ಬೆಂಗಳೂರು: ‘ಕಾರ್ಮಿಕರಿಗೆ ನೀಡುವ ವೇತನ ಸಹಿತ ರಜೆಗಳನ್ನು 30 ದಿನಗಳಿಂದ 45 ದಿನಗಳಿಗೆ ಹೆಚ್ಚಿಸುವುದರಿಂದ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳಿಗೆ ದೊಡ್ಡ ಹೊಡೆತ ಬೀಳಲಿದೆ. ಆದ್ದರಿಂದ ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ತಿದ್ದುಪಡಿ ಮಸೂದೆಯಲ್ಲಿ ಇರುವ ವೇತನ ಸಹಿತ ರಜೆಯ ಹೆಚ್ಚಳದ ಪ್ರಸ್ತಾವವನ್ನು ಕೈಬಿಡಬೇಕು’ ಎಂದು ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಸ್ಥೆಯ (ಎಫ್ಕೆಸಿಸಿಐ) ಅಧ್ಯಕ್ಷ ಪೆರಿಕಲ್ ಎಂ. ಸುಂದರ್ ಅವರು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರಿಗೆ ಮನವಿ ಮಾಡಿದರು.
ಎಫ್ಕೆಸಿಸಿಐ ಬುಧವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಹೆಬ್ಬಾರ್ ಅವರು, ‘ಮಸೂದೆಯಿಂದ ಸಣ್ಣ ಉದ್ದಿಮೆಗಳಿಗೆ ತೊಂದರೆ ಆಗದಂತೆ, ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಕಾರ್ಮಿಕ ವಿರೋಧಿ ನೀತಿಯನ್ನು ಸರ್ಕಾರ ತಾಳಿದೆ ಎನ್ನುವ ಸಂದೇಶ ಕಾರ್ಮಿಕ ವರ್ಗಕ್ಕೂ ಹೋಗದ ರೀತಿಯಲ್ಲಿ ಬಹಳ ಎಚ್ಚರಿಕೆಯಿಂದ ನಿರ್ಧಾರ ಕೈಗೊಳ್ಳಲಾಗುವುದು’ ಎಂದರು.
ಎಫ್ಕೆಸಿಸಿಐ ಮನವಿಗಳು
* ಕನಿಷ್ಠ ವೇತನ ವಿಷಯದಲ್ಲಿ ದೊಡ್ಡ ಪ್ರಮಾಣದ ಉದ್ದಿಮೆಗಳ ಜೊತೆಗೆ ಎಂಎಸ್ಎಂಇಗಳನ್ನು ಹೋಲಿಸಬಾರದು
* ಸರಾಗವಾಗಿ ಉದ್ದಿಮೆ ನಡೆಸಲು ಲೈಸೆನ್ಸ್ ಪಡೆಯಲು ಮತ್ತು ರಿಟರ್ನ್ಸ್ ಸಲ್ಲಿಕೆಗೆ ಆನ್ಲೈನ್ ವ್ಯವಸ್ಥೆ ಕಲ್ಪಿಸಬೇಕು.
* ಇಎಸ್ಐ ಆಸ್ಪತ್ರೆಗಳ ಸ್ಥಿತಿ ಶೋಚನೀಯವಾಗಿದ್ದು ಈ ಕುರಿತು ಗಮನ ಹರಿಸಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.