ನವದೆಹಲಿ: ಸತತ ಎರಡು ವಹಿವಾಟಿನ ದಿನಗಳಲ್ಲಿ ಏರಿಕೆ ದಾಖಲಿಸಿದ್ದ ಮುಂಬೈ ಷೇರುಪೇಟೆ ಸೂಚ್ಯಂಕವು ಮಂಗಳವಾರದ ವಹಿವಾಟಿನಲ್ಲಿ ಮಾರಾಟ ಒತ್ತಡಗಳಿಂದ 99 ಅಂಶ ಇಳಿಕೆ ಕಂಡು 34,346 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದ ಮೊತ್ತ ₹11,400 ಕೋಟಿಗಳಿಂದ ₹ 12,700ಕೋಟಿಗೆ ಏರಿಕೆಯಾಗಿರುವ ಮಾಹಿತಿ ದೊರೆತ ನಂತರ ಬ್ಯಾಂಕಿಂಗ್ ಕ್ಷೇತ್ರದ ಷೇರುಗಳು ತೀವ್ರ ಕುಸಿತ ಕಂಡವು.
ಡಿಸೆಂಬರ್ ತ್ರೈಮಾಸಿಕದ ಜಿಡಿಪಿ ಮಾಹಿತಿ ಜತೆಗೆ ಜಿಡಿಪಿ ವೃದ್ಧಿಗೆ ಕೈಗೊಳ್ಳುವ ಕ್ರಮಗಳ ಬಗ್ಗೆ ಸರ್ಕಾರ ಬುಧವಾರ ಮಾಹಿತಿ ನೀಡಲಿದೆ. ಇದರಿಂದ ಕಾದು ನೋಡುವ ತಂತ್ರಕ್ಕೆ ಶರಣಾದ ಹೂಡಿಕೆದಾರರು ಖರೀದಿಗೆ ಹಿಂದೇಟು ಹಾಕಿದರು. ಹೀಗಾಗಿ ಸೂಚ್ಯಂಕದ ಓಟಕ್ಕೆ ಕಡಿವಾಣ ಬಿದ್ದಿತು. 34,558 ಅಂಶಗಳೊಂದಿಗೆ ಆರಂಭವಾದ ಸೂಚ್ಯಂಕ ಒಂದು ಹಂತದಲ್ಲಿ 34,610 ಅಂಶಗಳ ಗರಿಷ್ಠ ಮಟ್ಟಕ್ಕೆ ತಲುಪಿತ್ತು.
ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’ ಕೂಡ ಒಂದು ಹಂತದಲ್ಲಿ 10,631 ಅಂಶಗಳ ಗರಿಷ್ಠ ಮಟ್ಟ ತಲುಪಿತ್ತು. ಆದರೆ 28 ಅಂಶಗಳನ್ನು ಕಳೆದುಕೊಂಡು 10,554 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿತು.
ಪಂಜಾಬ್ ನ್ಯಾಷನಲ್ ಬ್ಯಾಂಕ್ನ ಷೇರು ಬೆಲೆ ಶೇ 12.11 ರಷ್ಟು ಮೌಲ್ಯ ಕಳೆದುಕೊಂಡು 20 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ.
ಭಾರ್ತಿ ಏರ್ಟೆಲ್ ಮತ್ತು ಡಾ. ರೆಡ್ಡಿಸ್ ಷೇರುಗಳ ಮೌಲ್ಯ ಕ್ರಮವಾಗಿ ಶೇ 2.07 ಮತ್ತು ಶೇ 1.82ರಷ್ಟು ಏರಿಕೆ ಕಂಡಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.