ಬೀದರ್: ಇಲ್ಲಿಯ ತರಕಾರಿ ಸಗಟು ಮಾರುಕಟ್ಟೆಯಲ್ಲಿ ಆರು ತಿಂಗಳಿನಿಂದ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದ ಬೆಳ್ಳುಳ್ಳಿ ಈ ವಾರ ದಿಢೀರ್ ಕುಸಿಯಿತು.
ಕಳೆದ ವಾರ ಬೆಳ್ಳುಳ್ಳಿ ಪ್ರತಿ ಕೆಜಿಗೆ ₹ 200ಗೆ ಮಾರಾಟವಾಗಿತ್ತು. ಈ ವಾರ ₹ 100ಗೆ ಮಾರಾಟವಾಗುತ್ತಿದೆ. ಎರಡು ತಿಂಗಳ ಹಿಂದೆ ಈರುಳ್ಳಿ ಹಾಗೂ ಬೆಳ್ಳುಳ್ಳಿ ಬೆಲೆ ಗಗನಕ್ಕೆ ತಲುಪಿ ಜನಸಾಮಾನ್ಯರು ಆತಂಕ ಪಡುವಂತಾಗಿತ್ತು. ಬೆಲೆ ಹೆಚ್ಚಳದ ನಂತರ ಬಹುತೇಕ ರೈತರು ಈರುಳ್ಳಿ ಹಾಗೂ ಬೆಳ್ಳುಳ್ಳಿಗೆ ಆದ್ಯತೆ ನೀಡಿದ್ದರು. ಇದೀಗ ಎರಡೂ ಉತ್ಪನ್ನಗಳು ಅಧಿಕ ಪ್ರಮಾಣದಲ್ಲಿ ಮಾರುಕಟ್ಟೆಗೆ ಹರಿದು ಬಂದ ಕಾರಣ ಬೆಲೆ ಕುಸಿದಿದೆ.
ಕೇಂದ್ರ ಸರ್ಕಾರ ವಿದೇಶದಿಂದಲೂ ಈರುಳ್ಳಿ ಮದು ಮಾಡಿಕೊಂಡಿದೆ. ಸೋಲಾಪುರ, ನಾಸಿಕ್ ಹಾಗೂ ಜಾಲನಾದಿಂದ ಈರುಳ್ಳಿ ಹಾಗೂ ಬೆಳ್ಳುಳ್ಳಿ ಮಾರುಕಟ್ಟೆಗೆ ಬಂದಿದೆ. ಹೀಗಾಗಿ ಸಹಜವಾಗಿಯೇ ಇದರ ಬೆಲೆ ಇಳಿದಿದೆ.
ಹಸಿಮೆಣಸಿನಕಾಯಿ, ಗಜ್ಜರಿ ಹಾಗೂ ಸಬ್ಬಸಗಿ ಸೊಪ್ಪಿನ ಬೆಲೆ ಪ್ರತಿ ಕ್ವಿಂಟಲ್ಗೆ ಒಂದು ಸಾವಿರ ರೂಪಾಯಿ ಹೆಚ್ಚಳವಾಗಿದೆ. ಆಲೂಗಡ್ಡೆ, ಬೀನ್ಸ್, ತೊಂಡೆಕಾಯಿ, ಬೆಂಡೆಕಾಯಿ, ಹಿರೇಕಾಯಿ, ನುಗ್ಗೆಕಾಯಿ ಹಾಗೂ ಮೆಂತೆ ಸೊಪ್ಪಿನ ಬೆಲೆ ಸ್ಥಿರವಾಗಿದೆ.
ಎಲೆಕೋಸು, ಬದನೆಕಾಯಿ, ಬೀಟ್ರೂಟ್, ಕರಿಬೇವು, ಟೊಮೆಟೊ ಬೆಲೆ ಪ್ರತಿ ಕ್ವಿಂಟಲ್ಗೆ ಒಂದು ಸಾವಿರ ರೂಪಾಯಿ ಕಡಿಮೆಯಾಗಿದೆ. ಹೂಕೋಸು ಬೆಲೆ ಪ್ರತಿ ಕ್ವಿಂಟಲ್ಗೆ ₹ 500 ಕಡಿಮೆಯಾಗಿದೆ. ಜಿಲ್ಲೆಯ ರೈತರು ಅಪಾರ ಪ್ರಮಾಣದಲ್ಲಿ ಟೊಮೆಟೊ ಬೆಳೆದು ಬೆಲೆ ಕುಸಿತದಿಂದಾಗಿ ನಷ್ಟ ಅನುಭವಿಸುತ್ತಿದ್ದಾರೆ.
ಬೀದರ್ ಸಗಟು ಮಾರುಕಟ್ಟೆಗೆ ಜಿಲ್ಲೆಯ ಚಿಟಗುಪ್ಪ, ಹುಮನಾಬಾದ್, ಭಾಲ್ಕಿ ಹಾಗೂ ಹುಮನಾಬಾದ್ ತಾಲ್ಲೂಕಿನ ಕೆಲ ಗ್ರಾಮಗಳಿಂದ ಟೊಮೆಟೊ, ಬದನೆಕಾಯಿ, ಹೂಕೋಸು, ಎಲೆಕೋಸು ಹಾಗೂ ಕೊತಂಬರಿ ಬಂದಿದೆ’ ಎಂದು ಹೇಳುತ್ತಾರೆ ತರಕಾರಿ ವ್ಯಾಪಾರಿ ವಿಜಯಕುಮಾರ ಕಡ್ಡೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.