ಮುಂಬೈ (ಪಿಟಿಐ): ಬಾಕಿ ವೇತನ ಪಾವತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಕಿಂಗ್ಫಿಶರ್ ಏರ್ಲೈನ್ಸ್ ಸಿಬ್ಬಂದಿಗೆ ಕೊಡಲು ತಮ್ಮ ಬಳಿ ಹಣ ಇಲ್ಲ ಎಂದು ಕಂಪೆನಿಯ ಮಾಲೀಕ ವಿಜಯ ಮಲ್ಯ ಕೈಚೆಲ್ಲಿದ್ದಾರೆ.
`ಡಿಯಾಜಿಯೊ ಕಂಪೆನಿ ಜತೆ ಯುನೈಟೆಡ್ ಸ್ಪಿರಿಟ್ಸ್ ಒಪ್ಪಂದ ಮಾಡಿಕೊಂಡಿದೆ. ಆದರೆ ಕರ್ನಾಟಕ ಹೈಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ಅನ್ವಯ ಆ ಸಂಸ್ಥೆಯ ಹಣವನ್ನು ವೇತನಕ್ಕೆ ಬಳಸಲು ಸಾಧ್ಯವಿಲ್ಲ. ಈಗ ಸಂಬಳ ಕೊಡಲು ನನ್ನಲ್ಲಿ ಹಣ ಇಲ್ಲ' ಎಂದು ಧರಣಿನಿರತ ಸಿಬ್ಬಂದಿಗೆ ಅವರು ಹೇಳಿದ್ದಾಗಿ ತಿಳಿದುಬಂದಿದೆ.
ಏರ್ಲೈನ್ಸ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂಜಯ್ ಅಗರವಾಲ್ ಅವರು ಧರಣಿನಿರತ ಸಿಬ್ಬಂದಿ ಜತೆ ಮಾತುಕತೆ ನಡೆಸಲಿದ್ದಾರೆ ಎಂದು ಮಲ್ಯ ತಿಳಿಸಿದ್ದಾರೆ. ಆದರೆ, ಈ ಮೊದಲು ಮಲ್ಯ ಜತೆ ನಡೆಸಿದ್ದ ಮಾತುಕತೆಯಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಿಬ್ಬಂದಿ ದೂರಿದ್ದು, ಉಪವಾಸ ಮುಂದುವರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ. ಕಳೆದ ಆಗಸ್ಟ್ನಿಂದಲೂ ವೇತನ ಪಾವತಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ, ಇಲ್ಲಿನ ಕಿಂಗ್ಫಿಶರ್ ಹೌಸ್ ಎದುರು 70 ಉದ್ಯೋಗಿಗಳು ಗುರುವಾರದಿಂದ ಉಪವಾಸ ನಡೆಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.