ಮುಂಬೈ: ಸರ್ಕಾರ ಘೋಷಿಸಿರುವ ₹ 20 ಲಕ್ಷ ಕೋಟಿ ಮೊತ್ತದ ಆರ್ಥಿಕ ಉತ್ತೇಜನಾ ಕೊಡುಗೆಯಿಂದ ದೇಶದ ವಿತ್ತೀಯ ಕೊರತೆಯು ದುಪ್ಪಟ್ಟಾಗಿ ಒಟ್ಟು ಆಂತರಿಕ ಉತ್ಪನ್ನದ ಶೇ 7.9ಕ್ಕೆ ತಲುಪಲಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಂಶೋಧನಾ ವರದಿ ತಿಳಿಸಿದೆ.
ಕೊರೊನಾ ವೈರಾಣು ಪಿಡುಗಿನ ಹೊಡೆತಕ್ಕೆ ನಲುಗಿರುವ ವಿವಿಧ ವಲಯಗಳ ಪುನಶ್ಚೇತನ ಉದ್ದೇಶದ ಆರ್ಥಿಕ ಉತ್ತೇಜನಾ ಕೊಡುಗೆಗಳ ಮೊತ್ತವು ಜಿಡಿಪಿಯ ಶೇ 10ರಷ್ಟಿದೆ. ಈ ಎಲ್ಲ ಉಪಕ್ರಮಗಳಿಂದ ಹೆಚ್ಚಲಿರುವ ನಗದು ಹರಿವು ಪರಿಗಣಿಸಿ ವಿತ್ತೀಯ ಕೊರತೆ ಪರಿಷ್ಕರಿಸಲಾಗಿದೆ.
2011ರಿಂದೀಚೆಗೆ ಸರ್ಕಾರದ ಸಾಲದ ಮೊತ್ತವು ಏರುಗತಿಯಲ್ಲಿ ಇದೆ. ಇದೇ ಅವಧಿಯಲ್ಲಿ ಬಡ್ಡಿ ದರ (ರೆಪೊ ದರ) ಶೇ 8.5 ರಿಂದ ಶೇ 6ಕ್ಕೆ ಗಮನಾರ್ಹವಾಗಿ ಕುಸಿದಿದೆ. 2020ರಲ್ಲಿ ರೆಪೊ ಶೇ 4.4ಕ್ಕೆ ತಗ್ಗಿದೆ. ಸರ್ಕಾರ ಸಂಗ್ರಹಿಸುತ್ತಿರುವ ಹೆಚ್ಚುವರಿ ಸಾಲದ ಹೊರೆಯನ್ನು ನಿಭಾಯಿಸಲು ದೇಶಿ ಆರ್ಥಿಕತೆ ಸಮರ್ಥವಾಗಿದೆಯೇ ಎನ್ನುವ ಪ್ರಶ್ನೆ ಈಗ ಉದ್ಭವವಾಗಿದೆ ಎಂದು ವರದಿ ತಿಳಿಸಿದೆ.
ವಿತ್ತೀಯ ಕೊರತೆ ನಿಯಂತ್ರಣದಲ್ಲಿ: ‘ವಿತ್ತೀಯ ಕೊರತೆಯು ನಿಯಂತ್ರಣದಲ್ಲಿ ಇರುವ ರೀತಿಯಲ್ಲಿ ₹ 20 ಲಕ್ಷ ಕೋಟಿ ಮೊತ್ತದ ಉತ್ತೇಜನಾ ಕೊಡುಗೆ ರೂಪಿಸಲಾಗಿದೆ’ ಎಂದು ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಕೆ. ವಿ. ಸುಬ್ರಮಣಿಯನ್ ಹೇಳಿದ್ದಾರೆ.
’ಕೋವಿಡ್ ಪಿಡುಗಿನಿಂದಾಗಿ ಅಗತ್ಯವಲ್ಲದ ಸರಕು ಮತ್ತು ಸೇವೆಗಳ ಬೇಡಿಕೆ ಗಣನೀಯವಾಗಿ ಕುಸಿಯಲಿದೆ. ಹೀಗಾಗಿ ವಿತ್ತೀಯ ಕೊರತೆ ಅಥವಾ ಉತ್ತೇಜನಾ ಕೊಡುಗೆಗಳಿಂದ ಹಣದುಬ್ಬರ (ಬೆಲೆ ಏರಿಕೆ) ಒತ್ತಡ ಕಂಡು ಬರುವುದಿಲ್ಲ’ ಎಂದೂ ಅವರು ವಿಶ್ಲೇಷಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.