ನವದೆಹಲಿ: ಕೇಂದ್ರದ ಮಹತ್ವಾಕಾಂಕ್ಷೆಯ ತೆರಿಗೆ ವಿವಾದ ಪರಿಹಾರ ಯೋಜನೆ ‘ವಿವಾದ್ ಸೆ ವಿಶ್ವಾಸ್’ ಅಡಿಯಲ್ಲಿ 5.10 ಲಕ್ಷಕ್ಕೂ ಹೆಚ್ಚು ತೆರಿಗೆ ವಿವಾದಗಳಲ್ಲಿ 1.25 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ರೆವಿನ್ಯು ಇಲಾಖೆಯ ಮೂಲಗಳು ಹೇಳಿವೆ.
ವಿವಾದ್ ಸೆ ವಿಶ್ವಾಸ್ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಇದುವರೆಗೆ ₹ 97 ಸಾವಿರ ಕೋಟಿ ಮೌಲ್ಯದ ತೆರಿಗೆ ವಿವಾದ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ತಿಳಿಸಿವೆ.
ನೇರ ತೆರಿಗೆ ವಿವಾದ ಪರಿಹಾರ ಯೋಜನೆಗೆ (ಡಿಟಿಡಿಆರ್ಎಸ್) ಹೋಲಿಸಿದರೆ ವಿವಾದ್ ಸೆ ವಿಶ್ವಾಸ್ ಯೋಜನೆಗೆ ಶೇ 15 ಪಟ್ಟು ಹೆಚ್ಚು ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿವಾದ ಇತ್ಯರ್ಥಕ್ಕೆ ಸಂಬಂಧಿಸಿದಂತೆ 153 ಪಟ್ಟು ಉತ್ತಮ ಪ್ರತಿಕ್ರಿಯೆ ಬಂದಿದೆ.
2021–22ನೇ ಸಾಲಿನ ಬಜೆಟ್ನಲ್ಲಿ ಘೋಷಿಸಲಾದ ವಿವಾದ ಪರಿಹಾರ ಸಮಿತಿ (ಡಿಆರ್ಸಿ) ಸ್ಥಾಪನೆಯು ವಿವಾದ್ ಸೆ ವಿಶ್ವಾಸ್ ಯೋಜನೆಯ ಮುಂದುವರಿದ ಭಾಗವಾಗಿದೆ. ಡಿಆರ್ಸಿ ಅಡಿಯಲ್ಲಿ, ಸಣ್ಣ ತೆರಿಗೆದಾರರ ಹಿತದೃಷ್ಟಿಯಿಂದ ದಾವೆಗಳನ್ನು ತೆರಿಗೆ ಲೋಕ ಅದಾಲತ್ ಸ್ವರೂಪದಲ್ಲಿ ಪರಿಹರಿಸಲು ಮತ್ತಷ್ಟು ಉತ್ತೇಜನ ಸಿಗಲಿದೆ. ಅದು ಪಾರದರ್ಶಕ ಮತ್ತು ಡಿಜಿಟಲ್ ರೂಪದಲ್ಲಿ ಇರಲಿದೆ ಎಂದು ಮೂಲಗಳು ತಿಳಿಸಿವೆ.
ವಿವಾದ್ ಸೆ ವಿಶ್ವಾಸ್ ಯೋಜನೆಯಡಿ ಘೋಷಣೆ ಸಲ್ಲಿಸಲು ಕೊನೆಯ ದಿನಾಂಕವನ್ನು ಫೆಬ್ರವರಿ 28 ರವರೆಗೆ ವಿಸ್ತರಿಸಲಾಗಿದ್ದು, ವಿವಾದಿತ ತೆರಿಗೆ ಪಾವತಿಸಲು ಮಾರ್ಚ್ 31 ಕೊನೆಯ ದಿನವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.