ಬೆಂಗಳೂರು:ದೇಶದ ಆರ್ಥಿಕತೆಯ ಪ್ರಸ್ತುತ ಸ್ಥಿತಿಯ ಕುರಿತು ಕಾಂಗ್ರೆಸ್ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 'ಪ್ರಧಾನಿ ನರೇಂದ್ರ ಮೋದಿ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮುಂದೆ ಮಾಡಬೇಕಾದುದರ ಬಗ್ಗೆ ಯಾವ ಕಲ್ಪನೆಯೂ ಇಲ್ಲ' ಎಂದು ಟೀಕಿಸಿದ್ದಾರೆ.
ಫೆಬ್ರುವರಿ 1ರಂದು ನಿರ್ಮಲಾ ಸೀತಾರಾಮನ್ ಅವರು 2020–21ನೇ ಸಾಲಿನ ಬಜೆಟ್ ಮಂಡನೆಗೆ ಸಿದ್ಧತೆ ನಡೆಸಿದ್ದಾರೆ. ದೇಶದ ಮಂದಗತಿಯ ಆರ್ಥಿಕತೆಗೆ ಚೇತರಿಕೆ ನೀಡಲು ಸರ್ಕಾರ ಕೈಗೊಳ್ಳಲಿರುವ ಕ್ರಮಗಳ ಬಗ್ಗೆ ನಿರೀಕ್ಷೆಗಳಿದ್ದು, ಇದೇ ಕಾರಣದಿಂದಾಗಿ ಈ ಬಾರಿಯ ಬಜೆಟ್ ಕುತೂಹಲ ಮೂಡಿಸಿದೆ. ಬಜೆಟ್ ಮಂಡನೆಗೆ ಕೆಲವೇ ದಿನಗಳು ಇರುವಂತೆ ರಾಹುಲ್ ಗಾಂಧಿ ಜಿಡಿಪಿ ಲೆಕ್ಕದೊಂದಿಗೆ ಮುಂದೇನು ಎಂದು ಪ್ರಶ್ನಿಸಿದ್ದಾರೆ.
'ಮೋದಿ ಮತ್ತು ಅವರ ಕನಸಿನ ಆರ್ಥಿಕ ಸಲಹೆಗಾರರ ತಂಡ ನಿಜಕ್ಕೂ ಆರ್ಥಿಕತೆಗೆ ಪೂರ್ಣ ತಿರುವು ನೀಡಿದ್ದಾರೆ. ಹಿಂದೆ ಜಿಡಿಪಿ ಶೇ 7.5 ಮತ್ತು ಹಣದುಬ್ಬರ ಶೇ 3.5ರಷ್ಟಿತ್ತು. ಪ್ರಸ್ತುತ ಜಿಡಿಪಿ ಶೇ 3.5 ಹಾಗೂ ಹಣದುಬ್ಬರ ಶೇ 7.5 ಆಗಿದೆ. ಪ್ರಧಾನಿ ಮತ್ತು ಹಣಕಾಸು ಸಚಿವರಿಗೆ ಮುಂದೆ ಏನು ಮಾಡಬೇಕೆಂಬ ಯಾವ ಯೋಚನೆಯೂ ಇಲ್ಲ' ಎಂದು ಬಜೆಟ್ 2020 ಹ್ಯಾಷ್ಟ್ಯಾಗ್ ಬಳಸಿ ಟ್ವೀಟಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.