ಬೆಂಗಳೂರು: ಭಾರತೀಯ ರಿಯಲ್ ಎಸ್ಟೇಟ್ ನಿರ್ಮಾಣಗಾರರ ಮಹಾಸಂಘ (ಕ್ರೆಡಾಯ್) ಆಯೋಜಿಸಿರುವ ದಕ್ಷಿಣ ಭಾರತದ ಮೊದಲ ರಿಯಲ್ ಎಸ್ಟೇಟ್ ಸಮ್ಮೇಳನ ‘ಸೌತ್ಕಾನ್-2011’ ಫೆಬ್ರುವರಿ 4 ಮತ್ತು 5ರಂದು ಬೆಂಗಳೂರಿನಲ್ಲಿ ನಡೆಯಲಿದೆ.
ನಿರ್ಮಾಣಗಾರ ಸಮಸ್ಯೆ, ವಿಶೇಷವಾಗಿ ಆಂಧ್ರಪ್ರದೇಶ, ತಮಿಳುನಾಡು, ಕೇರಳ ಮತ್ತು ಕರ್ನಾಟಕದಲ್ಲಿ ರಿಯಲ್ ಎಸ್ಟೇಟ್ ಉದ್ಯಮದ ಸದ್ಯದ ಸ್ಥಿತಿಗತಿ ಕುರಿತು ಸಮ್ಮೇಳನದಲ್ಲಿ ಚರ್ಚಿಸಲಾಗುವುದು ಎಂದು ಶನಿವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ‘ಕ್ರೆಡಾಯ್’ ಕರ್ನಾಟಕ ಅಧ್ಯಕ್ಷ ಸುಶೀಲ್ ಮಂತ್ರಿ ತಿಳಿಸಿದರು.
ಕೌಶಲ್ಯ ಹೊಂದಿದ ವೃತ್ತಿಪರರ ಕೊರತೆಯನ್ನು ರಿಯಲ್ ಎಸ್ಟೇಟ್ ಉದ್ಯಮ ಮುಖ್ಯವಾಗಿ ಎದುರಿಸುತ್ತಿದೆ. ಅಲ್ಲದೆ, ದೇಶಾದ್ಯಂತ ಬಲವಾದ ಸಿಮೆಂಟ್ ಲಾಭಿ ಇದ್ದು, ಸಿಮೆಂಟ್ ಬೆಲೆ ಏರಿಕೆಯನ್ನು ನಿಯಂತ್ರಿಸಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ನಾಲ್ಕು ರಾಜ್ಯಗಳ 300ಕ್ಕೂ ಹೆಚ್ಚು ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಚಿಕ್ಕ ನಗರಗಳ ರಿಯಲ್ ಎಸ್ಟೇಟ್ ನಿರ್ಮಾಣಗಾರರ ಬಗ್ಗೆ ಸಮ್ಮೇಳನದಲ್ಲಿ ವಿಶೇಷ ಗಮನ ಹರಿಸಲಾಗುವುದದು ಎಂದು ‘ಕ್ರೆಡಾಯ್’ ತಮಿಳುನಾಡು ಅಧ್ಯಕ್ಷ ಟಿ. ಚಿಟ್ಟಿ ಬಾಬು ಹೇಳಿದರು. ‘ಕ್ರೆಡಾಯ್’ನ ಆಂಧ್ರಪ್ರದೇಶ ಅಧ್ಯಕ್ಷ ಶೆಖರ ರೆಡ್ಡಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.