ADVERTISEMENT

ಈ ಬಾರಿಯ ಬಜೆಟ್‌ನಲ್ಲಿ ಕೈಗಾರಿಕೆಗೆ ಉತ್ತೇಜನ ನೀಡಿಲ್ಲ: ಸುಧಾಕರ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2020, 12:17 IST
Last Updated 5 ಮಾರ್ಚ್ 2020, 12:17 IST
ಎಫ್ ಕೆಸಿಸಿಐ ಮಾಜಿ ಅಧ್ಯಕ್ಷ ಸುಧಾಕರ ಶೆಟ್ಟಿ ಅವರು ಪ್ರಜಾವಾಣಿ ಸಂದರ್ಶನದಲ್ಲಿ ಪಾಲ್ಗೊಂಡಿದ್ದರು
ಎಫ್ ಕೆಸಿಸಿಐ ಮಾಜಿ ಅಧ್ಯಕ್ಷ ಸುಧಾಕರ ಶೆಟ್ಟಿ ಅವರು ಪ್ರಜಾವಾಣಿ ಸಂದರ್ಶನದಲ್ಲಿ ಪಾಲ್ಗೊಂಡಿದ್ದರು   

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈ ಬಾರಿಯ ಬಜೆಟ್‌‌ನಲ್ಲಿ ಸಾಕಷ್ಟು ಒತ್ತಡಗಳ ಮಧ್ಯೆಯೂ ಎಲ್ಲಾ ವರ್ಗಗಳಿಗೂ ಸಮಾನ ಸವಲತ್ತು ನೀಡಲು ಪ್ರಯತ್ನಿಸಿದ್ದಾರೆ ಎಂದು ಕರ್ನಾಟಕರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಮಾಜಿ ಅಧ್ಯಕ್ಷ ಸುಧಾಕರ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ನಡೆಸಿದಸಂದರ್ಶನದಲ್ಲಿ ಪಾಲ್ಗೊಂಡಿದ್ದ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ವ್ಯಾಪಾರ, ಉದ್ಯಮ ಹಾಗೂ ಸೇವಾ ವಲಯಕ್ಕೆ ಹೆಚ್ಚು ಸವಲತ್ತು ನೀಡದೆ, ಕೇವಲ ಜನಪ್ರಿಯ ಯೋಜನೆಗಳನ್ನಷ್ಟೇ ಜಾರಿಗೆ ತಂದರೆ ಅಭಿವೃದ್ಧಿ ಕಾಣುವುದು ಕಷ್ಟವಾಗುತ್ತದೆ ಎಂದಿದ್ದಾರೆ.

₹ 5 ಸಾವಿರ ಕೋಟಿ ಮೀಸಲಿಡಬೇಕು.

ADVERTISEMENT

ಕಡಿಮೆ ಬಡ್ಡಿದರದಲ್ಲಿ ಸರ್ಕಾರ ಸಾಲ ನೀಡಿಕೆಯನ್ನುಹೆಚ್ಚು ಮಾಡಬೇಕು. ಕರ್ನಾಟಕ ರಾಜ್ಯ ಹಣಕಾಸು ನಿಗಮಕ್ಕೆ ಕೇವಲ 200ಕೋಟಿ ಅನುದಾನ ಕೊಟ್ಟಿದ್ದಾರೆ.₹ 5,000 ಕೋಟಿ ಕೊಡಬೇಕಾಗಿತ್ತು. ಕಡಿಮೆ ಬಡ್ಡಿದರದಲ್ಲಿಹೆಚ್ಚು ಸಾಲ ನೀಡಿದರೆ,ಉದ್ಯಮಿಗಳು ಮುಂದೆ ಬರುತ್ತಾರೆ. ಮಹಿಳಾ ಉದ್ಯಮಿಗಳನ್ನು ಸೆಳೆಯಲು ಸಾಧ್ಯ. ಆದರೆ, ಇಲ್ಲಿ ಕೇವಲ ₹ 200 ಕೋಟಿ ಯಾವುದಕ್ಕೂ ಸಾಲುವುದಿಲ್ಲ ಎಂದರು.

ಈ ಬಾರಿಯ ಬಜೆಟ್‌‌ನಲ್ಲಿ ವ್ಯಾಪಾರ, ಕೈಗಾರಿಕೆ ಹಾಗೂ ಸೇವಾ ವಲಯಗಳ ಕಡೆ ಹೆಚ್ಚು ಗಮನ ಕೊಟ್ಟಿಲ್ಲ ಎಂಬುದು ಬೇಸರವಾಗಿದೆ ಎಂದರು. ಕೃಷಿ ವಲಯ ಹಾಗೂ ಕೈಗಾರಿಕಾ ವಲಯಒಂದಕ್ಕೊಂದು ಪೂರಕವಾಗಿವೆ. ಕೃಷಿ ಇಲ್ಲದ ಉದ್ಯಮ ಇಲ್ಲ, ಉದ್ಯಮ ಇಲ್ಲದೆ ಕೃಷಿ ಇಲ್ಲ. ಯಡಿಯೂರಪ್ಪ ಅವರಂದ್ರೆ ರೈತ ಎಂಬ ಮಾತಿದೆ. ಅದಕ್ಕೆ ತಕ್ಕಂತೆ ಅವರು ಈ ಬಜೆಟ್‌‌ನಲ್ಲಿ ಒತ್ತು ಕೊಟ್ಟಿದ್ದಾರೆ ಎಂದು ಸುಧಾಕರಶೆಟ್ಟಿ ಹೇಳಿದರು.

ಉದ್ಯಮ ಇಲ್ಲದೆ ರೈತ ಇಲ್ಲ. ರೈತ ಬೆಳೆದ ಬೆಳೆಗೆ ಫೈನ್ ಟ್ಯೂನ್ ಮಾಡುವುದು ಉದ್ಯಮ ಕ್ಷೇತ್ರ. ಉದ್ಯಮ ಕ್ಷೇತ್ರದಿಂದ ಕೇಳಿದ್ದ ಬೇಡಿಕೆಯಲ್ಲಿ ಕೇವಲ ಪ್ರವಾಸೋದ್ಯಮ ಸರ್ಕೀಟ್ ಮಾಡುವುದನ್ನು ಬಿಟ್ಟುಈ ಬಾರಿಯ ಬಜೆಟ್‌‌ನಲ್ಲಿ ಉದ್ಯಮ ಕ್ಷೇತ್ರಕ್ಕೆ ಯಾವುದೇ ಸವಲತ್ತು ನೀಡಿಲ್ಲ.

ಇದು ಬೆಂಗಳೂರಿನ ಬಜೆಟ್ ಇಲ್ಲಿ ಕಸ ವಿಲೇವಾರಿಗೆ ₹ 900 ಕೋಟಿ ಮೀಸಲಿಟ್ಟು,ಫೆರಫೆರಲ್ ರಿಂಗ್ ರಸ್ತೆಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ನಾವು ಎಂಟು ಟೌನ್ ಷಿಪ್ ಕೇಳಿದ್ದೆವು. ಅವುಗಳನ್ನು ಕೊಡಲಿಲ್ಲ. ಇದು ಬೇಸರದ ಸಂಗತಿ ಎಂದಿದ್ದಾರೆ. ಕೈಗಾರಿಕೆಗೆ ಹೊಸ ಪಾಲಿಸಿ ತರುವುದಾಗಿ ಹೇಳಿದ್ದಾರೆ. ಅದನ್ನು ನೋಡಬೇಕು. ಉದ್ಯಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಸಕಾಲದಲ್ಲಿ ತಂದಿರುವುದು. ಉದ್ಯಮ ಆರಂಭಿಸುವವರಿಗೆ ವಿದೇಶದಲ್ಲಿರುವಂತೆ ನೇರವಾಗಿ ಜಮೀನು ಖರೀದಿಸಬಹುದು ಎಂದಿದ್ದಾರೆ ಇದು ಆಶಾದಾಯಕ ಬೆಳವಣಿಗೆ ಎಂದರು.

ಇದು ನಮ್ಮ ಕಲ್ಪನೆಯ ಬಜೆಟ್ ಅಲ್ಲ

ಇದು ನಮ್ಮ ಕಲ್ಪನೆಯ ಬಜೆಟ್ ಅಲ್ಲ. ಟು ಟೈಯರ್ ಸಿಟಿಗೆ ಗಮನ ಕೊಡಬೇಕಾಗಿತ್ತು. ಸರ್ಕಾರಜಿಲ್ಲೆಗಳನ್ನು ಅಭಿವೃದ್ಧಿ ಪಡಿಸದೆ ಕೇವಲ ಬೆಂಗಳೂರನ್ನು ಅಭಿವೃದ್ಧಿ ಪಡಿಸಿದರೆ ಯಾವ ಪ್ರಯೋಜನವೂ ಇಲ್ಲ. ಎಲ್ಲಾ ಬೆಂಗಳೂರಿಗೆ ಬಂದು ಕೆಲಸ ಹುಡುಕುತ್ತಾರೆ. ಅದೇ ಜಿಲ್ಲಾವಾರು ಅಭಿವೃದ್ಧಿಪಡಿಸಿದರೆ ಈ ಸಮಸ್ಯೆ ದೂರವಾಗಬಹುದು ಎಂದು ಸುಧಾಕರಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.

ಉದ್ಯೋಗ ನೀಡುವಲ್ಲಿ ಕೈಗಾರಿಕಾ ವಲಯ ಪ್ರಮುಖ ಪಾತ್ರ ವಹಿಸಿದೆ. ಶೇ.52ರಷ್ಟು ಉದ್ಯೋಗಾವಕಾಶಗಳನ್ನು ನೀಡಿದೆ. ಸರ್ಕಾರ ನೀಡುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಖಾಸಗಿ ವಲಯ ಉದ್ಯೋಗ ಸೃಷ್ಟಿ ಮಾಡಿದೆ ಎಂದು ಸುಧಾಕರಶೆಟ್ಟಿ ಹೇಳಿದರು.

ತೆರಿಗೆ ಬರಬೇಕಾದರೆ, ರಫ್ತು ಹೆಚ್ಚಾಗಬೇಕು. ಆದರೆ, ನಮ್ಮಲ್ಲಿ ರಫ್ತು ಹೆಚ್ಚಾಗುತ್ತಿಲ್ಲ. ಆಮದಿನ ಪ್ರಮಾಣ ಕಡಿಮೆ ಮಾಡಿ ರಫ್ತು ಪ್ರಮಾಣ ಹೆಚ್ಚು ಮಾಡಬೇಕು. ಈ ಬಗ್ಗೆ ಸರ್ಕಾರ ಗಮನ ಕೊಡಬೇಕು. ಉದ್ಯೋಗಿ ಮಹಿಳೆಯರಿಗೆ ಪಾಸ್ ನೀಡುವ ಕುರಿತು ಈ ಬಾರಿ ಪ್ರಸ್ತಾವ ಮಾಡಿದ್ದಾರೆ. ಇದೊಂದನ್ನು ಬಿಟ್ಟು ಉಳಿದೆಲ್ಲಾ ಕಾರ್ಯಕ್ರಮಗಳಲ್ಲಿ ಸಾಕಷ್ಟು ಗೊಂದಲಗಳಿವೆ.

ಜಿಎಸ್‌‌ಟಿ ಬಾಬ್ತು ಕೇಂದ್ರದಿಂದ ಇಲ್ಲ

ಜಿಎಸ್‌‌ಟಿ ಬಾಬ್ತು ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ಬರಬೇಕಾದ ₹ 11,800 ಕೋಟಿ ನಿಂತು ಹೋಗಲಿದೆ. ಆಗ ಸರ್ಕಾರ ಸಂಪನ್ಮೂಲ ಕ್ರೋಢೀಕರಣದತ್ತ ಗಮನಕೊಡಬೇಕಾಗುತ್ತದೆ. ವಾಹನ ಖರೀದಿ ಬೆಲೆ ಹೆಚ್ಚಾಗಿದೆ. ಡೀಸೆಲ್ ಬೆಲೆ ಹೆಚ್ಚಾಗಿದೆ. ಇದು ಉದ್ಯಮವಲಯಕ್ಕೆ ಆಶಾದಾಯಕವಲ್ಲ, ಈ ಬಜೆಟ್ ಉದ್ಯಮ ಬದಲಾವಣೆಗೆ ಈ ಬಜೆಟ್ ಆಶಾದಾಯಕವಲ್ಲ ಎಂದು ಸುಧಾಕರಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.

ಕೇವಲ ನಾಲ್ಕು ಜಿಲ್ಲೆಗಳಿಗೆ ಒತ್ತು

ಹೈದರಬಾದ್ ಕರ್ನಾಟಕದಲ್ಲಿ ಕೇವಲ ನಾಲ್ಕು ಜಿಲ್ಲೆಗಳಿಗೆ ಮಾತ್ರ ಒತ್ತು ನೀಡಲಾಗಿದೆ. ಉಳಿದ 9 ಜಿಲ್ಲೆಗಳಿಗೆ ಯಾವುದೇ ಕಾರ್ಯಕ್ರಮ ಪ್ರಕಟಿಸಿಲ್ಲ. ಇವುಗಳಿಗೆ ಹೊಸ ಕ್ಲಸ್ಟರ್ ಯೋಜನೆ ಜಾರಿಗೆ ತರುವುದರ ಕುರಿತು ಒತ್ತು ಕೊಟ್ಟಿದ್ದಾರೆ.ಮೈಸೂರು, ಮಂಗಳೂರು, ಬೆಳಗಾವಿಗಳಲ್ಲಿ ಐಟಿ ಉದ್ಯಮ ಚನ್ನಾಗಿದೆ. ಎಲ್ಲಾ ಜಿಲ್ಲೆಗಳಲ್ಲಿ ವಿಮಾನಯಾನ ಸೌಲಭ್ಯ ಕಲ್ಪಿಸಬೇಕು. ವಿಮಾನಯಾನ ಸೌಲಭ್ಯ ಕಲ್ಪಿಸಿದರೆ, ಹೂಡಿಕೆದಾರರು ಬಂದು ಬಂಡವಾಳ ಹೂಡುತ್ತಾರೆ. ಉದ್ಯಮ ಸ್ಥಾಪನೆಯಾಗುತ್ತದೆ. ಎಲ್ಲಾ ಜಿಲ್ಲೆಗಳಲ್ಲಿ ವಿಮಾನಯಾನ ಸೌಲಭ್ಯ ಇಲ್ಲದಿರುವುದೂ ಕೂಡ ಜಿಲ್ಲೆಗಳಲ್ಲಿ ಹೂಡಿಕೆದಾರರು ಕಡಿಮೆಯಾಗಲುಕಾರಣ ಎಂದರು.

ಮಂಗಳೂರಿಗೆ ಹೆಚ್ಚು ಗಮನ ಕೊಡಬೇಕಾಗಿತ್ತು

ಮಂಗಳೂರಿಗೆ ಇನ್ನೂ ಹೆಚ್ಚಿನ ಸವಲತ್ತು ಕೊಡಬೇಕಾಗಿತ್ತು ಎಂದು ಸುಧಾಕರಶೆಟ್ಟಿ ಹೇಳಿದ್ದಾರೆ. ಬೆಂಗಳೂರಿನಷ್ಟೇ ತೆರಿಗೆಯಲ್ಲಿ ಮುಂದಿರುವ ಮಂಗಳೂರಿಗೆ ಹೆಚ್ಚಿನ ಒತ್ತು ಕೊಡಬೇಕಾಗಿತ್ತು. ಆದರೆ, ಮಂಗಳೂರನ್ನು ಕಡೆಗಣಿಸಲಾಗಿದೆ. ಬೆಂಗಳೂರನ್ನು ಬಿಟ್ಟು ಅಧಿಕಾರಿಗಳು ಇತರೆ ಜಿಲ್ಲೆಗಳ ಬಗ್ಗೆ ಯೋಚನೆ ಮಾಡಬೇಕು. ಆಡಳಿತ ಮತ್ತು ಉದ್ಯಮದಲ್ಲಿ ವಿಕೇಂದ್ರೀಕರಣವಾಗಬೇಕು. ವಿದೇಶದಲ್ಲಿ ಕೈಗಾರಿಕೋದ್ಯಮ ಆರಂಭಿಸಿದರೆ, ಜಮೀನು ಉಚಿತ ಇದೆ. ಆದರೆ, ಇಲ್ಲಿ ಇಲ್ಲ.

₹ 20 ಲಕ್ಷ ನಿವೇಶನ ಖರೀದಿ ಮಾಡುವವನಿಗೆ 2 ಶೇ ಸುಂಕ ಕಟ್ಟಬೇಕು. ಇದು ಸರಿಯಾದುದಲ್ಲ. ಇದು ಮಧ್ಯಮವರ್ಗದವರಿಗೆ ಹೊಡೆತ. ಪ್ರಕೃತಿ ವಿಪತ್ತುಗಳಿಗೆ ಕೇಂದ್ರ ಸರ್ಕಾರ ಪರಿಹಾರ ಕೊಡಬೇಕು.ಕೈಗಾರಿಕೆಗಳಲ್ಲಿ ಸಾಲ ಮಾಡುವ ಬದಲು, ಖರ್ಚು ಕಡಿಮೆ ಮಾಡಿಮೆ ಉದ್ಯಮ ನಡೆಸಬಹುದು. ಆದರೆ, ಸರ್ಕಾರದಲ್ಲಿಕಡಿಮೆ ಮಾಡಲು ಸಾಧ್ಯವಿಲ್ಲ ಎಂದು ಸುಧಾಕರಶೆಟ್ಟಿ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.