ನವದೆಹಲಿ: ‘ಮ್ಯೂಚುವಲ್ ಫಂಡ್ ಉದ್ಯಮದಲ್ಲಿ ಎದುರಾಗಿರುವ ಬಿಕ್ಕಟ್ಟನ್ನು ಬಗೆಹರಿಸಲು ಕೂಡಲೇ ಕ್ರಮ ಕೈಗೊಳ್ಳುವಂತೆ’ ಕಾಂಗ್ರೆಸ್ನ ಹಿರಿಯ ನಾಯಕ ಪಿ. ಚಿದಂಬರಂ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
‘ಫ್ರ್ಯಾಂಕ್ಲಿನ್ ಟೆಂಪಲ್ಟನ್ ಸಂಸ್ಥೆಯು ತನ್ನ ಆರು ಸಾಲ ನಿಧಿ ಯೋಜನೆಗಳನ್ನು ಹಠಾತ್ತನೆ ರದ್ದುಪಡಿಸಿರುವ ನಿರ್ಧಾರವು ಹೂಡಿಕೆದಾರರು, ಉದ್ಯಮ ಮತ್ತು ಹಣಕಾಸು ಮಾರುಕಟ್ಟೆಗೆ ಅತ್ಯಂತ ಕಳವಳಕಾರಿಯಾಗಿದೆ’ ಎಂದು ಅವರು ಹೇಳಿದ್ದಾರೆ.
‘ಶನಿವಾರ ಮತ್ತು ಭಾನುವಾರ ಮಾರುಕಟ್ಟೆಯಲ್ಲಿ ವಹಿವಾಟಿಗೆ ರಜೆ ಇರುವುದು ಅದೃಷ್ಟದ ವಿಷಯ. ಕೇಂದ್ರ ಸರ್ಕಾರ ಕೂಡಲೇ ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸುವ ನಿರೀಕ್ಷೆಯಿದೆ’ ಎಂದರು.
‘ಜಾಗತಿಕ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದ ಸಂದರ್ಭದಲ್ಲಿ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಮ್ಯೂಚುವಲ್ ಫಂಡ್ ಕಂಪನಿಗಳು ನಗದು ಬಿಕ್ಕಟ್ಟು ಎದುರಿಸಿದ್ದವು. ಆಗ ಕೇಂದ್ರ ಸರ್ಕಾರವು ತಕ್ಷಣವೇ ಆರ್ಬಿಐ, ಸೆಬಿ, ಬ್ಯಾಂಕ್ಗಳ ಒಕ್ಕೂಟ, ಮ್ಯೂಚುವಲ್ ಫಂಡ್ ಕಂಪನಿಗಳು ಮತ್ತು ಇನ್ನೂ ಹಲವರ ಸಲಹೆ ಪಡೆದಿತ್ತು. ಹಣಕಾಸು ಸ್ಥಿರತೆ ಮತ್ತು ಅಭಿವೃದ್ಧಿ ಸಮಿತಿಯ ತುರ್ತು ಸಭೆ ಕರೆದು ದಿನದಾಂತ್ಯದೊಳಗೆ ಪರಿಹಾರ ಕೊಂಡುಕೊಳ್ಳಲಾಗಿತ್ತು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.