ಹೈದರಾಬಾದ್ (ಪಿಟಿಐ): `ಹೂಡಿಕೆದಾರರ ವಿಶ್ವಾಸ ವೃದ್ಧಿಗೆ ಸರ್ಕಾರ ಇನ್ನೂ ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಿದೆ~ ಎಂದು ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಸೋಮವಾರ ಇಲ್ಲಿ ಹೇಳಿದ್ದಾರೆ.
ಜಾಗತಿಕ ಸಾಲ ಮೌಲ್ಯಮಾಪನ ಸಂಸ್ಥೆ ಸ್ಟಾಂಡರ್ಡ್ ಅಂಡ್ ಪೂರ್ಸ್ (ಎಸ್ಅಂಡ್ಪಿ) ಮುಂದಿನ 24 ತಿಂಗಳಲ್ಲಿ ದೇಶದ ಕ್ರೆಡಿಟ್ ರೇಟಿಂಗ್ ಶ್ರೇಣಿಯನ್ನು `ಕಳಪೆ~ ಮಟ್ಟಕ್ಕೆ ತಗ್ಗಿಸುವುದಾಗಿ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಮೊಂಟೆಕ್, ಪ್ರಸಕ್ತ ಹಣಕಾಸು ವರ್ಷದ ದ್ವಿತೀಯಾರ್ಧದಿಂದ ಒಟ್ಟಾರೆ ರಾಷ್ಟ್ರೀಯ ಉತ್ಪಾದನೆ(ಜಿಡಿಪಿ) ಚೇತರಿಸಿಕೊಳ್ಳಲಿದ್ದೆ. ಹಾಗಾಗಿ ಕ್ರೆಡಿಟ್ ರೇಟಿಂಗ್ ತಗ್ಗಲಿದೆ ಎಂಬ ಭೀತಿ ಬೇಡ. ಸಂಭವನೀಯ ಆರ್ಥಿಕ ಅಸ್ಥಿರತೆಯಿಂದ ಈಗಾಗಲೇ ಹೊರಬಂದಿದ್ದೇವೆ~ ಎಂದು ಭರವಸೆಯ ಮಾತನಾಡಿದ್ದಾರೆ.
`ಜಾಗತಿಕ ಸಾಲ ಮೌಲ್ಯಮಾಪನ ಸಂಸ್ಥೆಗಳು ಭಾರತದ ಕ್ರೆಡಿಟ್ ರೇಟಿಂಗ್ ತಗ್ಗಿಸುವ ಮೊದಲು ಅಂತರರಾಷ್ಟ್ರೀಯ ಮಾನದಂಡಗಳನ್ನು ಗಮನಿಸಬೇಕು~ ಎಂದು ಪ್ರಧಾನಿ ಆರ್ಥಿಕ ಸಲಹಾ ಸಮಿತಿ ಅಧ್ಯಕ್ಷ ಸಿ.ರಂಗರಾಜನ್ ಹೇಳಿದ್ದಾರೆ. `ಸರ್ಕಾರ ಸಮರೋಪಾದಿ ಆರ್ಥಿಕ ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದು, ರೇಟಿಂಗ್ ತಗ್ಗುವ ಸಾಧ್ಯತೆಯೇ ಇಲ್ಲ~ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಜಿಡಿಪಿ ಇನ್ನಷ್ಟು ಕುಸಿತ?
ನವದೆಹಲಿ (ಪಿಟಿಐ): ಹಣಕಾಸು ಸಚಿವಾಲಯ ಮಧ್ಯಂತರ ಹಣಕಾಸು ಪರಾಮರ್ಶೆ ಮುಂದಿನ ತಿಂಗಳು ಪ್ರಕಟಿಸಲಿದ್ದು, `ಜಿಡಿಪಿ~ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ ಎಂದು ಸಚಿವಾಲಯ ಹಿರಿಯ ಅಧಿಕಾರಿಯೊಬ್ಬರು ಸೋಮವಾರ ಇಲ್ಲಿ ಹೇಳಿದ್ದಾರೆ.
2012-13ನೇ ಸಾಲಿನ ಬಜೆಟ್ನಲ್ಲಿ ಅಂದಿನ ಹಣಕಾಸು ಸಚಿವರಾಗಿದ್ದ ಪ್ರಣವ್ ಮುಖರ್ಜಿ ಶೇ 7.6ರಷ್ಟು `ಜಿಡಿಪಿ~ ಪ್ರಗತಿ ಅಂದಾಜು ಮಾಡಿದ್ದರು. ಆದರೆ, ಜಾಗತಿಕ ಆರ್ಥಿಕ ಅಸ್ಥಿರತೆ ಮತ್ತಿತರ ಪ್ರತಿಕೂಲ ಸಂಗತಿಗಳಿಂದ `ಜಿಡಿಪಿ~ ಶೇ 5.6ಕ್ಕೆ ಇಳಿಕೆಯಾಗಬಹುದು ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.