ADVERTISEMENT

ನೇರ ಮಾರಾಟ; ಕಾಯ್ದೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2011, 19:30 IST
Last Updated 26 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ನೇರ ಮಾರಾಟ ವಹಿವಾಟಿನ ಒಟ್ಟಾರೆ ಹಿತಾಸಕ್ತಿ ರಕ್ಷಿಸಲು ಕೇಂದ್ರ ಸರ್ಕಾರ ಸೂಕ್ತ ಕಾಯ್ದೆ ರೂಪಿಸಬೇಕು ಎಂದು ಭಾರತದ ನೇರ ಮಾರಾಟಗಾರರ ಸಂಘವು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ನೇರ ಮಾರಾಟ ವಹಿವಾಟು ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ  `ಐಡಿಎಸ್‌ಎ~ ನಗರದಲ್ಲಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ   ಯೋಗಿಂದರ್ ಸಿಂಗ್ ಅವರು ಮಾತನಾಡುತ್ತಿದ್ದರು.

ಈ ವಹಿವಾಟಿಗೆ ಸಂಬಂಧಿಸಿದಂತೆ ಸರ್ಕಾರವು ನಾಲ್ಕು ಕ್ಷೇತ್ರಗಳಲ್ಲಿ ಮಧ್ಯ ಪ್ರವೇಶಿಸಬೇಕಾದ ಅಗತ್ಯ ಇದೆ. ನೇರ ಮಾರಾಟ ವಹಿವಾಟಿನ ಸ್ಪಷ್ಟ ವ್ಯಾಖ್ಯಾನ, ಈ ವಲಯದಲ್ಲಿ ವಿದೇಶಿ ನೇರ ಹೂಡಿಕೆ ನೀತಿ, ಈ ವಲಯಕ್ಕೆ ಸಂಬಂಧಿಸಿದಂತೆ ಸೂಕ್ತ ಕಾಯ್ದೆ ಮತ್ತು ಪ್ರತ್ಯೇಕ ಸಚಿವಾಲಯ ಸ್ಥಾಪನೆ ನಿಟ್ಟಿನಲ್ಲಿ ಸರ್ಕಾರ ಗಂಭೀರವಾಗಿ ಆಲೋಚಿಸಬೇಕಾದ ಅಗತ್ಯ ಇದೆ ಎಂದರು.

ರಾತ್ರಿ ಬೆಳಗಾಗುವುದರೊಳಗೆ ಅಸ್ತಿತ್ವಕ್ಕೆ ಬರುವ ಮತ್ತು ವಂಚನೆ ಯೋಜನೆಗಳ ಮೂಲಕ ಗ್ರಾಹಕರಿಗೆ ಮೋಸ ಮಾಡುವ ಸಂಸ್ಥೆಗಳನ್ನು ನಿಗ್ರಹಿಸುವುದು ತುರ್ತು ಅಗತ್ಯವಾಗಿದೆ. ಇಂತಹ ವಂಚಕ ಸಂಸ್ಥೆಗಳಿಂದ ಒಟ್ಟಾರೆ ನೇರ ಮಾರಾಟ ವಹಿವಾಟಿನ ವರ್ಚಸ್ಸಿಗೆ ಧಕ್ಕೆ ಒದಗುತ್ತಿದೆ ಎಂದು ಸಿಂಗ್ ಆತಂಕ ವ್ಯಕ್ತಪಡಿಸಿದರು.

ದೇಶದಲ್ಲಿ ನೇರ ಮಾರಾಟ ವಹಿವಾಟು ನಿಯಂತ್ರಣಕ್ಕೆ ಸೂಕ್ತ ಕಾಯ್ದೆ ಮತ್ತು ವ್ಯವಸ್ಥೆ ರೂಪುಗೊಂಡರೆ, ವಹಿವಾಟಿನ ಸ್ವರೂಪವು ಹಲವಾರು ಪಟ್ಟು ಹೆಚ್ಚಲಿದೆ. ದೇಶಿ ನೇರ ಮಾರಾಟ ವಹಿವಾಟಿನ ಒಟ್ಟಾರೆ ಮೊತ್ತವು 2012-12ರಷ್ಟೊತ್ತಿಗೆ ರೂ7,100 ಕೋಟಿಗಳಿಗೆ ತಲುಪಲಿದೆ ಈ ವಹಿವಾಟು ಅಪಾರ ಸಂಖ್ಯೆಯ ಜನರಿಗೆ ಅದರಲ್ಲೂ ಮಹಿಳೆಯರಿಗೆ ಸ್ವಯಂ ಉದ್ಯೋಗಾವಕಾಶ ಕಲ್ಪಿಸಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.