ಬೆಂಗಳೂರು: ಆರ್ಥಿಕ ಬೆಳಣಿಗೆಯಲ್ಲಿ 2025ರಲ್ಲಿ ಕರ್ನಾಟಕವು ದೇಶದಲ್ಲಿ ಮೊದಲ ಸ್ಥಾನಕ್ಕೆ ಬರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ವಿಶ್ವಾಸ ವ್ಯಕ್ತಪಡಿಸಿರು.
‘ದೇಶದ ಅರ್ಥವ್ಯವಸ್ಥೆಯ ಗಾತ್ರವು 5 ಟ್ರಿಲಿಯನ್ ಡಾಲರ್ ಆಗಬೇಕು ಎಂದುಪ್ರಧಾನಿ ನರೇಂದ್ರ ಮೋದಿ ಗುರಿ ಹೊಂದಿದ್ದಾರೆ. ಅವರ ಗುರಿ ಈಡೇರಿಕೆಗೆ 1.5 ಟ್ರಿಲಿಯನ್ ಡಾಲರ್ ಕೊಡುಗೆ ಕರ್ನಾಟಕದ್ದೇ ಇರಲಿದೆ’ ಎಂದು ಬೊಮ್ಮಾಯಿ ಹೇಳಿದರು.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ಕೆಸಿಸಿಐ) ಆಯೋಜಿಸಿದ್ದ ‘ಕರ್ನಾಟಕ ವಿಷನ್ 2025’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಈ ಬಾರಿಯ ಬಜೆಟ್ನಲ್ಲಿ ಆರ್ಥಿಕ ಬೆಳವಣಿಗೆಗೆ ಮಹತ್ವ ನೀಡಲಾಗಿದೆ. ಬಜೆಟ್ ಗಾತ್ರದಲ್ಲಿ ₹ 19,000 ಕೋಟಿ ಹೆಚ್ಚಳವಾಗಿದೆ. ಇದನ್ನು ತಜ್ಞರೂ ನಿರೀಕ್ಷೆ ಮಾಡಿರಲಿಲ್ಲ. ಚುನಾವಣೆಯನ್ನು ಗಮನದಲ್ಲಿ ಇರಿಸಿಕೊಂಡು ಉಚಿತ ಕೊಡುಗೆಗಳನ್ನು ನೀಡಲಾಗುತ್ತದೆ ಎಂಬ ನಿರೀಕ್ಷೆಗಳು ಹಲವರಲ್ಲಿ ಇದ್ದವು’ ಎಂದರು.
‘ಅಭಿವೃದ್ಧಿಯಲ್ಲಿ ಸಮಾನತೆ ಇದ್ದಾಗ ಮಾತ್ರ ಆರ್ಥಿಕತೆ ಬೆಳೆಯುತ್ತದೆ. ಬೆಂಗಳೂರಿನ ಬೆಳವಣಿಗೆಗೆ ವಿಶೇಷ ಒತ್ತು ನೀಡಲಾಗಿದೆ. ನಮ್ಮ ಸರ್ಕಾರವು ಭವಿಷ್ಯದ ಆರ್ಥಿಕತೆಗೆ ಬುನಾದಿ ಹಾಕುತ್ತಿದೆ’ ಎಂದು ಹೇಳಿದರು. ಸಚಿವ ಡಾ.ಕೆ. ಸುಧಾಕರ್, ಎಫ್ಕೆಸಿಸಿಐ ಅಧ್ಯಕ್ಷ ಡಾ.ಐ.ಎಸ್. ಪ್ರಸಾದ್ ಕಾರ್ಯಕ್ರಮದಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.