ನವದೆಹಲಿ: ಮೊದಲ ಹಂತದಲ್ಲಿ ಒಂದು ಲಕ್ಷ ಪ್ರಾಚೀನ ಹಸ್ತಪ್ರತಿಗಳನ್ನು ಡಿಜಿಟಲ್ ರೂಪದಲ್ಲಿ ರಕ್ಷಿಸಿಡಲು ಡಿಜಿಟಲ್ ಎಪಿಗ್ರಫಿ ಮ್ಯೂಸಿಯಂ ‘ಭಾರತ್ ಶೇರ್ಡ್ ರೆಪೊಸಿಟರಿ ಆಫ್ ಇನ್ಸ್ಕ್ರಿಪ್ಶನ್’ ಸ್ಥಾಪಿಸಲಾಗುವುದು ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದರು.
ಅಲ್ಲದೆ, ಜೌಗು ಪ್ರದೇಶಗಳ ಅತ್ಯುತ್ತಮ ಬಳಕೆ ಉತ್ತೇಜಿಸಲು ಮತ್ತು ಜೀವವೈವಿಧ್ಯತೆ ಹೆಚ್ಚಿಸಲು ಮುಂದಿನ ಮೂರು ವರ್ಷಗಳಲ್ಲಿ ಅಮೃತ್ ಧರೋಹರ್ ಯೋಜನೆ ಜಾರಿಗೆ ತರಲಾಗುವುದು ಎಂದು ಅವರು ಹೇಳಿದರು.
‘ಜೌಗು ಪ್ರದೇಶಗಳು ಜೀವವೈವಿಧ್ಯತೆ ಸಂರಕ್ಷಿಸುವ ಪ್ರಮುಖ ಪರಿಸರ ವ್ಯವಸ್ಥೆಗಳಾಗಿವೆ. ಪ್ರಧಾನಿ ಮೋದಿ ಅವರು ತಮ್ಮ ಇತ್ತೀಚಿನ ‘ಮನ್ ಕಿ ಬಾತ್’ನಲ್ಲಿ ಇದರ ಮಹತ್ವದ ಬಗ್ಗೆ ಪ್ರಸ್ತಾಪಿಸಿದ್ದರು. 2014ಕ್ಕಿಂತ ಮೊದಲು ರಾಮ್ಸರ್ನಂಥ ತಾಣಗಳು ಕೇವಲ 26 ಇದ್ದವು. ಈಗ ಅವುಗಳ ಸಂಖ್ಯೆ 275ಕ್ಕೆ ಏರಿದೆ’ ಎಂದು ಸಚಿವೆ ಹೇಳಿದರು.
‘ಜೌಗು ಪ್ರದೇಶಗಳ ಸಂರಕ್ಷಣೆಯಲ್ಲಿ ಸ್ಥಳೀಯ ಸಮುದಾಯಗಳು ಯಾವಾಗಲೂ ಮುಂಚೂಣಿಯಲ್ಲಿವೆ. ಈ ಪ್ರದೇಶಗಳ ಅತ್ಯುತ್ತಮ ಬಳಕೆ ಉತ್ತೇಜಿಸಲು ಮತ್ತು ಜೀವವೈವಿಧ್ಯತೆ, ಇಂಗಾಲದ ದಾಸ್ತಾನು ಹೆಚ್ಚಿಸುವ ಉದ್ದೇಶದಿಂದ ಅಮೃತ್ ಧರೋಹರ್ ಯೋಜನೆ ಜಾರಿಗೆ ತರಲಾಗುತ್ತಿದೆ. ಇದರಿಂದ ಪರಿಸರ ಪ್ರವಾಸೋದ್ಯಮ ಅವಕಾಶಗಳು ಮತ್ತು ಸ್ಥಳೀಯ ಸಮುದಾಯಗಳಿಗೆ ಆದಾಯ ಮೂಲವು ಸೃಷ್ಟಿಯಾಗಲಿದೆ’ ಎಂದು ನಿರ್ಮಲಾ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.