ನವದೆಹಲಿ(ಪಿಟಿಐ): ಪ್ರಸಕ್ತ ಹಣಕಾಸು ವರ್ಷದಲ್ಲಿ ರೂ.6.36 ಲಕ್ಷ ಕೋಟಿ ನೇರ ತೆರಿಗೆಗಳು ಸಂಗ್ರಹವಾಗಬೇಕಿತ್ತು. ಆದರೆ, ಇನ್ನೂ ರೂ.50,204 ಕೋಟಿ ತೆರಿಗೆ ಸಂಗ್ರಹ ಬಾಕಿಯಾಗಿರುವುದರಿಂದ ಕೇಂದ್ರ ನೇರ ತೆರಿಗೆಗಳ ಮಂಡಳಿ (ಸಿಬಿ ಡಿಟಿ) ಕೆಲಸದ ಒತ್ತಡದಲ್ಲಿ ಸಿಲುಕಿದೆ. ಇದು ತೆರಿಗೆ ಕಚೇರಿಯ ಕೆಲಸದ ಅವಧಿ ಮತ್ತು ಸಿಬ್ಬಂದಿಗಳ ರಜೆ ಮೇಲೂ ಪರಿಣಾಮ ಬೀರಿದೆ.
ಆದಾಯ ತೆರಿಗೆ ಕಚೇರಿಗಳೆಲ್ಲವೂ ಮಾ. 31ರವರೆಗೆ, ದಿನದ 24 ಗಂಟೆ, ವಾರದ ಏಳೂ ದಿನ ಕೆಲಸ ನಿರ್ವಹಿಸಬೇಕಿದೆ. ಆ ಮೂಲಕ ಬಾಕಿಯಾಗಿರುವ ತೆರಿಗೆ ಸಂಗ್ರಹಕ್ಕೆ ಶ್ರಮಿಸಬೇಕಿದೆ ಎಂದು ಆಜ್ಞೆ ಹೊರಡಿಸಿರುವ ‘ಸಿಬಿಡಿಟಿ’, ಕಚೇರಿ ಎಲ್ಲ ಸಿಬ್ಬಂದಿಗೂ ನೀಡಿದ್ದ ರಜೆಗಳನ್ನು ರದ್ದುಗೊಳಿಸಿದೆ.
ಇದೇ ವಿಷಯವಾಗಿ ಇತ್ತೀಚೆಗೆ ಆದಾಯ ತೆರಿಗೆ ಮುಖ್ಯ ಆಯುಕ್ತರುಗಳು ಮತ್ತು ಮಹಾ ನಿರ್ದೇಶಕರುಗಳ ಜತೆ ನೇರ ವಿಡಿಯೊ ಸಂವಾದ ನಡೆಸಿದ ‘ಸಿಬಿಡಿಟಿ’ ಅಧ್ಯಕ್ಷ ಆರ್.ಕೆ.ತಿವಾರಿ, ತೆರಿಗೆ ಲೆಕ್ಕಹಾಕುವ ಅಧಿಕಾರಿಗಳು ಮತ್ತು ಹೆಚ್ಚುವರಿ ಆಯುಕ್ತರುಗಳು, ಆಯುಕ್ತರು ಹಾಗೂ ಮುಖ್ಯ ಆಯುಕ್ತರು ಮಾ. 31ರವರೆಗೂ ರಜೆ ಹಾಕುವಂತೆಯೇ ಇಲ್ಲ. ನಿತ್ಯ ಕಚೇರಿಗೆ ಬಂದು ತೆರಿಗೆದಾರರ ಹಣಕಾಸು ಲೆಕ್ಕಪತ್ರಗಳನ್ನು ಪರಿಶೀಲಿಸಿ ತೆರಿಗೆ ಸಂಗ್ರಹ ಕಾರ್ಯವನ್ನು ಚುರುಕುಗೊಳಿಸಬೇಕು. ಮಾ. 31ರ ವೇಳೆಗೆ ಉಳಿದ ನೇರ ತೆರಿಗೆಯಷ್ಟನ್ನೂ ಸಂಗ್ರಹಿಸಲು ಶ್ರಮಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.
ಮಾ. 29 ಮತ್ತು 30ರಂದು ಶನಿವಾರ, ಭಾನುವಾರ. ವಾರದ ರಜೆ ಇದ್ದರೂ ದೇಶದ ಎಲ್ಲೆಡೆ ಇರುವ ಆದಾಯ ತೆರಿಗೆ ಕಚೇರಿಗಳು ಎಂದಿ ನಂತೆಯೇ ಕೆಲಸ ನಿರ್ವಹಿಸಬೇಕು. ಮಾ. 31ರಂದು ಯುಗಾದಿ ಹಬ್ಬಕ್ಕೂ ರಜೆ ಇಲ್ಲ. ಅಂದೂ ಸಹ ಕಚೇರಿಗೆ ಬಂದು ಕೆಲಸ ನಿರ್ವಹಿಸಲೇಬೇಕು ಎಂದು ತಿವಾರಿ ಕಟ್ಟುನಿಟ್ಟಿನ ಆದೇಶ ಹೊರಡಿಸಿ ದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.