ನವದೆಹಲಿ (ಪಿಟಿಐ): ಭಾರತೀಯ ರಿಸರ್ವ್ ಬ್ಯಾಂಕ್ ಅನುಸರಿಸುತ್ತಿರುವ (ಆರ್ಬಿಐ) ಬಿಗಿ ಹಣಕಾಸು ನೀತಿ ಮತ್ತು ಜಾಗತಿಕ ಆರ್ಥಿಕ ಅಸ್ಥಿರತೆ ದೇಶದ ಆರ್ಥಿಕ ಪ್ರಗತಿಯ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಹೇಳಿದ್ದಾರೆ.
ಆರ್ಥಿಕ ವೃದ್ಧಿ ದರವು (ಜಿಡಿಪಿ) ಎರಡಂಕಿಗೆ ಮರಳುವ ಅಗತ್ಯ ಇದೆ ಎಂದು ಅವರು ಇಲ್ಲಿ ನಡೆದ ಭಾರತೀಯ ವಾಣಿಜ್ಯೋದ್ಯಮ ಮಹಾಸಂಘದ (ಅಸೋಚಾಂ) ಸಭೆಯಲ್ಲಿ ಅಭಿಪ್ರಾಯಟ್ಟರು.
`ಜಿಡಿಪಿ~ ದರವು ಹಣಕಾಸು ವರ್ಷದ ಅಂತ್ಯಕ್ಕೆ ಮೂರು ವರ್ಷಗಳ ಹಿಂದಿನ ಮಟ್ಟ ಶೇ 6.9ಕ್ಕೆ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಅಂಕಿ ಅಂಶಗಳ ಇಲಾಖೆ ಹೇಳಿದೆ. ಆದರೆ, ಈ ಕುಸಿತ ತಾತ್ಕಾಲಿಕ. ಮುಂಬರುವ ವರ್ಷಗಳಲ್ಲಿ `ಜಿಡಿಪಿ~ ಗಣನೀಯ ಏರಿಕೆ ಕಾಣಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಿಆರ್ಆರ್ ಕಡಿತ: `ಆರ್ಬಿಐ~ ಮಧ್ಯಂತರ ತ್ರೈಮಾಸಿಕ ಹಣಕಾಸು ಪರಾಮರ್ಶೆಯನ್ನು ಮಾರ್ಚ್15 ರಂದು ಪ್ರಕಟಿಸಲಿದ್ದು, ಅಲ್ಪಾವಧಿ ಬಡ್ಡಿ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡು, ಮತ್ತೊಮ್ಮೆ ನಗದು ಮೀಸಲು ಅನುಪಾತ (ಸಿಆರ್ಆರ್) ಕಡಿತಗೊಳಿಸಬಹುದು ಎಂದು ತಜ್ಞರು ಹೇಳಿದ್ದಾರೆ.
`ಆರ್ಬಿಐ~ ಇನ್ನಷ್ಟು ದಿನಗಳ ಕಾಲ ಬಿಗಿ ವಿತ್ತೀಯ ಧೋರಣೆಯನ್ನೇ ಮುಂದುವರೆಸಲಿದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಮಾರುಕಟ್ಟೆಗೆ ಇನ್ನಷ್ಟು ಬಂಡವಾಳ ಹರಿದು ಬರಬೇಕಿದೆ. ಈ ಹಿನ್ನೆಲೆಯಲ್ಲಿ `ಸಿಆರ್ಆರ್~ ಕಡಿತಗೊಳಿಸುವ ಕುರಿತು ಪರಿಶೀಲಿಸುತ್ತಿದ್ದೇವೆ ಎಂದು ಡೆಪ್ಯುಟಿ ಗವರ್ನರ್ ಸುಭೀರ್ ಗೋಕರ್ಣ ಹೇಳಿದ್ದಾರೆ.
ಹಣದುಬ್ಬರ ಇಳಿಕೆ ಕಂಡರೂ, ಕೂಡಲೇ ಅಲ್ಪಾವಧಿ ಬಡ್ಡಿ ದರ ಇಳಿಕೆಗೆ `ಆರ್ಬಿಐ~ ಮುಂದಾಗುವುದಿಲ್ಲ. ಇನ್ನಷ್ಟು ದಿನಗಳು ಕಾದ ಬಳಿಕ ರೆಪೊ ಮತ್ತು ರಿವರ್ಸ್ ರೆಪೊ ದರ ತಗ್ಗಿಸಬಹುದು ಎಂದೂ ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.