ಮುಂಬೈ(ಪಿಟಿಐ): ಜಾಗತಿಕ ಷೇರುಪೇಟೆಗಳಲ್ಲಿನ ನೀರಸ ವಹಿವಾಟು, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ, ಕಲ್ಲಿದ್ದಲು ನಿಕ್ಷೇಪ ಹಂಚಿಕೆಗೆ ಸಂಬಂಧಿಸಿದಂತೆ ಮಹಾಲೇಖಪಾಲರ ಕರಡು ವರದಿ (ಸಿಎಸಿ) ಇತ್ಯಾದಿ ಸಂಗತಿಗಳಿಂದ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಗುರುವಾರದ ವಹಿವಾಟಿನಲ್ಲಿ 405 ಅಂಶಗಳನ್ನು ಕಳೆದುಕೊಂಡು ಪ್ರಪಾತಕ್ಕೆ ಕುಸಿದಿದೆ.
ಹರಾಜು ನಡೆಸದೆ 2004 ರಿಂದ 2009ರ ಅವಧಿಯಲ್ಲಿ 100ಕ್ಕೂ ಹೆಚ್ಚು ಖಾಸಗಿ ಹಾಗೂ ಸರ್ಕಾರಿ ಸ್ವಾಮ್ಯದ ಕಂಪನಿಗಳಿಗೆ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಮಾಡಲಾಗಿತ್ತು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಸುಮಾರು ್ಙ10.67 ಲಕ್ಷ ಕೋಟಿಗಳಷ್ಟು ನಷ್ಟವಾಗಿದೆ ಎಂದು `ಸಿಎಜಿ~ ಕರಡು ವರದಿ ತಿಳಿಸಿದೆ.
ಇದಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಬಂದ ವರದಿಯಿಂದ ಗುರುವಾರ ಷೇರುಪೇಟೆಯಲ್ಲಿ ಭಾರಿ ಮಾರಾಟದ ಒತ್ತಡ ಕಂಡುಬಂತು. ಡಾಲರ್ ಎದುರು ರೂಪಾಯಿ ವಿನಿಮಯ ಮೌಲ್ಯ ರೂ. 51ರಷ್ಟಾಗಿರುವುದು ಕೂಡ ಪೇಟೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಇದರಿಂದ ಮುಂಬರುವ ದಿನಗಳಲ್ಲಿ ಕಚ್ಚಾ ತೈಲದ ಆಮದು ದರವೂ ಹೆಚ್ಚಲಿದೆ ಎನ್ನುವ ವಿಶ್ಲೇಷಣೆಗಳು ನಡೆಯುತ್ತಿವೆ. ದಿನದಂತ್ಯಕ್ಕೆ ಸಂವೇದಿ ಸೂಚ್ಯಂಕವು 17,196 ಅಂಶಗಳಿಗೆ ವಹಿವಾಟು ಕೊನೆಗೊಂಡಿತು.
ದಿನದ ವಹಿವಾಟಿನಲ್ಲಿ ರಿಯಾಲ್ಟಿ, ಬ್ಯಾಕಿಂಗ್, ವಿದ್ಯುತ್, ಲೋಹ, ತೈಲ ಶುದ್ಧೀಕರಣ ಕಂಪೆನಿಗಳ ಷೇರುಗಳು ಮಾರಾಟ ಒತ್ತಡ ಎದುರಿಸಿದವು. ರಿಲಯನ್ಸ್ ಇಂಡಸ್ಟ್ರೀಸ್, ಇನ್ಫೋಸಿಸ್ ಗರಿಷ್ಠ ಕುಸಿತ ಕಂಡವು.
ರಾಷ್ಟ್ರೀಯ ಷೇರು ಸೂಚ್ಯಂಕ `ನಿಫ್ಟಿ~ ಕೂಡ 136 ಅಂಶಗಳನ್ನು ಕಳೆದುಕೊಂಡು 5,228 ಅಂಶಗಳಿಗೆ ವಹಿವಾಟು ಕೊನೆಗೊಳಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.