ವಿಧಾನಸೌಧದ ಹೊರಗೆ ಬಜೆಟ್ ಪ್ರತಿ ಪ್ರದರ್ಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಪ್ರಜಾವಾಣಿ ಚಿತ್ರ: ಎಂ. ಎಸ್. ಮಂಜುನಾಥ್
ಬೆಂಗಳೂರು: 2025–26ನೇ ಸಾಲಿನ ಕರ್ನಾಟಕ ಬಜೆಟ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಶುಕ್ರವಾರ, ಮಾರ್ಚ್ 7) ಮಂಡಿಸಿದ್ದಾರೆ.
₹ 4.09 ಲಕ್ಷ ಕೋಟಿ ಗಾತ್ರದ ಆಯವ್ಯಯ ಇದಾಗಿದ್ದು, ಇದರೊಂದಿಗೆ, ರಾಜ್ಯ ಬಜೆಟ್ ಗಾತ್ರ ಇದೇ ಮೊದಲ ಬಾರಿಗೆ ₹ 4 ಲಕ್ಷ ಕೋಟಿ ಗಡಿ ದಾಟಿದಂತಾಗಿದೆ.
ತಮ್ಮ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳನ್ನು 'ಉಚಿತ ಕೊಡುಗೆಯಲ್ಲ, ಆರ್ಥಿಕ-ಸಾಮಾಜಿಕ ತತ್ವದ ಹೂಡಿಕೆಗಳು' ಎಂದು ಪ್ರತಿಪಾದಿಸಿರುವ ಸಿದ್ದರಾಮಯ್ಯ, ಈ ಯೋಜನೆಗಳಿಗಾಗಿ ₹ 51,034 ಕೋಟಿ ಅನುದಾನ ಮೀಸಲಿಟ್ಟಿದ್ದಾರೆ. ಅದೇರೀತಿ, ವಿವಿಧ ಅಭಿವೃದ್ಧಿ ಕಾರ್ಯಗಳಿಗಾಗಿ ಬಂಡವಾಳ ಕ್ರೋಢೀಕರಣಕ್ಕೆ ಕಸರತ್ತು ನಡೆಸಿರುವ ಮುಖ್ಯಮಂತ್ರಿ, 2025-26ನೇ ಸಾಲಿನಲ್ಲಿ ₹ 40,000 ಕೋಟಿ ಸಂಗ್ರಹಿಸುವ ಗುರಿಯನ್ನು ಅಬಕಾರಿ ಇಲಾಖೆಗೆ ನೀಡಿದ್ದಾರೆ.
ಅಬಕಾರಿಗೆ ಸಂಬಂಧಿಸಿದ ಪ್ರಮುಖ ಘೋಷಣೆಗಳು
ಪ್ರೀಮಿಯಂ ಮದ್ಯದ ಬೆಲೆಯನ್ನು ನೆರೆ ರಾಜ್ಯಗಳಲ್ಲಿ ವಿಧಿಸುತ್ತಿರುವ ಬೆಲೆಗಳಿಗೆ ಅನುಗುಣವಾಗಿ ಪರಿಷ್ಕರಿಸಲಾಗಿದೆ. ಅದನ್ನು 2025-26ರಲ್ಲಿಯೂ ಮುಂದುವರಿಸಲಾಗುವುದು.
ಲಭ್ಯವಿರುವ ಮದ್ಯದ ಪರವಾನಗಿಗಳನ್ನು ಇ–ಹರಾಜು ಮೂಲಕ ಪಾರದರ್ಶಕವಾಗಿ ಹಂಚಿಕೆ ಮಾಡಲಾಗುವುದು. ಇದರಿಂದ ಹೆಚ್ಚುವರಿ ರಾಜಸ್ವ ಸಂಗ್ರಹಣೆಯಾಗುವ ನಿರೀಕ್ಷೆ ಇದೆ.
ಅಬಕಾರಿ ಇಲಾಖೆಯ ಎಲ್ಲಾ ಸೇವೆಗಳಿಗೆ ಆನ್ಲೈನ್ ವ್ಯವಸ್ಥೆ ಜಾರಿ ಮಾಡಲಾಗಿದೆ. ಇದರಿಂದ ಆಡಳಿತದಲ್ಲಿ ದಕ್ಷತೆ ಹೆಚ್ಚಲಿದ್ದು, ಸಾರ್ವಜನಿಕ ಸೇವೆಯನ್ನು ಸುಧಾರಿಸಲು ಸಹಕಾರಿಯಾಗಲಿದೆ.
2024-25ರ ಪರಿಷ್ಕೃತ ಅಂದಾಜಿನಲ್ಲಿ ಅಬಕಾರಿ ತೆರಿಗೆಯಿಂದ ಒಟ್ಟು ₹ 36,500 ಕೋಟಿ ರಾಜಸ್ವವನ್ನು ನಿರೀಕ್ಷಿಸಲಾಗಿದೆ.
2025-26ನೇ ಸಾಲಿಗೆ ₹ 40,000 ಕೋಟಿ ಸಂಗ್ರಹಣಾ ಗುರಿಯನ್ನು ಅಬಕಾರಿ ಇಲಾಖೆಗೆ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.