
ನವದೆಹಲಿ (ಪಿಟಿಐ): ಕಬ್ಬು ಬೆಳೆಗಾರರ ಬಾಕಿ ಪಾವತಿಸುವುದು ಕಾರ್ಖಾನೆಗಳ ಜವಾಬ್ದಾರಿ. ಈ ಕುರಿತು ಕೇಂದ್ರ ಸರ್ಕಾರ ಯಾವುದೇ ಸಹಾಯ ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರದ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಸೋಮವಾರ ಸ್ಪಷ್ಟಪಡಿಸಿದರು.
ಈ ಬಾರಿ ಹೆಚ್ಚುವರಿಯಾಗಿ 20 ಲಕ್ಷ ಟನ್ ಸಕ್ಕರೆ ಉತ್ಪಾದನೆಯಾಗಿದೆ. ಈ ಹೆಚ್ಚುವರಿ ಸಕ್ಕರೆಯನ್ನು ಕೇಂದ್ರ ಸರ್ಕಾರ ಖರೀದಿಸುವ ಮೂಲಕ, ರೈತರ ಬಾಕಿ ಪಾವತಿಸಲು ಕಾರ್ಖಾನೆಗಳಿಗೆ ನೆರವಾಗ ಬೇಕು ಎಂದು ಭಾರತೀಯ ಸಕ್ಕರೆ ಕಾರ್ಖಾನೆಗಳ ಒಕ್ಕೂಟ (ಐಎಸ್ಎಂಎ) ಕೇಂದ್ರ ಸರ್ಕಾರವನ್ನು ಒತ್ತಾಯಿಸಿತ್ತು. ಆದರೆ, ಇದೀಗ ಸರ್ಕಾರ ಹೆಚ್ಚುವರಿ ಸಕ್ಕರೆ ಖರೀದಿಸುವ ಬಗ್ಗೆ ಯಾವುದೇ ನಿರ್ಧಾರ ಇಲ್ಲ ಎಂದು ಹೇಳಿದೆ.
ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ನೀಡಬೇಕಿರುವ ಬಾಕಿ ₹21 ಸಾವಿರ ಕೋಟಿಗಳಿಗೆ ತಲುಪಿದೆ.
ರಾಜ್ಯಗಳು ಕ್ರಮ ಜರುಗಿಸಲಿ: ‘ಕಬ್ಬು ಬಾಕಿ ಪಾವತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಪಾತ್ರ ಏನೂ ಇಲ್ಲ. ನಾವು ಕಬ್ಬಿಗೆ ನ್ಯಾಯಬದ್ಧ ಲಾಭ ದಾಯಕ ಬೆಲೆ (ಎಫ್ಆರ್ಪಿ) ನಿಗದಿ ಪಡಿಸುತ್ತೇವೆ. ಕಾರ್ಖಾನೆಗಳು ಅದನ್ನು ರೈತರಿಗೆ ನೀಡದೇ ಇದ್ದರೆ ಸೂಕ್ತ ಕ್ರಮ ಜರುಗಿಸುವ ಎಲ್ಲಾ ಅಧಿಕಾರ ರಾಜ್ಯ ಸರ್ಕಾರಗಳಿಗಿದೆ’ ಎಂದು ತಿಳಿಸಿದರು.
ನಷ್ಟದಲ್ಲಿರುವ ಸಕ್ಕರೆ ಕಾರ್ಖಾನೆ ಗಳಿಗೆ ಅನುಕೂಲ ಆಗುವಂತೆ ಕೇಂದ್ರ ಸರ್ಕಾರ ಈಗಾಗಲೇ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಸಕ್ಕರೆ ಆಮದು ಮೇಲೆ ಶೇ 40ರಷ್ಟು ತೆರಿಗೆ ವಿಧಿಸಿದೆ. 14 ಲಕ್ಷ ಟನ್ ಕೆಂಪು ಸಕ್ಕರೆ ರಫ್ತು ಮಾಡಲು ಒಂದು ಟನ್ಗೆ ₹4 ಸಾವಿರದಂತೆ ಸಬ್ಸಿಡಿ ನೀಡಲಾಗುತ್ತಿದೆ ಎಂದು ವಿವರಿಸಿದರು.
ಅಂಕಿ–ಅಂಶ
280 ಲಕ್ಷ ಟನ್ 2014–15ನೇ ಮಾರುಕಟ್ಟೆ ವರ್ಷದಲ್ಲಿ ಉತ್ಪಾದನೆ ನಿರೀಕ್ಷೆ
245 ಲಕ್ಷ ಟನ್ ಒಂದು ವರ್ಷದ ದೇಶಿ ಬೇಡಿಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.