ಕೋಲ್ಕತ್ತ (ಐಎಎನ್ಎಸ್): ಕೇಂದ್ರ ಸರ್ಕಾರ ನೀಡಿರುವ ಸಾಲಗಳ ಬಡ್ಡಿ ಪಾವತಿ ಅವಧಿಯನ್ನು ಮೂರು ವರ್ಷಗಳ ಕಾಲ ವಿಸ್ತರಿಸುವಂತೆ ಕೇಂದ್ರದ ಮುಂದಿಟ್ಟಿರುವ ಬೇಡಿಕೆಯನ್ನು ಈಡೇರಿಸದೇ ಇದ್ದರೆ, ಪಕ್ಷದ ಸಂಸತ್ ಸದಸ್ಯರು ಮತ್ತು ಮುಖಂಡರು ದೆಹಲಿಗೆ ತೆರಳಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಎಚ್ಚರಿಸಿದ್ದಾರೆ.
`ಒಂದು ವೇಳೆ ಕೇಂದ್ರ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ, ನಾವು ತಲೆ ಬಾಗುವುದಿಲ್ಲ. ಬೇಡಿಕೆಯನ್ನು ಹೇಗೆ ಈಡೇರಿಸಿಕೊಳ್ಳಬೇಕು ಎಂಬುದು ಬಂಗಾಳಕ್ಕೆ ಗೊತ್ತಿದೆ. ಒಂದು ವರ್ಷದ ಅವಧಿಯಲ್ಲಿ ಕನಿಷ್ಠ 50 ಸಲವಾದರೂ ನಾವು ಎದುರಿಸುತ್ತಿರುವ ಸಮಸ್ಯೆಯನ್ನು ಕೇಂದ್ರದ ಮುಂದೆ ಪ್ರಸ್ತಾಪಿಸಿದ್ದೇವೆ~ ಎಂದು ಬ್ಯಾನರ್ಜಿ ಕೋಲ್ಕತ್ತದಲ್ಲಿ ನಡೆದ ರ್ಯಾಲಿಯೊಂದರಲ್ಲಿ ತಿಳಿಸಿದರು.
`ವಾರ್ಷಿಕವಾಗಿ ರಾಜ್ಯವು 22,000 ಕೋಟಿ ಗಳಿಸಿದರೆ, ಸಾಲ ಮರುಪಾವತಿಗಾಗಿಯೇ 25,000 ಕೋಟಿ ತೆರುತ್ತಿದೆ. ಇದು ನಮ್ಮ ತಪ್ಪಲ್ಲ. ಈ ಹಿಂದಿನ ಎಡಪಕ್ಷಗಳ ಸರ್ಕಾರವು ಭಾರಿ ಪ್ರಮಾಣದಲ್ಲಿ ಸಾಲ ಪಡೆಯಲು ಕೇಂದ್ರ ಸರ್ಕಾರ ಅವಕಾಶ ನೀಡಿತ್ತು~ ಎಂದು ಬ್ಯಾನರ್ಜಿ ಆರೋಪಿಸಿದರು.
ಬಂಗಾಳವನ್ನು ಕಡೆಗಣಿಸಬೇಡಿ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ ಬ್ಯಾನರ್ಜಿ, `ಅಗತ್ಯ ಬಿದ್ದರೆ ಬಂಗಾಳದ ಜನತೆ `ದೆಹಲಿ ಚಲೋ~ ಚಳವಳಿಗೆ ಕರೆ ನೀಡಲಿದೆ~ ಎಂದೂ ಎಚ್ಚರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.