ADVERTISEMENT

`ಹಟ್ಟಿ'ಗೀಗ ಸುವರ್ಣ ಸಮಯ

ರಾಮರಡ್ಡಿ ಅಳವಂಡಿ
Published 18 ಜೂನ್ 2013, 19:59 IST
Last Updated 18 ಜೂನ್ 2013, 19:59 IST

ಇದು ಅನ್ನದ ನಾಡಿನ ಚಿನ್ನದ ಗಣಿಯ ಯಶೋಗಾಥೆ. ರಾಯಚೂರು ಜಿಲ್ಲೆಯಲ್ಲಿರುವ `ಹಟ್ಟಿ ಚಿನ್ನದ ಗಣಿ' ಸದ್ಯ ದೇಶದಲ್ಲಿ ಚಾಲ್ತಿಯಲ್ಲಿರುವ ಏಕೈಕ ಚಿನ್ನದ ಗಣಿ. ಜನಸಾಮಾನ್ಯರಿಗೆ ಈಗ ಚಿನ್ನ ಗಗನ ಕುಸುಮ. ಚಿನ್ನದ ಮಾರುಕಟ್ಟೆಯಲ್ಲಿ ನೋಡು ನೋಡುತ್ತಿದ್ದಂತೆಯೇ ಚಿನ್ನದ ಬೆಲೆ ಜಾಸ್ತಿಯಾಗಿದೆ.

ಕಳೆದ ತಿಂಗಳು 10 ಗ್ರಾಂ ಚಿನ್ನ ರೂ.32 ಸಾವಿರದವರೆಗೂ ಜಿಗಿದಿತ್ತು. ಈಗ ಕೆಲ ದಿನಗಳಿಂದ ಚಿನ್ನದ ಬೆಲೆ ತುಸು ಇಳಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ರೂ.27,000ದ ಅಸುಪಾಸಿನಲ್ಲಿದೆ.

ಜನಸಾಮಾನ್ಯರಿಗೆ ಚಿನ್ನದ ಮೇಲಿನ ವ್ಯಾಮೋಹ ಕಡಿಮೆ ಆಗಿಲ್ಲ. ಆಗುವ ಲಕ್ಷಣಗಳೂ ಕಾಣುತ್ತಿಲ್ಲ.
ಇಂಥ `ಬಂಗಾರ'ವನ್ನು ಸಾವಿರಾರು ಅಡಿ ಆಳದಲ್ಲಿ ಹುದುಗಿಸಿಟ್ಟುಕೊಂಡಿರುವ ದೇಶದ ಏಕೈಕ ಚಿನ್ನದ ಗಣಿ ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ `ಹಟ್ಟಿ'ಯಲ್ಲಿದೆ. (ಈ ಮೊದಲು ಕೋಲಾರದಲ್ಲಿ ಚಿನ್ನದ ಗಣಿಗಾರಿಕೆ ನಡೆಯುತ್ತಿತ್ತು. ಕೆಲವು ವರ್ಷಗಳಿಂದ ಬಂದ್ ಆಗಿದೆ).

ದೇಶದ ಏಕೈಕ ಚಿನ್ನದ ಸಂಸ್ಕರಣೆ ಮಾಡುವ ಈ ಘಟಕ ರಾಜ್ಯ ಸರ್ಕಾರದ ಉದ್ಯಮವಾಗಿದೆ. `ಹಟ್ಟಿ ಚಿನ್ನದ ಗಣಿ ಕಂಪೆನಿ' ಹೆಸರಿನಲ್ಲಿ ಚಿನ್ನದ ಉತ್ಪಾದನೆ ಮಾಡುತ್ತಿದೆ.

ಸೋನಾ ಮಸೂರಿ ಭತ್ತ ಬೆಳೆಯುವ ಮೂಲಕ ಭತ್ತದ ಕಣಜ, ಅನ್ನದ ಬಟ್ಟಲು ಎನಿಸಿಕೊಂಡಿರುವ ರಾಯಚೂರು ಜಿಲ್ಲೆ, ಅನ್ನದ ಜತೆಗೆ ಚಿನ್ನವನ್ನೂ ತನ್ನ ಒಡಲಲ್ಲಿ ಹುದುಗಿಸಿಟ್ಟುಕೊಂಡಿದೆ.

ವಿಶ್ವದಲ್ಲಿಯೇ ಹೆಚ್ಚು ಚಿನ್ನ ಆಮದು ಮಾಡಿಕೊಳ್ಳುವ ದೇಶ ಭಾರತ. ನಮ್ಮ ಜನಕ್ಕೆ ಚಿನ್ನ, ಆಭರಣ ಎಂದರೆ ಭಾರಿ ಆಕರ್ಷಣೆ. ಈ ಮಾತನ್ನು ಚಿನ್ನದ ಆಮದು ಪುಷ್ಟೀಕರಿಸುತ್ತದೆ.

ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಗಗನಕ್ಕೇರಿದ ಸಂದರ್ಭದಲ್ಲೇ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಬಂತು. ಚುನಾವಣೆ ಸಂದರ್ಭದಲ್ಲಿ ಕೆಲವೆಡೆ ಅಭ್ಯರ್ಥಿಗಳು ಹಣ ಹಂಚುವ ಬದಲು ಚಿನ್ನದ ಓಲೆ, ಜುಮುಕಿ, ಮೂಗುತಿ ಕೊಟ್ಟು ಮತದಾರರನ್ನು ಓಲೈಸುವ ಪ್ರಯತ್ನ ಮಾಡಿದ ಸುದ್ದಿಯೂ ಕೇಳಿ ಬಂದಿತ್ತು. ಇದೂ `ಚಿನ್ನ'ದ ಮೋಡಿಗೆ ಒಂದು ಉದಾಹರಣೆ.

ಚಿನ್ನದ ಬೇಡಿಕೆ ಎಷ್ಟು
ದೇಶದ ಚಿನ್ನದ ಬೇಡಿಕೆ ವಾರ್ಷಿಕ 500ರಿಂದ 600 ಟನ್.  ಹಟ್ಟಿ ಚಿನ್ನದ ಗಣಿಯಲ್ಲಿ ವರ್ಷಕ್ಕೆ ಉತ್ಪಾದನೆಯಾಗುವ ಚಿನ್ನ 3 ಟನ್ ಮಾತ್ರ. ಇನ್ನುಳಿದ ಅರ್ಧ ಟನ್ ಚಿನ್ನ ಸಣ್ಣ ಪುಟ್ಟ ಇತರೆ ಗಣಿಗಳಿಂದ ಉತ್ಪಾದನೆಯಾಗುತ್ತದೆ ಎನ್ನುತ್ತವೆ ಹಟ್ಟಿ ಚಿನ್ನದ ಗಣಿ ಮೂಲಗಳು.

ದಿನಕ್ಕೆ 7 ಕೆ.ಜಿ ಚಿನ್ನ
ಹಟ್ಟಿ ಚಿನ್ನದ ಗಣಿ ವಾರ್ಷಿಕ ಗುರಿ ಪ್ರಕಾರ ಪ್ರತಿ ದಿನ 7 ಕೆ.ಜಿ ಚಿನ್ನ ಉತ್ಪಾದನೆಯಾಗಬೇಕು. ಸದ್ಯಕ್ಕೆ 6ರಿಂದ 7 ಕೆ.ಜಿ ಚಿನ್ನ ಉತ್ಪಾದನೆಯಾಗುತ್ತಿದೆ.

2008-09ರಲ್ಲಿ ವಾರ್ಷಿಕ ಗುರಿ ಪ್ರಕಾರ ಪ್ರತಿ ದಿನ 8 ಕೆ.ಜಿ ಚಿನ್ನ ಉತ್ಪಾದನೆಯಾಗುತ್ತಿತ್ತು. ಚಿನ್ನದ ಬೆಲೆ ಕಡಿಮೆ ಇದ್ದಾಗ ಹೆಚ್ಚು ಉತ್ಪಾದನೆ. ಬೆಲೆ ಹೆಚ್ಚು ಇದ್ದಾಗಿ ಕಡಿಮೆ ಉತ್ಪಾದನೆ. ಇದು ಚಿನ್ನದ ಗಣಿಗಾರಿಕೆಯ ಲಾಭದಾಯಕ ಸೂತ್ರ.

ಹಟ್ಟಿ ಚಿನ್ನದ ಗಣಿಗಾರಿಕೆ ಚಟುವಟಿಕೆ ಈಗಾಗಲೇ 2700 ಅಡಿಗಿಂತ ಹೆಚ್ಚು ಆಳ ತಲುಪಿದೆ. ನಿತ್ಯ ಸುಮಾರು 2000 ಟನ್‌ಗೂ ಹೆಚ್ಚಿನ ಅದಿರು ಹೊರ ತೆಗೆದು ಚಿನ್ನದ ಸಂಸ್ಕರಣೆ ಮಾಡಲಾಗುತ್ತದೆ. ಅಷ್ಟೇ ಅಲ್ಲ, ಹಟ್ಟಿ ಗಣಿಯ ಅಂಗ ಸಂಸ್ಥೆಗಳಾದ `ಊಟಿ'ಯಲ್ಲಿನ ತೆರೆದ ಗಣಿಯಿಂದ ಮತ್ತು ಹೀರಾ ಬುದ್ದಿನ್ನಿ ಗಣಿಯಿಂದ ಸುಮಾರು 500 ಟನ್ ಅದಿರು ತೆಗೆದು ಸಂಸ್ಕರಣೆ ಮಾಡಲಾಗುತ್ತದೆ.

ಚಿನ್ನಕ್ಕೆ ಹೆಚ್ಚಿನ ಬೆಲೆ ಬಂದಾಗ ಅತ್ಯಂತ ಕಡಿಮೆ ಚಿನ್ನದ ಅಂಶ ಇರುವ ಅದಿರನ್ನು ಸಂಸ್ಕರಿಸಿ ಚಿನ್ನ ಉತ್ಪಾದನೆ ಮಾಡಲಾಗುತ್ತದೆ. ಇದು ಹಟ್ಟಿ ಚಿನ್ನದ ಗಣಿಯಲ್ಲಿ ದಶಕಗಳಿಂದ ಅನುಸರಿಸಿಕೊಂಡು ಬಂದ ಪದ್ಧತಿ. ಈಗಲೂ ಅದು ಮುಂದುವರಿದಿದೆ.

2009ರಿಂದ ಚಿನ್ನದ ಬೆಲೆ ನಾಗಾಲೋಟದಲ್ಲಿದ್ದು, ಹಟ್ಟಿ ಚಿನ್ನದ ಗಣಿ ಸಹ ಸದ್ಯ ಚಿನ್ನದ ಅಂಶ ಕಡಿಮೆ ಇರುವ ಅದಿರನ್ನು ಸಂಸ್ಕರಣೆ ಮಾಡಿ ಚಿನ್ನ ಉತ್ಪಾದನೆಯಲ್ಲಿ ತೊಡಗಿದೆ.

ಹಟ್ಟಿ ಚಿನ್ನದ ಗಣಿ ಕಂಪೆನಿಯು ಹಿಂದೆಂದಿಗಿಂತಲೂ ಈಗ ಆರ್ಥಿಕವಾಗಿ ಸದೃಢವಾಗುತ್ತಿದೆ. ಗಣಿ ಅಭಿವೃದ್ಧಿ, ಗಣಿ ಆಯುಷ್ಯ ವೃದ್ಧಿಸುವ ಯೋಜನೆಗಳನ್ನು ರೂಪಿಸಿಕೊಂಡಿದೆ. ಮೂರು ವರ್ಷಗಳ ಹಿಂದೆ ಗಣಿಯ `ಮಲ್ಲಪ್ಪ ಷಾಫ್ಟ್' ಪಕ್ಕದ ಸ್ಥಳದಲ್ಲಿ ಗಣಿಯ ಹೃದಯ ಭಾಗ ಎಂದೇ ಕರೆಯಲಾಗುವ ಅದಿರು ಸಂಸ್ಕರಿಸುವ ನೂತನ ಘಟಕವನ್ನು (ಸ್ಯಾಗ್ ಮತ್ತು ಬಾಲ್ ಮಿಲ್ ಯೋಜನೆ) ರೂ.68.22 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದು, ಈಗದು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಈ ಘಟಕವೊಂದರಲ್ಲೇ 2000 ಟನ್ ಅದಿರು ಸಂಸ್ಕರಣೆ ಮಾಡಬಹುದಾಗಿದೆ ಎನ್ನುತ್ತವೆ ಹಟ್ಟಿ ಚಿನ್ನದ ಗಣಿ ಮೂಲಗಳು.

ಹಟ್ಟಿ ಚಿನ್ನದ ಗಣಿ ಒಂದೇ ಇಲ್ಲ, ಹಟ್ಟಿಯಲ್ಲಿ ಒಂದರ ಪಕ್ಕ ಒಂದರಂತೆ ಮೂರು ಗಣಿಗಳಿವೆ. ಷಾಫ್ಟ್ ಎಂಬ ಪದ ಚಿನ್ನದ ಗಣಿಗಾರಿಕೆಯಲ್ಲಿ ಬಳಸುವ ತಾಂತ್ರಿಕ ಪದ. ಗಣಿಗಾರಿಕೆ ನಡೆಯುತ್ತಿರುವ ಸ್ಥಳ ಎಂದೂ ಗಣಿಯಲ್ಲಿ ಕೆಲಸ ಮಾಡುವ ತಜ್ಞರು ಹೇಳುತ್ತಾರೆ. ಹೀಗಾಗಿ ಗಣಿ ಎಂದೂ ಅರ್ಥೈಸಬಹುದಾಗಿದೆ.

`ಗ್ರೇ ಷಾಫ್ಟ್' ಎಂದು ಕರೆಯಲಾಗುವ ಒಂದು ಗಣಿ, ಶತಮಾನಗಳ ಇತಿಹಾಸ ಹೊಂದಿದೆ(ಈಗ ಮುಚ್ಚಲಾಗಿದೆ). ಮಲ್ಲಪ್ಪ ಷಾಫ್ಟ್ ಮತ್ತು ಸೆಂಟ್ರಲ್ ಷಾಫ್ಟ್  ಎಂಬ ಎರಡು ಗಣಿಗಳು  ಪ್ರಗತಿ ಹೊಂದುತ್ತಾ ಬಂದಿವೆ. ಒಂದು ಗಣಿಗೆ `ಮಲ್ಲಪ್ಪ ಷಾಫ್ಟ್' ಎಂದು ಹೆಸರು ಬರಲು ಕಾರಣವಿದೆ.

ಈ ಹಿಂದೆ ಮಲ್ಲಪ್ಪ ಎಂಬವರು ಗಣಿ ಸಚಿವರಾಗಿದ್ದರಂತೆ. ಅವರು ಈ ಷಾಫ್ಟ್ ಉದ್ಘಾಟಿಸಿದ್ದರು. ಹಾಗಾಗಿ ಇದಕ್ಕೆ ಮಲ್ಲಪ್ಪ ಷಾಫ್ಟ್ ಎಂಬ ಹೆಸರು ಬಂದಿದೆ. ವಿಲೇಜ್ ಷಾಫ್ಟ್ ಎಂಬುದು ಹಟ್ಟಿ ಗ್ರಾಮದ ಪಕ್ಕದಲ್ಲೇ ಇದೆ. ಗ್ರಾಮದ ಪಕ್ಕವೇ ಇರುವುದರಿಂದ ಈ ಹೆಸರು ಬಂದಿದೆ ಎಂದು ಈ ಗಣಿ ಇತಿಹಾಸ ಪುಟಗಳು ಹೇಳುತ್ತವೆ.

1942ರಲ್ಲಿ ಅಂದರೆ ಹೈದರಾಬಾದ್ ನಿಜಾಮರ ಆಡಳಿತ ಅವಧಿಯಲ್ಲಿ ಈ ಗಣಿ ಆರಂಭಗೊಂಡಿತು. ಈಗ 150 ಜನ ಕಾರ್ಮಿಕರು ಈ ಗಣಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ದೂರದೃಷ್ಟಿ ಯೋಜನೆ
ಗಣಿಗಾರಿಕೆ ಇನ್ನೂ ಹೆಚ್ಚು ಕಾಲ ಸಕ್ರಿಯವಾಗಿರಲು ಹೊಸ ತಂತ್ರಜ್ಞಾನ ಅಳವಡಿಕೆ, ಅದಿರು ಸಂಸ್ಕರಣೆ, ಹೊಸ ಮಿಲ್ ನಿರ್ಮಾಣ ಕಾರ್ಯ ನಡೆದಿದೆ. ಈ ವ್ಯವಸ್ಥೆ ಸಮರ್ಪಕವಾಗಿ ಕಾರ್ಯನಿರ್ವಹಿಸಿದರೆ ಇನ್ನೂ 60 ವರ್ಷ ಅಥವಾ ಅದಕ್ಕೂ ಹೆಚ್ಚು ಕಾಲ ಗಣಿಗಾರಿಕೆ ನಡೆಸಬಹುದಾಗಿದೆ ಎಂದು ಹಟ್ಟಿ ಚಿನ್ನದ ಗಣಿ ಉನ್ನತ ಮೂಲಗಳು ಹೇಳುತ್ತವೆ.

ಅಭಿವೃದ್ಧಿ ಯೋಜನೆಗಳ ವಿವರ
ಸರ್ಕ್ಯುಲರ್ ಷಾಫ್ಟ್ ಕಾಮಗಾರಿಯನ್ನು ಸದ್ಯ ಗುತ್ತಿಗೆ ನೀಡಲಾಗಿದ್ದು, ಮೂರು ವರ್ಷದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಇದರಿಂದ ಗಣಿಯೊಳಕ್ಕೆ ಬಹಳ ಕಡಿಮೆ ಸಮಯದಲ್ಲಿ ಆಧುನಿಕ ಯಂತ್ರಗಳನ್ನು ಕೊಂಡೊಯ್ಯಲು ಅನುಕೂಲವಾಗುತ್ತದೆ. ಜತೆಗೆ ಗಣಿಯಲ್ಲಿ ವಾಯು ಸಂಚಾರಕ್ಕೂ(ವೆಂಟಿಲೇಷನ್) ಅನುಕೂಲವಾಗುತ್ತದೆ ಎನ್ನುತ್ತಾರೆ ಇಲ್ಲಿನ ಅಧಿಕಾರಿಗಳು.

`ಇಂಡಿಯನ್ ಬ್ಯುರೊ ಆಫ್ ಮೈನ್ಸ್' ಸಂಸ್ಥೆ ಪರಿಸರ ಸಂರಕ್ಷಣೆ ಚಟುವಟಿಕೆಗಾಗಿ ಹಟ್ಟಿ ಕಂಪೆನಿಗೆ 2012ನೇ ಸಾಲಿನಲ್ಲಿ 9 ಬಹುಮಾನಗಳು ನೀಡಿದೆ. ಜೈವಿಕ ಇಂಧನ ಅಭಿವೃದ್ಧಿಗಾಗಿ ಕಂಪೆನಿಯ ಸಹಭಾಗಿತ್ವದಲ್ಲಿ ಸುಮಾರು 20 ಸಾವಿರ ಸಸಿ ನೆಡಲಾಗಿದೆ ಎಂದು ಕಂಪೆನಿ ಆಡಳಿತ ವರ್ಗ ಹೇಳಿದೆ.

ಗಣಿ ಕಾರ್ಮಿಕರ ಕಥೆ-ವ್ಯಥೆ
2013ರ ಏಪ್ರಿಲ್‌ವರೆಗಿನ ಹಾಜರಿ ಪ್ರಕಾರ 4,315 ಕಾರ್ಮಿಕರು ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕಾರ್ಮಿಕರು ಹಾಗೂ ಅಧಿಕಾರಿಗಳು ವಾಸಿಸಲು ಒಟ್ಟು 2217 ಮನೆಗಳನ್ನು ನಿರ್ಮಿಸಲಾಗಿದೆ. ಇನ್ನೂ 400 ಮನೆಗಳನ್ನು ನಿರ್ಮಿಸುವ ಯೋಜನೆಯನ್ನು ಕಂಪೆನಿ ಹಾಕಿಕೊಂಡಿದೆ.

11 ವರ್ಷ ಸೇವೆ ಸಲ್ಲಿಸಿದ 498 ಕಾರ್ಮಿಕರು ನೌಕರಿ ಕಾಯಂಗಾಗಿ ಹಟ್ಟಿ ಚಿನ್ನದ ಗಣಿ ಹಂಗಾಮಿ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್  ಕಾರ್ಮಿಕರ ಪರಿವಾಗಿ ಇತ್ತೀಚೆಗಷ್ಟೇ ತೀರ್ಪು ನೀಡಿದೆ.

ಹಟ್ಟಿ ಚಿನ್ನದ ಗಣಿ ಕಂಪೆನಿಯು ಚಿನ್ನದ ಉತ್ಪಾದನೆಗೆ ಗಮನಹರಿಸಿದಷ್ಟು ಗಣಿಯಲ್ಲಿ ದುಡಿಯುವ ಕಾರ್ಮಿಕ ವರ್ಗದವರಿಗೆ ಹೆಚ್ಚಿ ಸೌಕರ್ಯ ಕಲ್ಪಿಸಲು ಕೊಡುತ್ತಿಲ್ಲ. ಮನೆ, ವೇತನ ಹೆಚ್ಚಳ, ಮೂಲ ಸೌಕರ್ಯ ಇನ್ನೂ ಕಂಪೆನಿ ಕಲ್ಪಿಸಬೇಕು ಎಂಬುದು ಕಾರ್ಮಿಕ ವರ್ಗದ ಮತ್ತು ಕಂಪೆನಿ ಕಾರ್ಮಿಕ ವರ್ಗದ ಪರ ಕಾಳಜಿಯುಳ್ಳವರ ಅಳಲಾಗಿದೆ.

ಚಿನ್ನ ಬೇಕು-ಬೇಡ!
ಈಗ ಎಲ್ಲೆಲ್ಲೂ `ಚಿನ್ನ'ದ್ದೇ ಸುದ್ದಿ. ಕೆಲವೇ ದಿನಗಳ ಹಿಂದಿನವರೆಗೂ ಎಲ್ಲ ಬ್ಯಾಂಕ್‌ಗಳೂ `ನಮ್ಮಲ್ಲಿ ಅಪರಂಜಿಯಷ್ಟು ಪರಿಶುದ್ಧ ಚಿನ್ನದ ನಾಣ್ಯ, ಚಿನ್ನದ ಬಿಸ್ಕತ್ ಲಭ್ಯ. ಇಂದೇ ಖರೀದಿಸಿ' ಎನ್ನುತ್ತಾ ಪ್ರಚಾರ ಕಾರ್ಯ ನಡೆಸಿದ್ದವು. ಅಂಚೆ ಕಚೇರಿಯೂ ಕೆಲವೇ ದಿನಗಳ ಹಿಂದೆ(ಅಕ್ಷಯ ತೃತೀಯಾ ಸಂದರ್ಭದಲ್ಲಿ) `ಚಿನ್ನದ ನಾಣ್ಯಗಳ ಖರೀದಿ ಮೇಲೆ ಭಾರೀ ರಿಯಾಯಿತಿ' ಎಂದು ಘೋಷಣೆ ಮೊಳಗಿಸಿತ್ತು.

ಅದಕ್ಕೆ ತಕ್ಕಂತೆಯೇ ಹೆಂಗೆಳೆಯರು, ಹೂಡಿಕೆದಾರರು, ಲಾಭಾಕಾಂಕ್ಷೆಯವರಯ, ಉಳಿತಾಯ ಬುದ್ಧಿಯವರೆಲ್ಲಾ ಚಿನಿವಾರ ಪೇಟೆ, ಆಭರಣಗಳ ಅಂಗಡಿ, ಬ್ಯಾಂಕ್, ಅಂಚೆ ಕಚೇರಿ ಎಂದು ಮುಗಿಬಿದ್ದಿದ್ದರು.
ಆದರೆ, ಈಗ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಅವರು `ಸಾಕು ಮಾಡಿ, ದಯಮಾಡಿ ಚಿನ್ನ ಖರೀದಿಸಬೇಡಿ'... ಎಂದು ದೇಶದ ನಾಗರಿಕರಲ್ಲಿ ಮನವಿ ಮಾಡುತ್ತಿದ್ದಾರೆ.

ಕಾರಣ, ಚಿನ್ನ ಖರೀದಿ ಹೆಚ್ಚಿದಂತೆಲ್ಲಾ ಹಳದಿ ಲೋಹದ ಆಮದು ಸಹ ಹೆಚ್ಚುತ್ತಾ ಹೋಗುತ್ತಿದೆ. ಇದರಿಂದಾಗಿ ದೇಶದ ಒಟ್ಟಾರೆ ರಫ್ತು-ಆಮದು ವಹಿವಾಟು ನಡುವಿನ ಅಂತರವೂ ವಿಸ್ತರಿಸುತ್ತಿದೆ. ಇದನ್ನು `ಚಾಲ್ತಿ ಖಾತೆ ಕೊರತೆ'(ಕರೆಂಟ್ ಅಕೌಂಟ್ ಡಿಫಿಸಿಟ್-ಸಿಎಡಿ) ಅಂತರ ಹೆಚ್ಚಳ ಎಂದು ಅರ್ಥಶಾಸ್ತ್ರದ ಭಾಷೆಯಲ್ಲಿ ಹೇಳಲಾಗುತ್ತದೆ.

ಈ `ಸಿಎಡಿ' ಅಂತರ ಹೆಚ್ಚಿದಂತೆಲ್ಲಾ ಭಾರತದ ರೂಪಾಯಿ ಮೌಲ್ಯವೂ ವಿದೇಶಿ ನಗದು ವಿನಿಮಯ ಮಾರುಕಟ್ಟೆಯಲ್ಲಿ ಕುಸಿಯುತ್ತಾ ಹೋಗುತ್ತದೆ. ಈಗಲೂ ಕಚ್ಚಾರೈಲ ಮತ್ತು ಚಿನ್ನದ ಆಮದು ಎರಡೂ ಹೆಚ್ಚಿನ ಪ್ರಮಾಣದಲ್ಲಿ ಆಮದು ಆಗುತ್ತಿವೆ. ಅದರಲ್ಲೂ ಚಿನ್ನದ ಆಮದು ಹೆಚ್ಚುತ್ತಲೇ ಇದೆ. ಈ ಬೆಳವಣಿಗೆಯೇ ಕೇಂದ್ರ ಸರ್ಕಾರದ ಚಿಂತೆಗೆ ಕಾರಣವಾಗಿದೆ.

ಹಾಗಾಗಿಯೇ ಕೇಂದ್ರ ಹಣಕಾಸು ಸಚಿವರು `ಚಿನ್ನ ಖರೀದಿ ಕಡಿಮೆ ಮಾಡಿ' ಎಂದು ಮನವಿ ಮಾಡುತ್ತಿದ್ದಾರೆ. ಆದರೆ, ಬಂಗಾರ, ಆಭರಣದ ವಿಚಾರ ಬಂದಾಗ ಗಂಡನ ಮಾತನ್ನೇ ಕೇಳದ ಹೆಂಗೆಳೆಯರು ಇನ್ನು ದೂರದೂರಿನ ಸಚಿವರ ಮನವಿಗೆ ಮನ್ನಣೆ ನೀಡುವರೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT