ಬೆಂಗಳೂರು: ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ ನಿಗಮ್ ನಿಯಮಿತದ (ಬಿಎಸ್ಎನ್ಎಲ್) ಉದ್ಯೋಗಿಗಳು ಮತ್ತು ಅಧಿಕಾರಿಗಳು ತಮ್ಮ ಹಲವಾರು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇದೇ 18ರಿಂದ ಮೂರು ದಿನಗಳ ಕಾಲ ಮುಷ್ಕರ ನಡೆಸಲಿದ್ದಾರೆ.
ವೇತನ ಪರಿಷ್ಕರಣೆ, ‘4ಜಿ’ ತರಂಗಾಂತರಗಳನ್ನು ಬಿಎಸ್ಎನ್ಎಲ್ಗೆ ಹಂಚಿಕೆ ಮಾಡಲು ಒತ್ತಾಯಿಸಿ ಹಾಗೂ ಸಿಬ್ಬಂದಿಯ ನಿವೃತ್ತಿ ವಯಸ್ಸು ಇಳಿಕೆ ಪ್ರಸ್ತಾವ ಮತ್ತು ನಿಗಮದ ಖಾಸಗೀಕರಣ ಯತ್ನ ವಿರೋಧಿಸಿ ದೇಶದಾದ್ಯಂತ ಮುಷ್ಕರಕ್ಕೆ ಕರೆ ನೀಡಲಾಗಿದೆ.
ನಷ್ಟಪೀಡಿತ ಸಂಸ್ಥೆಯನ್ನು ಲಾಭದ ಹಾದಿಗೆ ತರಲು ಸ್ವಯಂ ನಿವೃತ್ತಿ ಯೋಜನೆ ಜಾರಿಗೆ ತರಲು, ನಿವೃತ್ತಿ ವಯಸ್ಸನ್ನು 58ಕ್ಕೆ ಇಳಿಸಲು ಪರಿಣತರ ಸಮಿತಿ ಸಲಹೆ ನೀಡಿದೆ. ಇದೊಂದು ವೇಳೆ ಜಾರಿಗೆ ಬಂದರೆ 54 ಸಾವಿರ ಉದ್ಯೋಗಗಳು ಕಡಿತವಾಗಲಿವೆ. ಸದ್ಯದ ಸಿಬ್ಬಂದಿ ಸಂಖ್ಯೆ 1.74 ಲಕ್ಷದಷ್ಟಿದೆ. ನಷ್ಟಪೀಡಿತ ಕೇಂದ್ರೋದ್ಯಮವನ್ನು ಕೆಲ ಖಾಸಗಿ ಸಂಸ್ಥೆಗಳು ಸ್ವಾಧೀನಪಡಿಸಿಕೊಳ್ಳುವ ಸಾಧ್ಯತೆ ಇದೆ ಎಂಬುದು ಸಿಬ್ಬಂದಿಯ ಆತಂಕವಾಗಿದೆ.
ಈ ಮುಷ್ಕರಕ್ಕೆ ಹಲವಾರು ಕಾರ್ಮಿಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಕೇಂದ್ರ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆಯು ಕೂಡ ಮುಷ್ಕರ ಬೆಂಬಲಿಸುವ ನಿರ್ಣಯ ಅಂಗೀಕರಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.