ADVERTISEMENT

ಮಳಿಗೆ ತೆರೆದ ಚಿನ್ನಾಭರಣ ವರ್ತಕರು

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2012, 19:30 IST
Last Updated 7 ಏಪ್ರಿಲ್ 2012, 19:30 IST

ನವದೆಹಲಿ (ಪಿಟಿಐ): ಬ್ರಾಂಡ್ ರಹಿತ ಆಭರಣಗಳ ಮೇಲೆ ಅಬಕಾರಿ ಸುಂಕ ವಿಧಿಸುವ ಸರ್ಕಾರದ ನಿರ್ಧಾರವನ್ನು ಹಿಂದೆ ಪಡೆಯುವಂತೆ ಆಗ್ರಹಿಸಿ 21 ದಿನಗಳಿಂದ ನಡೆಸುತ್ತಿದ್ದ ಮುಷ್ಕರವನ್ನು ಚಿನ್ನಾಭರಣ ವರ್ತಕರು ಶುಕ್ರವಾರ ಹಿಂದೆ ಪಡೆದ ಹಿನ್ನೆಲೆಯಲ್ಲಿ ಶನಿವಾರ ದೇಶದಾದ್ಯಂತ ಬಹುಪಾಲು ವರ್ತಕರು ಮಳಿಗೆಗಳನ್ನು ತೆರೆದು ವಹಿವಾಟು ನಡೆಸಿದರು.

ಬೇಡಿಕೆಯನ್ನು ಪರಿಶೀಲಿಸುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ಚಿನ್ನಾಭರಣ ವರ್ತಕರು ಪ್ರತಿಭಟನೆಯನ್ನು ಶುಕ್ರವಾರ ಕೈ ಬಿಟ್ಟಿದ್ದರು.`ದೇಶದ ಹೆಚ್ಚಿನ ಎಲ್ಲಾ ಆಭರಣ ಮಳಿಗೆಗಳು ಶನಿವಾರ ತೆರೆದಿವೆ~ ಎಂದು ಅಖಿಲ ಭಾರತ ಸರಾಫ್ ಒಕ್ಕೂಟದ ಅಧ್ಯಕ್ಷ ಶೀಲ್ ಚಂದ್ ಜೈನ್ ಹೇಳಿದ್ದಾರೆ.

ಮುಂಬೈನ ಝವೇರಿ ಬಜಾರ್ ಮತ್ತು ದೆಹಲಿಯ ಚಾಂದನಿ ಚೌಕ್ ಸೇರಿದಂತೆ ದೇಶದ  ಪ್ರಮುಖ ಮಹಾ ನಗರಗಳ ಎಲ್ಲಾ ಚಿನಿವಾರ ಪೇಟೆಗಳಲ್ಲಿ ಶನಿವಾರ ಎಂದಿನಂತೆ ವಹಿವಾಟು ಆರಂಭವಾಗಿದೆ.

`ಸಾಕಷ್ಟು ದಾಸ್ತಾನು ಇದೆ~

ಮುಂಬೈ (ಪಿಟಿಐ): ಇಪ್ಪತ್ತೊಂದು ದಿನಗಳ ಕಾಲ ಆಭರಣ ಮಳಿಗೆಗಳು ಮುಚ್ಚಿದ್ದ ಹಿನ್ನೆಲೆಯಲ್ಲಿ ಈಗ ಗ್ರಾಹಕರಿಂದ ಬರುವ ಬೇಡಿಕೆಯನ್ನು ಪೂರೈಸಲು ಅಗತ್ಯವಾದ ಚಿನ್ನದ ದಾಸ್ತಾನು ಇದೆ ಎಂದು ಮುಂಬೈ ಚಿನ್ನಾಭರಣ ವರ್ತಕರ ಒಕ್ಕೂಟ  ಹೇಳಿದೆ.

ಬಂಗಾರದ ದಾಸ್ತಾನು ಸಾಕಷ್ಟು ಇರುವುದರಿಂದ ಚಿನ್ನದ ಆಮದು ಪ್ರಮಾಣ ಏರಿಕೆಯಾಗುವ ಸಾಧ್ಯತೆ ಇಲ್ಲ ಎಂದು ಹೇಳಿದೆ.`21 ದಿನಗಳ ಪ್ರತಿಭಟನೆಯ ಅವಧಿಯಲ್ಲಿ ಚಿನ್ನದ ತಯಾರಿಕೆ ಪ್ರಕ್ರಿಯೆ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಆದ್ದರಿಂದ 5-10ಟನ್‌ಗಳಷ್ಟು ಚಿನ್ನದ ದಾಸ್ತಾನು ಇದೆ.

ಗ್ರಾಹಕರಿಂದ ಬರುವ ಬೇಡಿಕೆ ಪೂರೈಸಲು ಇದನ್ನು ಬಳಸಲಾಗುವುದು. ಹೀಗಾಗಿ ಚಿನ್ನದ ಆಮದು ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆ ಇಲ್ಲ~ ಎಂದು ಮುಂಬೈ ಚಿನ್ನಾಭರಣ ವರ್ತಕರ ಒಕ್ಕೂಟದ ಅಧ್ಯಕ್ಷ ಪೃಥ್ವಿರಾಜ್ ಕೊಠಾರಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.