ADVERTISEMENT

ಮಾರುಕಟ್ಟೆ ಸುಧಾರಣೆ: ಕೊಬ್ಬರಿ ಬೆಲೆ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2010, 12:15 IST
Last Updated 19 ಡಿಸೆಂಬರ್ 2010, 12:15 IST

ತಿಪಟೂರು: ವ್ಯಾಪಕ ಸುಧಾರಣೆ ಕ್ರಮಗಳ ಮೂಲಕ ಇಲ್ಲಿನ ಎಪಿಎಂಸಿ ಮಾದರಿ ಹೆಜ್ಜೆ ಇಟ್ಟಿದೆ. ಕೊಬ್ಬರಿ ಧಾರಣೆ ದಿಢೀರ್ ಏರಿಕೆಯಿಂದ ಇಲ್ಲಿನ ರೈತ ಸಮುದಾಯದಲ್ಲಿ ಅಪರೂಪದ ಹರ್ಷ ಕಾಣುತ್ತಿದೆ. ಅತಿ ದೊಡ್ಡ ಕೊಬ್ಬರಿ ಮಾರುಕಟ್ಟೆಯಾದ ಇಲ್ಲಿನ ಎಪಿಎಂಸಿ ಕಚೇರಿ ಹಿಂದೆಲ್ಲಾ ಸಂತೆ ದಿನಗಳಾದ ಬುಧವಾರ ಮತ್ತು ಶನಿವಾರ ಕೂಡ ಬಿಕೋ ಎನ್ನುತ್ತಿತ್ತು. ಈಗ ಪರಿಸ್ಥಿತಿ ಬದಲಾಗಿದ್ದು, ಆ ಕಚೇರಿ ನಮ್ಮದು ಎಂಬ ಭಾವ ರೈತರಲ್ಲಿ ಬಂದಿದೆ. ಕೊಬ್ಬರಿ ಹರಾಜು ಸಂದರ್ಭದಲ್ಲಿ ಕಚೇರಿ ಮುಂದೆ, ಒಳಗೆ ರೈತರ ಸದ್ದು ಕೇಳಿಸುತ್ತಿದೆ. ಒಂದು ರೀತಿಯಲ್ಲಿ ಎಪಿಎಂಸಿಗೆ ಈಗ ಜೀವಕಳೆ ಬಂದಿದೆ.

ಇಲ್ಲಿನ ಎಪಿಎಂಸಿಗೆ ಕೆಲ ತಿಂಗಳ ಹಿಂದೆ ಕಾರ್ಯದರ್ಶಿಯಾಗಿ ಬಂದ ನ್ಯಾಮನಗೌಡ ಅವರ ಕಟ್ಟುನಿಟ್ಟು ಕ್ರಮಗಳಿಂದ ಎಲ್ಲ ಪ್ರಕ್ರಿಯೆಗಳು ಮಾದರಿ ರೂಪಾಂತರಗೊಂಡಿವೆ. ಒಂದೇ ಒಂದು ಚೀಲವೂ ಮಾರುಕಟ್ಟೆಯಿಂದ ಅನಧಿಕೃತವಾಗಿ ರವಾನೆಯಾಗದಂತೆ ತಡೆ ಬಿದ್ದಿದೆ. ಇನ್ನು ಮಾರುಕಟ್ಟೆಗೆ ಬರುವ ರೈತರ ಪ್ರತಿ ಚೀಲದ ಲೆಕ್ಕವೂ ಪ್ರವೇಶ ದ್ವಾರದ ಕಂಪ್ಯೂಟರ್‌ನಲ್ಲಿ ದಾಖಲಾಗುತ್ತದೆ. ಆ ರೈತರ ಮಾಲನ್ನು ಯಾವ ಕಮಿಷನ್ ಏಜೆಂಟ್ ಅಂಗಡಿಗೆ ಬಿಡುವುದು ಎನ್ನುವುದು ಕೂಡ ನಮೂದಾಗುತ್ತದೆ. ಟೆಂಡರ್‌ಗೆ ಬಿಡಲು ಒಪ್ಪಿದರೆ ಅದೂ ಕೂಡ ನಮೂದಾಗಿ ವಿವರವಿರುವ ವಿನೂತನ ಚೀಟಿಯೊಂದು ರೈತರ ಕೈಗೆ ಸಿಗುತ್ತದೆ.

ಇ-ಟೆಂಡರ್: ಮೊದಲಿನಂತೆ ಕಮಿಷನ್ ಏಜೆಂಟರು ಟೆಂಡರ್‌ಗೆ ಬಿಡುವವರೆಗೆ ಕಾಯದೆ ನೇರವಾಗಿ ಇದು ಹರಾಜಿಗಿಟ್ಟ ಮಾಲೀಕನ ಲೆಕ್ಕದಲ್ಲಿ ಸೇರುತ್ತದೆ.ರವಾನೆದಾರರು ಹರಾಜು ಕೂಗಿದ ನಂತರ ಆ ಧಾರಣೆಗೆ ಸಮಾಧಾನವಿಲ್ಲದಿದ್ದರೆ ರೈತರು ಅದನ್ನು ತಿರಸ್ಕರಿಸಬಹುದು. ಇಲ್ಲಿನ ಎಪಿಎಂಸಿ ಆಡಳಿತ ಮತ್ತು ಮಾರಾಟ ವ್ಯವಸ್ಥೆ ಸಂಪೂರ್ಣ ಗಣಕೀಕರಣಗೊಂಡಿರುವುದು ವಿಶೇಷ. ಹರಾಜಿಗೆ ಬಂದಿರುವ ಒಟ್ಟು ಮಾಲಿನ ಲೆಕ್ಕ ರವಾನೆದಾರರಿಗೆ ಕಂಪ್ಯೂಟರ್ ಮೂಲಕವೇ ಲಭ್ಯವಾಗುತ್ತದೆ. ಹರಾಜುಕೂಗಲು ಕೂಡ ಇ-ಟೆಂಡರ್ ವ್ಯವಸ್ಥೆ ಜಾರಿಗೆ ಬಂದಿದೆ. ಹಾಗಾಗಿ ಒಳ ಹರಾಜು ವ್ಯವಹಾರಗಳಿಗೆ ಸಂಪೂರ್ಣ ಕಡಿವಾಣ ಬಿದ್ದಿದೆ.

ಡಿಸ್‌ಪ್ಲೇ ವ್ಯವಸ್ಥೆ: ದೇಶದ ಹಲವು ಮಾರುಕಟ್ಟೆಗಳ ವಿವಿಧ ಉತ್ಪನ್ನಗಳ ಅಂದಿನ ಧಾರಣೆಯನ್ನು ದೊಡ್ಡ ಎಲೆಕ್ಟ್ರಾನಿಕ್ ಡಿಸ್‌ಪ್ಲೇ ಬೋರ್ಡ್ ಮೂಲಕ ಎಪಿಎಂಸಿಯಲ್ಲಿ ಪ್ರದರ್ಶಿಸಲಾಗುತ್ತಿದೆ. ಕೊಬ್ಬರಿ ಹರಾಜು ಪ್ರಕ್ರಿಯೆ ಮುಗಿಯುತ್ತಿದ್ದಂತೆ ಮತ್ತೊಂದು ಡಿಸ್‌ಪ್ಲೇ ಬೋರ್ಡ್‌ನಲ್ಲಿ ಧಾರಣೆ ವಿವರ ಸಿಗುತ್ತದೆ.

ರೈತರು ಅಲ್ಲಿಯೇ ಧಾರಣೆ ನೋಡಬಹುದು. ಈ ಮಾದರಿ ವ್ಯವಸ್ಥೆ ಮತ್ತು ಚೇತರಿಸಿಕೊಂಡಿರುವ ಧಾರಣೆ ಬಗ್ಗೆ ಬೆರಗಾಗಿರುವ ರೈತರು ಈಗ ಎಪಿಎಂಸಿ ಆವರಣದಲ್ಲಿ ಸಂತೋಷದಿಂದ ನೆರೆಯುತ್ತಿದ್ದಾರೆ. ಎಪಿಎಂಸಿಯಲ್ಲಾದ ವ್ಯಾಪಕ ಬದಲಾವಣೆಗಳಿಗೆ ಆರಂಭದಲ್ಲಿ ಅಸಮಾಧಾನ ವ್ಯಕ್ತಪಡಿಸಿದ ರವಾನೆದಾರರು, ಕಮಿಷನ್ ಏಜೆಂಟರು ಕ್ರಮೇಣ ಒಪ್ಪಿಕೊಳ್ಳುತ್ತಿದ್ದಾರೆ.

ಪರಿಸರ: ಇಲ್ಲಿನ ಎಪಿಎಂಸಿ ಆವರಣವನ್ನು ಸ್ವಚ್ಛವಾಗಿ ಇಡಲು ಕಾರ್ಯದರ್ಶಿ ವಿಶೇಷ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುತ್ತಿದ್ದಾರೆ. ಪ್ಲಾಸ್ಟಿಕ್ ಸಾಮಗ್ರಿ ಬಳಕೆ ಸಂಪೂರ್ಣ ನಿಷೇಧಿಸಿರುವುದರಿಂದ ಪರಿಸರ ಪೂರಕ ವಾತಾವರಣ ಕಂಡುಬರುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.