ಟಬ್ರಿಜ್/ ಇರಾನ್ (ಪಿಟಿಐ): ಬ್ಯಾಂಕಿಂಗ್ ಮತ್ತು ತೆರಿಗೆಗೆ ಸಂಬಂಧಿಸಿದ ಮಾಹಿತಿ ವಿನಿಮಯಕ್ಕೆ `ಜಿ-20~ ದೇಶಗಳ ಹಣಕಾಸು ಸಚಿವರು ಬದ್ಧವಾಗಿರುವುದು ಮಹತ್ವದ ಸಾಧನೆಯಾಗಿದೆ ಎಂದು ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅಭಿಪ್ರಾಯಪಟ್ಟಿದ್ದಾರೆ.
ಭಾರತ ವ್ಯಕ್ತಪಡಿಸಿದ್ದ ಕಳವಳಕ್ಕೆ `ಜಿ-20~ ದೇಶಗಳ ಹಣಕಾಸು ಸಚಿವರು ಸ್ಪಂದಿಸಿರುವುದು ಕಂಡು ತಮಗೆ ಸಂತಸ ವಾಗಿದೆ. ಈ ವಿಷಯವು ನವೆಂಬರ್ 3ರಿಂದ ಕಾನ್ಸ್ನಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಮಂಡನೆಯಾಗಲಿದೆ ಎಂದೂ ಅವರು ಆಶಾವಾದ ವ್ಯಕ್ತಪಡಿಸಿದ್ದಾರೆ.
ಭಾರತದ ದೃಷ್ಟಿಕೋನದಿಂದ ನೋಡಿದರೆ, ಬ್ಯಾಂಕಿಂಗ್ ವಹಿವಾಟು ಮತ್ತು ತೆರಿಗೆಗೆ ಸಂಬಂಧಿಸಿದ ಮಾಹಿತಿ ವಿನಿಮಯಕ್ಕೆ `ಜಿ-20~ ದೇಶಗಳು ಸಮ್ಮತಿಸಿರುವುದು ಮಹತ್ವದ ಸಾಧನೆಯಾಗಿದೆ ಎಂಬುದು ಪ್ರಣವ್ ಅವರ ಅಭಿಮತವಾಗಿದೆ. ಪ್ಯಾರಿಸ್ನಲ್ಲಿ ನಡೆದ `ಜಿ-20~ ದೇಶಗಳ ಹಣಕಾಸು ಸಚಿವರ ಮತ್ತು ಕೇಂದ್ರೀಯ ಬ್ಯಾಂಕ್ಗಳ ಗವರ್ನರ್ಗಳ ಎರಡು ದಿನಗಳ ಸಮಾವೇಶದಲ್ಲಿ ಪ್ರಣವ್ ಭಾಗವಹಿಸಿದ್ದರು.
ಬ್ಯಾಂಕಿಂಗ್ ಮತ್ತು ತೆರಿಗೆಗೆ ಸಂಬಂಧಿಸಿದಂತೆ ದೇಶ - ದೇಶಗಳ ಮಧ್ಯೆ ಸಮಗ್ರ ಮಾಹಿತಿ ವಿನಿಮಯ ನಡೆಯಬೇಕು. `ಜಿ-20~ ದೇಶಗಳು ಸ್ವಇಚ್ಛೆಯಿಂದ ಮಾಹಿತಿ ವಿನಿಮಯಕ್ಕೆ ಮುಂದಾಗಬೇಕು ಎಂದೂ ಪ್ರಣವ್ ಬಲವಾಗಿ ಪ್ರತಿಪಾದಿಸಿದ್ದರು.ಸರಕುಗಳ ಬೆಲೆ ಏರಿಳಿತ, ಕರೆನ್ಸಿ ಸಮರ ಮತ್ತು ತೆರಿಗೆ ಕುರಿತ ಚರ್ಚೆಯನ್ನು ಮೆಕ್ಸಿಕೊದಲ್ಲಿ ನಡೆಯಲಿರುವ ಸಚಿವರ ಸಭೆಗೆ ಶಿಫಾರಸು ಮಾಡದಿರುವ ಬಗ್ಗೆಯೂ ಪ್ರಣವ್ ಅತೃಪ್ತಿ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.