ಮಾರುತಿ: 500 ಕಾರ್ಮಿಕರಿಗೆ ನೋಟಿಸ್-ನೌಕರಿ ನಷ್ಟ ಸಂಭವ
ನವದೆಹಲಿ(ಪಿಟಿಐ): ಕಾರ್ಮಿಕರ ಗಲಭೆ ಕಾರಣದಿಂದಾಗಿ ನಾಲ್ಕು ವಾರಗಳಿಂದ ಬೀಗಮುದ್ರೆಗೊಳಗಾಗಿದ್ದ ಮಾರುತಿ ಸುಜುಕಿ ಇಂಡಿಯ (ಎಂಎಸ್ಐ)ದ ಮಾನೇಸರ್ ಘಟಕ, ಇದೇ 21ರಿಂದ ಕಾರು ತಯಾರಿಕೆಯನ್ನು ಪುನಃ ಆರಂಭಿಸಲಿದೆ.
`ಆಗಸ್ಟ್ 21ರಂದು ಬೀಗಮುದ್ರೆ ತೆಗೆದು ಕಾರು ತಯಾರಿಕೆ ಆರಂಭಿಸಲಾಗುವುದು~ ಎಂದು ಎಂಎಸ್ಐ ಅಧ್ಯಕ್ಷ ಆರ್.ಸಿ.ಭಾರ್ಗವ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.
ಗಲಭೆಗೆ ಸಂಬಂಧಿಸಿ ಕಾರ್ಮಿಕರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುತ್ತಿದ್ದು, 500 ಕಾರ್ಮಿಕರಿಗೆ ನೋಟಿಸ್ ನೀಡಲಾಗಿದೆ ಎಂದರು.
ಕಂಪೆನಿಯ ಹಿರಿಯ ಅಧಿಕಾರಿಯೊಬ್ಬರ ಹತ್ಯೆ ಮತ್ತು 100 ಮಂದಿ ಗಾಯಗೊಳ್ಳಲು ಕಾರಣವಾದ ಜುಲೈ 18ರ ಕಾರ್ಮಿಕ ಗಲಭೆ ಸಂಬಂಧ 500 ಮಂದಿ ಕಾಯಂ ನೌಕರರನ್ನು ಕೆಲಸದಿಂದ ತೆಗೆದುಹಾಕುವ ಸಂಬಂಧ ನೋಟಿಸ್ ನೀಡಲಾಗಿದೆ.
ಇನ್ನೊಂದೆಡೆ ಹರ್ಯಾಣ ಪೊಲೀಸರು, ಗಲಭೆಗೆ ಸಂಬಂಧಿಸಿ ಕಾರ್ಮಿಕ ಸಂಘದ ಹತ್ತು ಮುಖಂಡರು ಸೇರಿದಂತೆ ಈವರೆಗೆ 114 ಮಂದಿಯನ್ನು ಬಂಧಿಸಿದ್ದಾರೆ.
ಮಾನೇಸರ್ ಘಟಕ: ಇಲ್ಲಿ ಬಹಳ ಜನಪ್ರಿಯ ಮಾದರಿಗಳಾದ ಸ್ವಿಫ್ಟ್, ಡಿಜೈರ್ ಮತ್ತು ಎಸ್ಎಕ್ಸ್4 ಹಾಗೂ ಎ-ಸ್ಟಾರ್ ಸೇರಿದಂತೆ ವಾರ್ಷಿಕ 5.5 ಲಕ್ಷ ಕಾರುಗಳನ್ನು ತಯಾರಿಸಲಾಗುತ್ತದೆ. ಈ ಘಟಕದಲ್ಲಿ 1600 ಮಂದಿ ಕಾಯಂ ಸಿಬ್ಬಂದಿ ಸೇರಿದಂತೆ ಒಟ್ಟು 3000ಕ್ಕೂ ಅಧಿಕ ಕಾರ್ಮಿಕರಿದ್ದಾರೆ. ಜತೆಗೆ ಆಡಳಿತ ವಿಭಾಗದಲ್ಲಿ 700 ನೌಕರರೂ ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.