ADVERTISEMENT

ವಿಐಎಸ್‌ಎಲ್‌: ವರದಿ ಬಳಿಕ ಪುನಶ್ಚೇತನ

ತಿಂಗಳ ಒಳಗೆ ವಿಶೇಷ ತಜ್ಞರ ತಂಡ: ಕೇಂದ್ರ ಸಚಿವ ಬಿರೇಂದರ್

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2018, 19:30 IST
Last Updated 16 ಮಾರ್ಚ್ 2018, 19:30 IST
ವಿಐಎಸ್‌ಎಲ್‌: ವರದಿ ಬಳಿಕ ಪುನಶ್ಚೇತನ
ವಿಐಎಸ್‌ಎಲ್‌: ವರದಿ ಬಳಿಕ ಪುನಶ್ಚೇತನ   

ಶಿವಮೊಗ್ಗ: ‘ತಜ್ಞರ ತಂಡ ವರದಿ ನೀಡಿದ ಬಳಿಕ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ (ವಿಐಎಸ್‌ಎಲ್‌ ) ಪುನಶ್ಚೇತನಕ್ಕೆ ಬಂಡವಾಳ ಹೂಡುವ ಸಂಬಂಧ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಕೇಂದ್ರ ಉಕ್ಕು ಸಚಿವ ಚೌಧರಿ ಬಿರೇಂದರ್ ಸಿಂಗ್ ಭರವಸೆ ನೀಡಿದ್ದಾರೆ.

‘ನಷ್ಟದಲ್ಲಿರುವ, ಷೇರು ವಿಕ್ರಯಕ್ಕೆ ನಿರ್ಧರಿಸಿರುವ ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳ ಪಟ್ಟಿಯಲ್ಲಿ ವಿಐಎಸ್‌ಎಲ್‌ ಕೂಡ ಇದೆ. ಆದರೆ, ಒಂದು ಶತಮಾನದಷ್ಟು ಹಳೆಯದಾದ ಈ ಘಟಕದ ಜತೆಗಿನ ಭಾವನಾತ್ಮಕ ಅಂಶ ಪರಿಗಣಿಸಿ, ಉಳಿಸಿಕೊಳ್ಳಲುಪ್ರಯತ್ನಿಸಲಾಗುವುದು’ ಎಂದು ಅವರು ಶುಕ್ರವಾರ ಇಲ್ಲಿ  ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಕಾರ್ಖಾನೆ ಪ್ರತಿ ವರ್ಷ ₹ 100 ಕೋಟಿ ನಷ್ಟ ಅನುಭವಿಸುತ್ತಿದೆ. ಪುನಶ್ಚೇತನಕ್ಕೆ ತಕ್ಷಣಕ್ಕೆ ₹ 1,200 ಕೋಟಿ ಅಗತ್ಯ ಇದೆ.

ADVERTISEMENT

‘ಆಧುನಿಕ ತಂತ್ರಜ್ಞಾನ ಅಳವಡಿಕೆ ಸೇರಿದಂತೆ, ಯಂತ್ರಗಳ ಬದಲಾವಣೆ ಮಾಡಲು ಕನಿಷ್ಠ ₹ 3 ಸಾವಿರ ಕೋಟಿ ಬೇಕಾಗುತ್ತದೆ. ಅಷ್ಟೊಂದು ಬಂಡವಾಳ ಹೂಡಲು ಖಾಸಗಿ ವಲಯ ಆಸಕ್ತಿ ತೋರುತ್ತದೆಯೇ ಎನ್ನುವ ಕುರಿತು ಮಾಹಿತಿ ಪಡೆಯಲಾಗುವುದು.

‘ಈ ಎಲ್ಲ ಸಾಧಕ–ಬಾಧಕ ಕುರಿತು ಪರಿಶೀಲಿಸಲು ಮತ್ತು ಕಾರ್ಖಾನೆಯ ಸ್ಥಿತಿಗತಿ ಕುರಿತು ಅಧ್ಯಯನ ನಡೆಸಲು ಒಂದು ತಿಂಗಳ ಒಳಗೆ ವಿಶೇಷ ತಜ್ಞರ ತಂಡ ರಚಿಸಲಾಗುವುದು.

‘2015ರಲ್ಲಿ ಅಂದಿನ ಕೇಂದ್ರ ಉಕ್ಕು ಸಚಿವ ನರೇಂದ್ರ ಸಿಂಗ್ ತೋಮಾರ್ ಬಂದು ಹೋಗಿದ್ದರು. ಈಗ ನಾನು ಬಂದಿರುವೆ. ಇದು ಚುನಾವಣೆಯ ಗಿಮಿಕ್ ಎಂದು ಭಾವಿಸಬಾರದು. ಆಗ ಸ್ವಂತ ಗಣಿ ಮಂಜೂರಾಗದ ಕಾರಣ ಖಚಿತ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲ.

‘ರಾಜ್ಯ ಸರ್ಕಾರ ಬಳ್ಳಾರಿ ಜಿಲ್ಲೆಯ ರಮಣದುರ್ಗದಲ್ಲಿ 253 ಎಕರೆ, ಸಂಡೂರಿನ ಬಾವಿನಹಳ್ಳಿ ಬಳಿ 140 ಎಕರೆ ಗಣಿ ಮಂಜೂರು ಮಾಡಿತ್ತು. ಎರಡು ತಿಂಗಳ ಹಿಂದಷ್ಟೇ ಆ ಗಣಿಗಳ ಮೇಲಿನ ಕಾನೂನು ತೊಡಕು ಬಗೆಹರಿದಿದೆ. ಹೀಗಾಗಿ, ಬಂಡವಾಳ ಹೂಡುವ ಕುರಿತು ಪರಿ
ಶೀಲಿಸಲಾಗುತ್ತಿದೆ’ ಎಂದರು.

‘ವಿಐಎಸ್‌ಎಲ್‌ ನೌಕರರ ಗುತ್ತಿಗೆ ಅವಧಿ ಇದೇ ತಿಂಗಳ ಜೂನ್‌ಗೆ ಕೊನೆಗೊಳ್ಳಲಿದೆ. ತಕ್ಷಣವೇ ಒಪ್ಪಂದ ನವೀಕರಿಸಲು ಭಾರತೀಯ ಉಕ್ಕು ಪ್ರಾಧಿಕಾರಕ್ಕೆ ಸೂಚಿಸಲಾಗುವುದು’ ಎಂದೂ ಅವರು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.