
ಹೊರನಾಡು (ಕಳಸ): ಇಲ್ಲಿನ ರಥಬೀದಿಯಲ್ಲಿ ಕರ್ಣಾಟಕ ಬ್ಯಾಂಕಿನ ನೂತನ ಶಾಖೆಯು ಸೋಮವಾರದಿಂದ ಕಾರ್ಯಾರಂಭಿಸಿತು.ಕರ್ಣಾಟಕ ಬ್ಯಾಂಕಿನ ದೇಶದ 493ನೇ ಮತ್ತು ರಾಜ್ಯದ 300ನೇ ಶಾಖೆಯನ್ನು ಅನ್ನಪೂರ್ಣೇಶ್ವರಿ ದೇವಸ್ಥಾನದ ಮುಖ್ಯಸ್ಥ ಜಿ.ಭೀಮೇಶ್ವರ ಜೋಷಿ ಉದ್ಘಾಟಿಸಿದರು.
ಎಟಿಎಂ ಕೇಂದ್ರಕ್ಕೆ ಹಿರಿಯ ಕೃಷಿಕ ರೇಜಯ್ಯ ಚಾಲನೆ ನೀಡಿದರು. 10 ಅಥವಾ 20 ರೂಪಾಯಿಯ ನೋಟಿಗೆ ಬದಲಾಗಿ ನಾಣ್ಯಗಳನ್ನು ನೀಡುವ ವಿಶಿಷ್ಟ ಯಂತ್ರವನ್ನೂ ಕೇಂದ್ರದಲ್ಲಿ ಆರಂಭಿಸಲಾಯಿತು.
ಕರ್ಣಾಟಕ ಬ್ಯಾಂಕಿನ ಹಿರಿಯ ಅಧಿಕಾರಿ ರಂಗನಾಥ್, ಕರ್ಣಾಟಕ ಬ್ಯಾಂಕಿನ ವಹಿವಾಟು ವರ್ಷಕ್ಕೆ 50 ಸಾವಿರ ಕೋಟಿ ರೂಪಾಯಿ ಮೀರಿದೆ ಎಂದರು.
ಕರ್ಣಾಟಕ ಬ್ಯಾಂಕಿನ ಎಲ್ಲ ಶಾಖೆಗಳೂ ಕೋರ್ ಬ್ಯಾಂಕಿಂಗ್ ತಂತ್ರಜ್ಞಾನ ಅಳವಡಿಸಿಕೊಂಡಿವೆ. ಮಹಿಳೆಯರು, ವಿದ್ಯಾರ್ಥಿಗಳು ಮತ್ತು ಕೃಷಿಕರ ಅನುಕೂಲಕ್ಕೆ ತಕ್ಕಂತೆ ಸಾಲ ಸೌಲಭ್ಯ ಮತ್ತು ವಿಶೇಷ ಖಾತೆಗಳನ್ನು ತೆರೆಯಲಾಗುತ್ತಿದೆ. ಬ್ಯಾಂಕಿಂಗ್ ಸೇವೆಯ ಜೊತೆಗೆ ವಿಮೆ ಸೌಲಭ್ಯವನ್ನೂ ಬ್ಯಾಂಕಿನಲ್ಲಿ ಕಲ್ಪಿಸಲಾಗುತ್ತಿದೆ ಎಂದು ರಂಗನಾಥ್ ಮಾಹಿತಿ ನೀಡಿದರು.
ಬ್ಯಾಂಕಿನ ಅಧ್ಯಕ್ಷ ಜಯರಾಮ್ ಭಟ್ ಮಾತನಾಡಿ, ದೇಶದ ಶೇ 40 ಜನರು ಬ್ಯಾಂಕಿಂಗ್ ಸೇವೆ ಪಡೆಯುತ್ತಿಲ್ಲ. ಶೇ 23 ಕೃಷಿಕರು ಬ್ಯಾಂಕುಗಳ ನೆರವಿನಿಂದ ವಂಚಿತರಾಗಿದ್ದಾರೆ. ಕೇವಲ ಶೇ 2 ಜನರಿಗೆ ಮಾತ್ರ ಎ.ಟಿ.ಎಂ. ಕಾರ್ಡ್ ಸೌಲಭ್ಯ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಪರಿಸರದಲ್ಲೂ ಬ್ಯಾಂಕಿಂಗ್ ಸೇವೆಯನ್ನು ಮತ್ತಷ್ಟು ವಿಸ್ತರಿಸುವುದು ತಮ್ಮ ಗುರಿಯಾಗಿದೆ ಎಂದರು.
ಹೊರನಾಡಿನ ಮೊದಲ ಬ್ಯಾಂಕ್ ಎಂಬ ಹೆಮ್ಮೆಗೆ ಪಾತ್ರವಾಗಿರುವ ಕರ್ಣಾಟಕ ಬ್ಯಾಂಕಿನಿಂದ ಪ್ರವಾಸಿಗರಿಗೆ ಬಹಳ ಅನುಕೂಲತೆ ಇದೆ ಎಂದು ಭೀಮೇಶ್ವರ ಜೋಷಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.