ವದೆಹಲಿ(ಪಿಟಿಐ): ಈ ಬಾರಿ ಕೆಲವು ರಾಜ್ಯಗಳಲ್ಲಿ ಮುಂಗಾರು ಕೈಕೊಟ್ಟಿದ್ದರೂ, ಅಕ್ಕಿ ಮತ್ತು ಗೋಧಿ ಮೇಲೆ ರಫ್ತು ನಿಷೇಧ ಕ್ರಮ ಕೈಗೊಳ್ಳುವ ಅಗತ್ಯ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟವಾಗಿ ಹೇಳಿದೆ. ಕಳೆದ ಬಾರಿ ಬಂಪರ್ ಫಸಲು ಬಂದ ಪರಿಣಾಮ ಗೋದಾಮುಗಳು ಭರ್ತಿಯಾಗಿಯೇ ಇವೆ.
ಹಾಗಾಗಿ ಅಕ್ಕಿ, ಗೋಧಿ ರಫ್ತು ಚಟುವಟಿಕೆಯನ್ನು ನಿರಾಂತಕವಾಗಿ ಮುಂದುವರಿಸಬಹುದು ಎಂದು ಕೇಂದ್ರ ಕೃಷಿ ಇಲಾಖೆ ಕಾರ್ಯದರ್ಶಿ ಅಶೀಶ್ ಬಹುಗುಣ ಇಲ್ಲಿ ಶನಿವಾರರ ಸುದ್ದಿಗಾರರಿಗೆ ತಿಳಿಸಿದರು. ಸದ್ಯ ದೇಶದಿಂದ ಅಕ್ಕಿ, ಗೋಧಿ, ಸಕ್ಕರೆ, ಹತ್ತಿ ಮತ್ತು ಜೋಳ ಸೇರಿದಂತೆ ವಿವಿಧ ಕೃಷಿ ಉತ್ಪನ್ನಗಳು ರಫ್ತಾಗುತ್ತಿವೆ.
`ಸದ್ಯಕ್ಕೆ ಕಳವಳ ಪಡುವಂತಹುದೇನೂ ಇಲ್ಲ. ದೇಶದಲ್ಲಿ ಆಹಾರ ಪದಾರ್ಥಗಳ ಲಭ್ಯತೆ ವಿಚಾರದಲ್ಲಿ ಕೊರತೆಯೇನೂ ಇಲ್ಲ. ಹಾಗಾಗಿ ಈ ಮೊದಲೇ ಒಪ್ಪಿಕೊಂಡಿರುವಂತೆ ಆಹಾರ ಧಾನ್ಯ ರಫ್ತು ಪ್ರಕ್ರಿಯೆಯನ್ನು ಯಥಾರೀತಿ ಮುಂದುವರಿಸಬಹುದಾಗಿದೆ~ ಎಂದರು. `ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತ ಬಹಳ ಸ್ಥಿರವಾದ ಪಾತ್ರ ವಹಿಸಬೇಕಿದ್ದರೆ ನಾವು ರಫ್ತು ಮುಂದುವರಿಸುವುದು ಅತ್ಯಗತ್ಯ~ ಎಂದೂ ಅವರ ಸ್ಪಷ್ಟಪಡಿಸಿದರು.
ಕಳೆದ ವರ್ಷ ಅತ್ಯುತ್ತಮ ಮುಂಗಾರು ಕಾರಣದಿಂದಾಗಿ ದೇಶದಲ್ಲಿ ಒಟ್ಟಾರೆ 2574 ಲಕ್ಷ ಟನ್ ಆಹಾರ ಧಾನ್ಯ ಉತ್ಪಾದನೆ ಆಗಿದ್ದಿತು. ಇದರಲ್ಲಿ ಬತ್ತ ಮತ್ತು ಗೋಧಿ ಕ್ರಮವಾಗಿ 1043 ಲಕ್ಷ ಹಾಗೂ 939 ಲಕ್ಷ ಟನ್ ಇತ್ತು.
ಬಿತ್ತನೆ ಶೇ 22 ಹಿನ್ನಡೆ
ಅದರೆ, ದೇಶದ ಅರ್ಥವ್ಯವಸ್ಥೆ ಮತ್ತು ಜೀವನಾಡಿಯಾದ ಮುಂಗಾರು ಈ ಬಾರಿ ಶೇ 22ರಷ್ಟು ಹಿನ್ನಡೆ ತೋರಿದೆ. ಪರಿಣಾಮವಾಗಿ ಮುಂಗಾರು ಹಂಗಾಮಿನ ಬಿತ್ತನೆ ಚಟುವಟಿಕೆಯೂ ಹಿಂದೆ ಬಿದ್ದಿದೆ. ಈ ಬಾರಿಯ ಫಸಲೂ ಕಡಿಮೆಯಾಗುವುದು ನಿಶ್ಚಿತ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.