ADVERTISEMENT

ಸುಸ್ತಿದಾರರಿಲ್ಲದ ಸಂಘ!

​ಪ್ರಜಾವಾಣಿ ವಾರ್ತೆ
Published 9 ಜೂನ್ 2017, 19:30 IST
Last Updated 9 ಜೂನ್ 2017, 19:30 IST
ಮೈಸೂರು ಜಿಲ್ಲೆ ತಿ.ನರಸೀಪುರ ತಾಲ್ಲೂಕಿನ ಯಾಚೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡದ ಚಾವಣಿಯಲ್ಲಿ ಹಾಕಿರುವ ಸೌರಫಲಕಗಳು
ಮೈಸೂರು ಜಿಲ್ಲೆ ತಿ.ನರಸೀಪುರ ತಾಲ್ಲೂಕಿನ ಯಾಚೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡದ ಚಾವಣಿಯಲ್ಲಿ ಹಾಕಿರುವ ಸೌರಫಲಕಗಳು   

ಮೈಸೂರು: ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ಯಾಚೇನಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಸುಸ್ತಿದಾರರಿಲ್ಲದ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

8 ವರ್ಷಗಳ ಹಿಂದೆ ದಾನಿಗಳಿಂದಲೇ ಆರಂಭವಾದ ಸಂಘದಲ್ಲಿ, ಈಗ 1,500 ಸದಸ್ಯರು ಇದ್ದಾರೆ. ರಸಗೊಬ್ಬರ, ವಿದ್ಯಾಭ್ಯಾಸ, ಕೃಷಿ ಸಾಲ ಹೀಗೆ ಅನೇಕ ಸಾಲಸೌಲಭ್ಯಗಳನ್ನು ಸದಸ್ಯರಿಗೆ ನೀಡಲಾಗಿದೆ. ಇಲ್ಲಿವರೆಗೂ ಒಬ್ಬರೂ ಸುಸ್ತಿದಾರರು ಆಗದಿರುವುದು ವಿಶೇಷ ಎನಿಸಿದೆ.

ಈಗಾಗಲೇ ‘ಎ’ ಶ್ರೇಣಿ ಪಡೆದಿರುವ ಸಂಘವು, ವಾರ್ಷಿಕ ₹ 12 ಕೋಟಿಗೂ ಹೆಚ್ಚು ವಹಿವಾಟು ನಡೆಸುತ್ತಿದೆ. ಕೃಷಿ ಸಾಲವಾಗಿ ನೀಡಿದ ಮೊತ್ತವೇ ₹ 4 ಕೋಟಿ ದಾಟಿದೆ. ಜತೆಗೆ, ₹ 5ಕ್ಕೆ 20 ಲೀಟರ್ ಶುದ್ಧ ಕುಡಿಯುವ ನೀರು ಪೂರೈಕೆ ಕೇಂದ್ರ ಸ್ಥಾಪಿಸಿ, ನೀರಿನ ಸಮಸ್ಯೆಗೆ ಪರಿಹಾರ ಹುಡುಕಿದೆ.

ADVERTISEMENT

ದಾನಿಗಳಿಂದ ಸಂಗ್ರಹಿಸಿದ ₹ 1.25 ಕೋಟಿ ಮೊತ್ತದಲ್ಲಿ ಸ್ವಂತ ಕಟ್ಟಡ ನಿರ್ಮಿಸಲಾಗಿದೆ. ಇದರ ಚಾವಣಿಯಲ್ಲಿ ಸೌರಫಲಕಗಳನ್ನು ಅಳವಡಿಸಿ ಕಟ್ಟಡಕ್ಕೆ ಬೇಕಾದ ವಿದ್ಯುತ್‌ ಪಡೆಯುವುದರ ಜತೆಗೆ 10 ಕಿಲೊವಾಟ್ ವಿದ್ಯುತ್‌ನ್ನು ‘ಸೆಸ್ಕ್’ಗೆ ಮಾರಾಟ ಮಾಡುತ್ತಿದೆ.

ಉಳಿದಂತೆ, ಬ್ಯಾಂಕ್ ಕಟ್ಟದಲ್ಲಿ ಬೋರ್ಡ್‌ರೂಮ್, ಗ್ರಂಥಾಲಯ, ಕಂಪ್ಯೂಟರ್ ತರಬೇತಿ ಕೇಂದ್ರ, ಸರ್ಕಾರದ ವಿವಿಧ ಸವಲತ್ತುಗಳ ಕುರಿತು ಕಾರ್ಯಾಗಾರ ನಡೆಸುವ ಸಭಾಂಗಣಗಳನ್ನು ನಿರ್ಮಿಸಲಾಗಿದೆ. ಜೂನ್ 11ರಂದು ನೂತನ ಕಟ್ಟಡದ ಉದ್ಘಾಟನೆ ನೆರವೇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.