಕ್ಕೆ ತರುವ ನೀತಿ ವಿರುದ್ಧ ಹೋರಾಟ ನಡೆಸಲೇ ಬೇಕಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.