ಬೆಂಗಳೂರು: ‘ಭಾರತೀಯ ಜೀವ ವಿಮಾ ನಿಗಮದ ‘ಬೆಂಗಳೂರು ವಿಭಾಗ –1’ ಪ್ರಸಕ್ತ ಆರ್ಥಿಕ ವರ್ಷದಲ್ಲಿ ₨260.28 ಕೋಟಿ ಪ್ರೀಮಿಯಂ ಸಂಗ್ರಹಿಸಿದೆ’ ಎಂದು ನಿಗಮದ ಹಿರಿಯ ವಿಭಾಗೀಯ ವ್ಯವಸ್ಥಾಪಕ ಪಿ.ಕುಮರೇಸನ್ ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಭಾಗವು 2,35,478 ಪಾಲಿಸಿಗಳನ್ನು ಮಾರಾಟ ಮಾಡುವ ಮೂಲಕ ಈ ಸಾಧನೆ ಮಾಡಿದೆ. ಇದರಿಂದಾಗಿ ಶೇ 20.07 ಪ್ರೀಮಿಯಂ ಸಂಗ್ರಹಿಸಿದಂತಾಗಿದೆ ಎಂದರು.
ವಿಭಾಗದ ಪಿಂಚಣಿ ಹಾಗೂ ಗುಂಪು ವಿಮಾ ಘಟಕವು ₨2,995.50 ಕೋಟಿ ಪ್ರೀಮಿಯಂ ಸಂಗ್ರಹಿಸಿದೆ. ಸಾಮಾಜಿಕ ಸುರಕ್ಷಾ ಯೋಜನೆ ಜನಶ್ರೀ ಬಿಮಾ ಯೋಜನೆ ಮೂಲಕ 3ಲಕ್ಷಕ್ಕೂ ಅಧಿಕ ಜನರಿಗೆ ವಿಮಾ ರಕ್ಷೆಯನ್ನು ಒದಗಿಸಿದೆ ಎಂದು ತಿಳಿಸಿದರು.ಎಲ್ಐಸಿಯ ಬೆಂಗಳೂರು –1 ವಿಭಾಗವು ಪ್ರಸಕ್ತ ಆರ್ಥಿಕ ವರ್ಷದಲ್ಲಿ 82,673 ಪರಿಪಕ್ವ ದಾವೆಗಳನ್ನು ಇತ್ಯರ್ಥಪಡಿಸಿದ್ದು ₨320.18 ಕೋಟಿ ಪಾವತಿಸಿದೆ. ವಿಭಾಗವು ಕ್ಲೈಮ್ ಪಾವತಿ ಕುರಿತು ಪಾಲಿಸಿದಾರರಿಗೆ ಮಾಹಿತಿ ನೀಡಲು ಆರಂಭಿಸಿದ್ದ ಎಸ್ಎಂಎಸ್ ಅಲರ್ಟ್ ಸೇವೆಯು ಯಶಸ್ವಿಯಾಗಿದ್ದು ಈವರೆಗೆ 85,304 ಜನರಿಗೆ ಎಸ್ಎಂಎಸ್ ಮುಖಾಂತರ ಮಾಹಿತಿ ನೀಡಲಾಗಿದೆ ಎಂದರು.
ನಗರದಲ್ಲಿ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ವಿಭಾಗದ ವ್ಯಾಪ್ತಿಯಲ್ಲಿ ಒಂದರಿಂದ 10ನೇ ತರಗತಿವರೆಗಿನ ಒಂದು ಸಾವಿರ ವಿದ್ಯಾರ್ಥಿಗಳನ್ನು ಗುರುತಿಸಲಾಗಿದ್ದು ಜನವರಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ವರ್ಷದ ವಿದ್ಯಾರ್ಥಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.