ADVERTISEMENT

ಪ್ರಶ್ನೋತ್ತರ ?

​ಪ್ರಜಾವಾಣಿ ವಾರ್ತೆ
Published 17 ಜುಲೈ 2012, 19:30 IST
Last Updated 17 ಜುಲೈ 2012, 19:30 IST

ರಾಮೇಗೌಡ, ಅರಸೀಕೆರೆ
 
ಪ್ರಶ್ನೆ:
ನಾನು ನೆಲ ಅಂತಸ್ತಿನ ಮನೆ ಕಟ್ಟಲು 2010ರ ಮೇ ತಿಂಗಳಲ್ಲಿ ಕೆನರಾ ಬ್ಯಾಂಕ್‌ನಿಂದ ರೂ 7 ಲಕ್ಷ ಸಾಲ ಪಡೆದೆ. ನಂತರ ಒಂದನೇ ಅಂತಸ್ತನ್ನು ಕೂಡಾ ಒಂದೇ ಬಾರಿಗೆ ಹಿಡಿದ ಕೈಯಲ್ಲಿ ಮುಗಿಸಬೇಕೆಂದು ಬ್ಯಾಂಕ್ ಮ್ಯಾನೇಜರ್ ಬಳಿ ಹೋಗಿ ವಿಷಯ ತಿಳಿಸಿದೆ. ಅದಕ್ಕೆ ಅವರು ನನ್ನ ಸಂಬಳವನ್ನು ಮತ್ತೊಮ್ಮೆ ಪರಿಶೀಲಿಸಿ ರೂ 2.75 ಲಕ್ಷ ಸಾಲ ಕೊಟ್ಟರು. ಈ ಆಗಿರುವ ಸಮಸ್ಯೆ ಎಂದರೆ ಮೊದಲ ರೂ 7 ಲಕ್ಷಕ್ಕೆ   ಶೇ 9.25 ಬಡ್ಡಿ, ನಂತರ ಕೊಟ್ಟ ರೂ2.75 ಲಕ್ಷಕ್ಕೆ ಶೇ 12.25 ಬಡ್ಡಿ ಹಾಕಿರುತ್ತಾರೆ. ಇದು ಸರಿಯೇ?
 
ಎರಡಕ್ಕೂ ಸೇರಿ ಶೇ 9.25 ಏಕೆ ಹಾಕುವುದಿಲ್ಲ. ಕೆನರಾ ಬ್ಯಾಂಕ್ ಹಾಗೂ ಎಸ್‌ಬಿಐನಲ್ಲಿ ಗೃಹ ಸಾಲದ ಬಡ್ಡಿ ದರದಲ್ಲಿ ವ್ಯತ್ಯಾಸವಿದೆಯೇ? ಎಸ್‌ಬಿಐನಲ್ಲಿ ಕಡಿಮೆ ಬಡ್ಡಿಯೆಂದು ನನ್ನ ಸ್ನೇಹಿತರು ಹೇಳುತ್ತಾರೆ. ಸಾಲ ವರ್ಗಾಯಿಸಲು ಸಾಧ್ಯವೇ? ಆಗುವುದಾದರೆ ಅದಕ್ಕೆ ಎಷ್ಟು ಖರ್ಚು ಬರುತ್ತದೆ? ತಿಳಿಸಿರಿ.

ಉತ್ತರ:
ನೀವು ಕೆನರಾ ಬ್ಯಾಂಕಿನಿಂದ ಮೊದಲು ಪಡೆದ ರೂ 7 ಲಕ್ಷಕ್ಕೆ ಬಡ್ಡಿದರ ಶೇ 9.25 ಹಾಗೂ ನಂತರ ಪಡೆದ ಸಾಲ ರೂ 2.75 ಲಕ್ಷಕ್ಕೆ ಬಡ್ಡಿ ದರ ಶೇ 12.25, ಇದರಿಂದ ಗೊಂದಲಕ್ಕೀಡಾಗಿರುವುದು ಸಹಜ. ನೀವು ತಿಳಿಸಿದಂತೆ ಎರಡೂ ಸಾಲ ಒಂದುಗೂಡಿಸಿ ಶೇ 9.25 ಬಡ್ಡಿ ವಿಧಿಸಲು ಬರುವುದಿಲ್ಲ.
 
ಹಾಗೆ ಮಾಡಿದಲ್ಲಿ ಎರಡೂ ಸಾಲದ ಮೊತ್ತಕ್ಕೆ ಶೇ 12.25 ವಿಧಿಸಬೇಕಾದೀತು. ಗೃಹ ಸಾಲದಲ್ಲಿ ನಿಶ್ಚಿತ (ಫಿಕ್ಸೆಡ್) ಹಾಗೂ ಬದಲಾಗುವ (ಫ್ಲೋಟಿಂಗ್) ಎನ್ನುವ ಬಡ್ಡಿ ದರ ಇವೆ. ನೀವು ಮೊದಲು ಪಡೆದ ಸಾಲಕ್ಕೆ ಈಗಲೂ ಶೇ 9.25 ಬಡ್ಡಿ ವಿಧಿಸುತ್ತಿರುವಲ್ಲಿ ಅದನ್ನು ಹಾಗೆ ತುಂಬುತ್ತಾ ಬನ್ನಿ. ಸಾಧ್ಯವಾದರೆ ಎರಡನೇ ಸಾಲಕ್ಕೆ ಹೆಚ್ಚಿನ ಕಂತು ತುಂಬಿ ಆದಷ್ಟೂ ಬೇಗ ಮುಕ್ತಾಯಗೊಳಿಸಿರಿ.

ಎಸ್‌ಬಿಐ ಹಾಗೂ ಕೆನರಾ ಬ್ಯಾಂಕ್ ಗೃಹ ಸಾಲದ ಬಡ್ಡಿ ದರದಲ್ಲಿ ಅಲ್ಪ ವ್ಯತ್ಯಾಸ ಗಳಿರಬಹುದು. ಒಂದು ಬ್ಯಾಂಕಿನಿಂದ ಇನ್ನೊಂದು ಬ್ಯಾಂಕಿಗೆ ಸಾಲ ವರ್ಗಾಯಿಸಲು ಬರುತ್ತದೆ. ಆದರೆ ನಿಮ್ಮ ಈಗಿನ ವಿಚಾರ ವಿಮರ್ಶಿಸುವಾಗ ನೀವು ಕೆನರಾ ಬ್ಯಾಂಕಿನಲ್ಲಿ ಮುಂದುವರಿಯುವುದೇ ಲೇಸು. ಸಾಲ ವರ್ಗಾಯಿಸುವಾಗ ಪ್ರೊಸಿಸ್ಸಿಂಗ್ ಫೀ ಹಾಗೂ ಅಡಮಾನದ ಖರ್ಚು ಬೇರೆ ಬರುತ್ತದೆ. ಎಸ್‌ಬಿಐನಲ್ಲಿ ಪ್ರಥಮ ವರ್ಷ ಸ್ವಲ್ಪ ಕಡಿಮೆ ವಿಧಿಸಿದರೂ ಮುಂದಿನ ವರ್ಷಗಳಲ್ಲಿ ಬಡ್ಡಿ ಬದಲಾಗುವ ಸಾಧ್ಯತೆ ಇದೆ. ಎರಡನೇ ಸಾಲಕ್ಕೆ       ಶೇ 12.25 ವಿಧಿಸುತ್ತಿದ್ದರೂ ಬೇರೆ ಬ್ಯಾಂಕಿಗೆ ಸಾಲ ವರ್ಗಾಯಿಸುವುದು ಈ ಸಂದರ್ಭದಲ್ಲಿ ಲಾಭದಾಯಕವಲ್ಲ.

ಕೆ.ಜಿ.ಮಂಜುನಾಥ, ನಾಲೂರು(ತೀರ್ಥಹಳ್ಳಿ)
ಪ್ರಶ್ನೆ:
ನಾನೊಬ್ಬ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ. ಸಂಬಳ ರೂ 24,871. ಇನ್ನು ಒಂಬತ್ತು ವರ್ಷ ಸೇವಾವಧಿ ಇದೆ. ನಾನು ಈವರೆಗೆ ವರಮಾನ ತೆರಿಗೆಗೆ ಒಳಪಟ್ಟಿಲ್ಲ. ನಾನು ಕಳೆದ ಹಣಕಾಸು ವರ್ಷದಲ್ಲಿ ತೆರಿಗೆ ಸೆಕ್ಷನ್ 80ಸಿ ಆಧಾರದ ಮೇಲೆ ರೂ63,900 ಉಳಿತಾಯ ಮಾಡಿರುತ್ತೇನೆ. ತುಟ್ಟಿಭತ್ಯೆ ಹಾಗೂ ವಾರ್ಷಿಕ ಇನ್‌ಕ್ರಿಮೆಂಟ್‌ನಿಂದ ಮುಂದೆ ಸಂಬಳ ಹೆಚ್ಚಲಿದೆ. ನನ್ನ ಪ್ರಶ್ನೆಗಳು ಈ ಕೆಳಗಿನಂತಿವೆ.

(1) ನನ್ನ ಪತ್ನಿಯ ಎಲ್‌ಐಸಿ ಕಂತು, ಬಜಾಜ್ ಅಲಿಯನ್ಸ್ ವಿಮೆ ಹಾಗೂ ಮಕ್ಕಳ ಟ್ಯೂಷನ್ ಫೀ ಇವನ್ನು ತೆರಿಗೆ ವಿನಾಯಿತಿಗೆ ಒಳಪಡಿಸಬಹುದೇ?

(2) ವಾರ್ಷಿಕವಾಗಿ ರೂ1 ಲಕ್ಷಕ್ಕಿಂತ ಹೆಚ್ಚಿಗೆ ಉಳಿತಾಯ ಮಾಡಿದಲ್ಲಿ ತೆರಿಗೆ ಕೊಡಬೇಕಾಗುತ್ತದೆ ಎನ್ನುತ್ತಾರೆ, ಇದು ನಿಜವೇ?

(3) ಬ್ಯಾಂಕ್ ಆರ್.ಡಿ.ಯಲ್ಲಿ ಉಳಿಸಿದ ಹಣಕ್ಕೆ ತೆರಿಗೆ ವಿನಾಯಿತಿ ಸಿಗಲಿದೆಯೇ?

(4) ವಾರ್ಷಿಕವಾಗಿ ನಾನು ರೂ2,98,452 ಸಂಬಳ ಪಡೆಯುತ್ತಿದ್ದು ಅದರಲ್ಲಿ ರೂ 63,900 ಉಳಿತಾಯ ಮಾಡಿದರೆ, ಆದಾಯದಲ್ಲಿ ರೂ 2,34,552 ಉಳಿಯುತ್ತದೆ. ಇದರಲ್ಲಿ ರೂ2 ಲಕ್ಷಕ್ಕೆ ವಿನಾಯಿತಿ ಇದೆ. ಉಳಿದ ರೂ 34,552ಕ್ಕೆ ತೆರಿಗೆಯಿಂದ ವಿನಾಯಿತಿ ಪಡೆಯುವ ಮಾರ್ಗ ತಿಳಿಸಿರಿ.

ಉತ್ತರ: (1) ನೀವು ಪತ್ನಿ ಹೆಸರಿನಲ್ಲಿ ತುಂಬುವ ಎಲ್.ಐ.ಸಿ. ಕಂತು ಮತ್ತು ಇತರೆ ವಿಮಾ ಕಂತುಗಳನ್ನು ನೀವು ಆದಾಯ ತೆರಿಗೆ ವಿನಾಯಿತಿಯಲ್ಲಿ ತೋರಿಸಬಹುದು. ಮಕ್ಕಳ ಶಾಲೆ-ಕಾಲೇಜಿನ ಟ್ಯೂಷನ್ ಫೀಗೂ ತೆರಿಗೆ ರಿಯಾಯಿತಿ ಪಡೆಯಬಹುದು(ಎರಡು ಮಕ್ಕಳ ಟ್ಯೂಷನ್ ಫೀಗೆ ಈ ಸೌಲಭ್ಯ ಪಡೆಯಬಹುದು).
 
ಒಟ್ಟಿನಲ್ಲಿ ನೀವು ಈಗಾಗಲೇ ಕಟ್ಟುತ್ತಿರುವ ರೂ 63,900, ನಿಮ್ಮ ಹೆಂಡತಿ ಹೆಸರಿನಲ್ಲಿ ಕಟ್ಟುವ ವಿಮಾ ಕಂತುಗಳು ಹಾಗೂ ಮಕ್ಕಳ ಟ್ಯೂಷನ್ ಫೀ ಎಲ್ಲವೂ ಸೇರಿ, ಆದಾಯ ತೆರಿಗೆ ಸೆಕ್ಷನ್ 80ಸಿ ಅಡಿಯಲ್ಲಿ ಗರಿಷ್ಠ ರೂ ಒಂದು ಲಕ್ಷ ಉಳಿತಾಯ ಮಾಡಬಹುದು.

(2) ವಾರ್ಷಿಕವಾಗಿ ಒಂದು ಲಕ್ಷಕ್ಕಿಂತ ಹೆಚ್ಚಿಗೆ ಉಳಿತಾಯ ಮಾಡಿದರೆ ತೆರಿಗೆ ಕೊಡಬೇಕಾಗುತ್ತದೆ ಎನ್ನುವ ಮಾತು ಸತ್ಯಕ್ಕೆ ದೂರವಾದ ವಿಚಾರ. ಒಬ್ಬ ವ್ಯಕ್ತಿಯ ಒಟ್ಟು ಆದಾಯ ವಾರ್ಷಿಕವಾಗಿ ರೂ 2 ಲಕ್ಷ ದಾಟಿದಲ್ಲಿ, ಹಾಗೆ ರೂ 2 ಲಕ್ಷಕ್ಕಿಂತ ಹೆಚ್ಚಿನ ಆದಾಯಕ್ಕೆ ಮಾತ್ರ ತೆರಿಗೆ ಕೊಡಬೇಕಾಗುತ್ತದೆ. ಬಹಳಷ್ಟು ಜನರಿಗೆ ಠೇವಣಿಯ ಮೇಲಿನ ಬಡ್ಡಿ ಹೊರತುಪಡಿಸಿ ಬೇರಾವ ಆದಾಯವೂ ಇರುವುದಿಲ್ಲ. 

 ಅಂತಹ ವ್ಯಕ್ತಿಗಳ ಠೇವಣಿ ಸಹಜವಾಗಿ ರೂಒಂದು ಲಕ್ಷಕ್ಕಿಂತ ಹೆಚ್ಚಿಗೆ ಇದ್ದೇ ಇರುತ್ತದೆ. ಇಂಥ ವ್ಯಕ್ತಿಗಳೂ ಒಟ್ಟು ಬಡ್ಡಿ ಹಣ ರೂ2 ಲಕ್ಷದೊಳಗೆ ಆರ್ಥಿಕ ವರ್ಷದಲ್ಲಿ ಸ್ವೀಕರಿಸಿದಲ್ಲಿ ಆದಾಯ ತೆರಿಗೆ ಕೊಡುವ ಅವಶ್ಯವಿಲ್ಲ.

(3) ಬ್ಯಾಂಕ್ ಆರ್.ಡಿ.ಯಲ್ಲಿ ಉಳಿಸಿದ ಹಣಕ್ಕೆ ಆದಾಯ ತೆರಿಗೆ ವಿನಾಯಿತಿ ಇರುವುದಿಲ್ಲ. ಇದೇ ವೇಳೆ ಬ್ಯಾಂಕ್ ಠೇವಣಿ 5 ವರ್ಷಗಳ ಅವಧಿಗೆ, ಆದಾಯ ತೆರಿಗೆಗೆಂದೇ ಇರಿಸಿದರೆ ಆದಾಯ ತೆರಿಗೆ ಸೆಕ್ಷನ್ 80ಸಿ ಆಧಾರದ ಮೇಲೆ ಗರಿಷ್ಠ ರೂಒಂದು ಲಕ್ಷದವರೆಗೆ ಆದಾಯದಿಂದ ಕಳೆದು ತೆರಿಗೆ ಪಾವತಿಸಬೇಕು.

(4) ನಿಮ್ಮ ವಾರ್ಷಿಕ ಆದಾಯ ರೂ 2,98,452. ಉಳಿತಾಯ ರೂ 63,900. ತೆರಿಗೆ ವಿನಾಯಿತಿ ಮಿತಿ ಕಳೆದು ರೂ34,552ಕ್ಕೆ ನೀವು ಆದಾಯ ತೆರಿಗೆ ಕೊಡಬೇಕಾಗುತ್ತದೆ. ನಿಮ್ಮ ಒಂದನೇ ಪ್ರಶ್ನೆಯಂತೆ ನಿಮ್ಮ ಪತ್ನಿ ಹೆಸರಿನಲ್ಲಿ ಪಾವತಿಸಿದ ವಿಮಾ ಕಂತು ಹಾಗೂ ಎರಡು ಮಕ್ಕಳ ಸ್ಕೂಲ್ ಟ್ಯೂಷನ್ ಫೀ ಇವೆರಡನ್ನೂ ರೂ 34,552ರಲ್ಲಿ ವಜಾ ಮಾಡಿ ಉಳಿದ ಹಣಕ್ಕೆ ಬ್ಯಾಂಕಿನಲ್ಲಿ 5 ವರ್ಷಗಳ ಅವಧಿಯ ತೆರಿಗೋಸ್ಕರ ಠೇವಣಿ ಮಾಡಿರಿ. ಹೀಗೆ ಮಾಡಿದಲ್ಲಿ ನೀವು ಸಂಪೂರ್ಣ ವಿನಾಯಿತಿ ಪಡೆಯುತ್ತೀರಿ ಹಾಗೂ ತೆರಿಗೆ ಪಾವತಿಸಬೇಕಾದ ಅಗತ್ಯ ಇರುವುದಿಲ್ಲ.

ವೈ.ಎಂ.ನಂಜುಂಡಸ್ವಾಮಿ, ಯಳಂದೂರು
ಪ್ರಶ್ನೆ:
ನಾನು 78 ವರ್ಷದ ಹಿರಿಯ ನಾಗರಿಕ. ಯಳಂದೂರಿನಲ್ಲಿ ನನ್ನ ಕಟ್ಟಡವೊಂದನ್ನು ಎಸ್.ಬಿ.ಎಂ. ಶಾಖೆಗೆ ಬಾಡಿಗೆಗೆ ಕೊಟ್ಟು ತಿಂಗಳಿಗೆ ರೂ 10,440 ಬಾಡಿಗೆ ಪಡೆಯುತ್ತಿದ್ದೇನೆ.ರೂ 10,000ಕ್ಕೂ ಹೆಚ್ಚಿನ ಬಾಡಿಗೆ ಕೊಡುವಾಗ ವಾರ್ಷಿಕವಾಗಿ ಶೇ 10ರಷ್ಟನ್ನು ಬಾಡಿಗೆಯಲ್ಲಿ ಮುರಿದು ಆದಾಯ ತೆರಿಗೆ ಇಲಾಖೆಗೆ ರವಾನಿಸಬೇಕು ಎಂಬುದಾಗಿ ಬ್ಯಾಂಕಿನವರು ತಿಳಿಸಿದ್ದಾರೆ.

ನಾನು ಆದಾಯ ತೆರಿಗೆ ಪಾವತಿದಾರನಲ್ಲ. ನನಗೆ ಬೇರಾವ ಮೂಲದಿಂದಲೂ ಆದಾಯವಿಲ್ಲ. ಹಾಗಾಗಿ ಬಾಡಿಗೆಯಿಂದ ಮುರಿದುಕೊಂಡಿರುವ ಹಣವನ್ನು ಆದಾಯ ತೆರಿಗೆ ಕಚೇರಿಯಿಂದ ವಾಪಸ್ ಪಡೆಯುವ ವಿಧಾನ ತಿಳಿಸಿರಿ.

ಉತ್ತರ: ಎಸ್.ಬಿ.ಎಂ. ನವರು ತಮಗೆ ತಿಳಿಸಿದ ವಿಚಾರ ಕಾನೂನುಬದ್ಧವಾಗಿಯೇ ಇದೆ. ಬಾಡಿಗೆಯಲ್ಲಿ ಶೇ 10 ಮುರಿದು (ಮೂಲದಲ್ಲಿಯೇ ತೆರಿಗೆ ಕಡಿತ) ಆದಾಯ ತೆರಿಗೆ ಇಲಾಖೆಗೆ ಹಣ ಕಳಿಸುವುದು ಅವರ ಜವಾಬ್ದಾರಿ ಕೂಡಾ.

ನಿಮ್ಮ ಹೇಳಿಕೆಯಂತೆ ನೀವು ಹಿರಿಯ ನಾಗರಿಕರಾಗಿದ್ದು, ನಿಮಗೆ ಬೇರಾವ ಆದಾಯವೂ ಇಲ್ಲದೇ ಇರುವುದರಿಂದ ಹಾಗೂ ನಿಮ್ಮ ವಾರ್ಷಿಕ ಆದಾಯ ರೂ 2.5 ಲಕ್ಷದೊಳಗೇ ಇರುವುದರಿಂದ, ನೀವು ಆದಾಯ ತೆರಿಗೆ ಪಾವತಿಸಬೇಕಾಗಿ ಬರುವುದಿಲ್ಲ. ಇದು ಕೂಡಾ ಕಾನೂನುಬದ್ಧ ವಿಚಾರವೆ ಆಗಿದೆ.
 
ಕಡಿತವಾಗಿರುವ ಬಾಡಿಗೆ ಹಣ ವಾಪಸ್ ಪಡೆಯಲು, ಬ್ಯಾಂಕಿನಿಂದ ವರ್ಷದ ಲೆಕ್ಕದ ಒಂದು ಸರ್ಟಿಫಿಕೇಟ್ ಪಡೆದು, ಜುಲೈ ಅಂತ್ಯದೊಳಗೆ ಐ.ಟಿ.ಆರ್.ನ ಅರ್ಜಿ ನಮೂನೆ ತುಂಬಿ, ಆದಾಯ ತೆರಿಗೆ ಇಲಾಖೆಗೆ ತೆರಿಗೆ ರಿಪೋರ್ಟ್ ಸಲ್ಲಿಸಬೇಕು. ಅವರು ಹೀಗೆ ಮುರಿದುಕೊಂಡ ಹಣವನ್ನು ವಾಪಾಸ್ (ರಿಫಂಡ್) ಕೊಡುತ್ತಾರೆ.

ಇದೇ ವೇಳೆ ನೀವು ನಿಮ್ಮ ವಲಯದ ಆದಾಯ ತೆರಿಗೆ ಅಧಿಕಾರಿಯನ್ನು ಭೇಟಿಯಾಗಿ, ಕಳೆದ ಮೂರು ವರ್ಷಗಳ ಆದಾಯದ ಪುರಾವೆ ತೋರಿಸಿ, ನೀವು ಆದಾಯ ತೆರಿಗೆ ಮಿತಿಯೊಳಗೇ ಇರುವುದನ್ನು ಅವರಿಗೆ ಮನದಟ್ಟು ಮಾಡಿಕೊಟ್ಟರೆ ಬಾಡಿಗೆಯಲ್ಲಿ ತೆರಿಗೆ ಬಾಬ್ತು ಹಣ ಮುರಿದುಕೊಳ್ಳದಂತೆ ಅವರು ಬ್ಯಾಂಕಿಗೆ ಪತ್ರ ಕೊಡುತ್ತಾರೆ.

ಇವೆರಡು ದಾರಿಗಳಲ್ಲಿ ಯಾವುದು ಸುಲಭ ಅಥವಾ ಅನುಕೂಲ ಎಂಬುದನ್ನು ನಿರ್ಧರಿಸಿ ಮುಂದಿನ ಕ್ರಮ ಕೈಗೊಳ್ಳಿರಿ. ಒಟ್ಟಿನಲ್ಲಿ ನೀವು ವಾರ್ಷಿಕವಾಗಿ ಪಡೆಯುವ ಬ್ಯಾಂಕ್ ಕಟ್ಟಡದ ಬಾಡಿಗೆ     ರೂ 1,25,280. ಹಿರಿಯ ನಾಗರಿಕರಾಗಿರುವುದು ಹಾಗೂ ಬೇರಾವ ಆದಾಯ ಇರದೇ ಇರುವುದರಿಂದ ನಿಮಗೆ ಬರುವ ಬಾಡಿಗೆ ಹಣಕ್ಕೆ ಆದಾಯ ತೆರಿಗೆ ಪಾವತಿಸಬೇಕಿಲ್ಲ.

ಜಯರಾಜ್, ಚಿಕ್ಕಮಗಳೂರು

 ಹಣ, ತೆರಿಗೆ ಸಮಸ್ಯೆಗೆ ಪರಿಹಾರ

ಓದುಗರು ಹಣಕಾಸು ವಹಿವಾಟಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪತ್ರದಲ್ಲಿ ಬರೆದು ಕಳುಹಿಸಿ ಪರಿಣತರಿಂದ ಸೂಕ್ತ ಉತ್ತರ ಪಡೆಯಬಹುದು. ಪ್ರಶ್ನೆಗಳನ್ನು ಕಳಿಸುವ ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ ಪ್ರಜಾವಾಣಿ, ನಂ. 75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು- 560 001.
ಇ-ಮೇಲ್ ವಿಳಾಸಕ್ಕೂ ಕಳುಹಿಸಬಹುದು.
businessdesk@ prajavani.co.in              - ಸಂ

ADVERTISEMENT

ಪ್ರಶ್ನೆ: ಪಿ.ಎ.ಸಿ.ಎಲ್. ಇಂಡಿಯ ಲಿ. ಜೈಪುರ ಎನ್ನುವ ಕಂಪೆನಿಯೊಂದಿದೆಯಂತೆ. ಈ ಕಂಪೆನಿ ಭೂಮಿ ವ್ಯವಹಾರ ಮಾಡುತ್ತಿದೆಯಂತೆ. ನನ್ನ ಸ್ನೇಹಿತರೊಬ್ಬರು ಈ ಕಂಪೆನಿಯ ಏಜಂಟರು. `ಈ ಕಂಪೆನಿಯಲ್ಲಿ ಹಣ ಹಾಕಿದರೆ 6 ವರ್ಷಗಳಲ್ಲಿ ದ್ವಿಗುಣವಾಗುತ್ತದೆ, ಹಣ ಹೂಡಿ~ ಎಂದು ನನ್ನ ಸ್ನೇಹಿತರು ಹೇಳುತ್ತಾರೆ. ಇದು ನಿಜವೇ? ನಾನು ಹಣ ಹೂಡಬಹುದೇ?

ಉತ್ತರ: ಪಿ.ಎ.ಸಿ.ಎಲ್. ಇಂಡಿಯ ಕಂಪೆನಿಯವರು ಪ್ರಾಯಶಃ ಠೇವಣಿ ಸ್ವೀಕರಿಸುತ್ತಿರ ಬಹುದು. ಅವರ ಪ್ರಕಾರ ಠೇವಣಿ 6 ವರ್ಷಗಳಲ್ಲಿ ದ್ವಿಗುಣವಾಗುತ್ತದೆ. ಖಾಸಗಿ ಕಂಪೆನಿಗಳು ಜನರಿಂದ ಠೇವಣಿ ಸಂಗ್ರಹಿಸಿ ವಹಿವಾಟು ಮಾಡಿ ಲಾಭ ಗಳಿಸಿದರೆ ಜನರಿಂದ ಪಡೆದ ಹಣ ಬಡ್ಡಿ ಸಮೇತ ವಾಪಸ್ ಕೊಡುತ್ತಾರೆ.

ಇಲ್ಲಿ ತೊಡಗಿಸಿದ ಹಣಕ್ಕೆ ಭದ್ರತೆ ಇರುವುದಿಲ್ಲ. ಬಹಳಷ್ಟು ಕಂಪೆನಿಗಳು ಉತ್ತಮ ವ್ಯವಹಾರ ಮಾಡುತ್ತಿದ್ದು, ಜನರ ಠೇವಣಿ ಸಮಯಕ್ಕೆ ಹಿಂತಿರುಗಿಸುತ್ತಿದ್ದರೂ ದೇಶದ ಆರ್ಥಿಕ ಪರಿಸ್ಥಿತಿ, ರಾಜಕೀಯ ಬೆಳವಣಿಗೆ ಹಾಗೂ ನೀವು ಠೇವಣಿ ಇರಿಸುವ ಕಂಪೆನಿಯ ಆಡಳಿತ ವೈಖರಿ ಇವುಗಳ ಮೇಲೆ ನಿಮ್ಮ ಠೇವಣಿಯ ಭವಿಷ್ಯ ಆಧರಿಸಿದೆ.

ಇಂತಹ ಕಂಪೆನಿಗಳು ಕಮಿಷನ್ ಆಧಾರದ ಮೇಲೆ ಏಜಂಟರನ್ನು ನೇಮಿಸುತ್ತವೆ. ವಾಸ್ತವಿಕವಾಗಿ ಏಜಂಟರಿಗೂ ಸರಿಯಾದ ಮಾಹಿತಿ ಇರುವುದಿಲ್ಲ. ಮೇಲೆ ತಿಳಿಸಿದಂತೆ ಠೇವಣಿಗೆ ಭದ್ರತೆ ಇರುವುದಿಲ್ಲ. ನಿಮ್ಮ ಏಜಂಟರು ತಿಳಿಸಿದಂತೆ, ಠೇವಣಿ 6 ವರ್ಷಗಳಲ್ಲಿ ದ್ವಿಗುಣವಾಗಲೂಬಹುದು, ಆಗದೇ ಇರಲೂಬಹುದು. ಜನಸಾಮಾನ್ಯರಿಗೆ ಕಂಟಕ ರಹಿತ ಠೇವಣಿ ಎಂದರೆ ಬ್ಯಾಂಕ್ ಹಾಗೂ ಅಂಚೆ ಕಚೇರಿ ಯೋಜನೆ.

ಪಿ.ಎ.ಸಿ.ಎಲ್. ಇಂಡಿಯದಲ್ಲಿ ಹಣ ಹೂಡಬೇಕೇ-ಬೇಡವೇ ಎಂಬುದನ್ನು ನೀವು-ನಿಮ್ಮ ಕುಟುಂಬದವರು ಒಟ್ಟಿಗೆ ಕುಳಿತು ಸುದೀರ್ಘ ಚರ್ಚೆ ಮಾಡಿ ನಿರ್ಧರಿಸಿರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.