ADVERTISEMENT

PV Web Exclusive: ಪ್ರಯಾಣಿಕರ ಕೊರತೆ ನೀಗಿಸಿದ ಸರಕು

ಅಕ್ಟೋಬರ್‌ನಲ್ಲಿ ದಾಖಲೆ ನಿರ್ಮಿಸಿದ ದಕ್ಷಿಣ ರೈಲ್ವೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2020, 12:04 IST
Last Updated 26 ನವೆಂಬರ್ 2020, 12:04 IST
ಚಿನ್ನಸೇಲಂನಿಂದ ಸುರತ್ಕಲ್‌ಗೆ ರೋರೊ ರೈಲಿನ ಮೂಲಕ 100 ಕೊಯ್ಲು ಯಂತ್ರಗಳನ್ನು ಸಾಗಣೆ ಮಾಡಲಾಯಿತು.
ಚಿನ್ನಸೇಲಂನಿಂದ ಸುರತ್ಕಲ್‌ಗೆ ರೋರೊ ರೈಲಿನ ಮೂಲಕ 100 ಕೊಯ್ಲು ಯಂತ್ರಗಳನ್ನು ಸಾಗಣೆ ಮಾಡಲಾಯಿತು.   

ಮಂಗಳೂರು: ಕೋವಿಡ್–19 ಸಂದರ್ಭದಲ್ಲಿ ಪ್ರಯಾಣಿಕ ರೈಲುಗಳ ಸೇವೆ ಸ್ಥಗಿತವಾಗಿದ್ದರೂ, ಸರಕು ಸಾಗಣೆ ಮಾತ್ರ ನಿರಂತರವಾಗಿ ನಡೆದಿದೆ. ಸಾಂಕ್ರಾಮಿಕದ ಮಧ್ಯೆಯೇ ಅಕ್ಟೋಬರ್‌ನಲ್ಲಿ ದಕ್ಷಿಣ ರೈಲ್ವೆ ಸರಕು ಸಾಗಣೆಯಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿದೆ.

ಒಂದೇ ತಿಂಗಳಲ್ಲಿ ದಕ್ಷಿಣ ರೈಲ್ವೆ 20 ಲಕ್ಷ ಟನ್ ಸರಕು ಸಾಗಣೆ ಮಾಡುವ ಮೂಲಕ ₹162.42 ಕೋಟಿ ಆದಾಯ ಗಳಿಸಿದೆ. ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ ದಕ್ಷಿಣ ರೈಲ್ವೆ 1.47 ಕೋಟಿ ಟನ್‌ ಸರಕು ಸಾಗಿಸುವ ಮೂಲಕ ₹1,167 ಕೋಟಿ ಆದಾಯವನ್ನು ತನ್ನದಾಗಿಸಿಕೊಂಡಿದೆ.

ಕೋವಿಡ್ ಸಂದರ್ಭದಲ್ಲಿ ಪ್ರಯಾಣಿಕ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ದಿನಬಳಕೆ ವಸ್ತುಗಳ ಪೂರೈಕೆಯೂ ಬಹುದೊಡ್ಡ ಸವಾಲಾಗಿತ್ತು. ಇದನ್ನು ಅವಕಾಶವಾಗಿ ಬಳಸಿಕೊಂಡ ದಕ್ಷಿಣ ರೈಲ್ವೆ, ದೇಶದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುವ ಮೂಲಕ ಜನರ ಬೇಡಿಕೆಗಳನ್ನು ಪೂರೈಸುವುದರ ಜೊತೆಗೆ ಆದಾಯವನ್ನೂ ಗಳಿಸುವಲ್ಲಿ ಯಶಸ್ವಿಯಾಗಿದೆ.

ADVERTISEMENT

ಇದೇ ಮೊದಲ ಬಾರಿಗೆ ಅಕ್ಟೋಬರ್‌ನಲ್ಲಿ ತಮಿಳುನಾಡು ಆಹಾರ ನಿಗಮದಿಂದ 2.16 ಲಕ್ಷ ಟನ್‌ ಅಕ್ಕಿಯನ್ನು ಸಾಗಣೆ ಮಾಡಲಾಗಿದೆ. ಇದೇ ರೀತಿ 56 ರೈಲುಗಳ ಮೂಲಕ ಅಟೊಮೊಬೈಲ್‌ ಬಿಡಿಭಾಗಗಳನ್ನು ಸಾಗಣೆ ಮಾಡಲಾಗಿದೆ. ಇದರ ಜೊತೆಗೆ ಚಿನ್ನಸೇಲಂನಿಂದ ಕೊಯ್ಲು ಯಂತ್ರಗಳನ್ನು ಕರ್ನಾಟಕ ಹಾಗೂ ಆಂಧ್ರಪ್ರದೇಶಕ್ಕೆ ಸಾಗಣೆ ಮಾಡಲಾಗಿದೆ.

ಮಂಗಳೂರಿನ ಕೈಗಾರಿಕಾ ಘಟಕ ತಯಾರಿಸಿದ 2,200 ಟನ್ ತಾಳೆ ಎಣ್ಣೆಯನ್ನು ಉತ್ತರ ಪ್ರದೇಶದ ಲಕ್ನೋಗೆ ದಕ್ಷಿಣ ರೈಲ್ವೆ ಪಾಲ್ಘಾಟ್‌ ವಿಭಾಗದಿಂದ ಸಾಗಣೆ ಮಾಡಲಾಗಿದೆ. ಇದರಿಂದ ರೈಲ್ವೆಗೆ ₹37.05 ಲಕ್ಷ ಆದಾಯ ದೊರೆತಿದೆ ಎಂದು ಪಾಲ್ಘಾಟ್‌ ವಿಭಾಗದ ಹಿರಿಯ ವಾಣಿಜ್ಯ ಪ್ರಬಂಧಕ ಜೆರಿನ್‌ ಜಿ. ಆನಂದ್‌ ತಿಳಿಸಿದ್ದಾರೆ.

ಹರಿಯಾಣದ ಸೋನೆಪತ್‌ನ ಶಿಶು ಆಹಾರ ತಯಾರಿಕೆ ಕಂಪನಿಯು ಬಾಂಗ್ಲಾದೇಶಕ್ಕೆ ಸರಕು ಸಾಗಿಸಲು ಮುಂದಾಗಿದೆ. ಶಿಶು ಆಹಾರವನ್ನು ಹೊತ್ತ 15 ಬೋಗಿಗಳು ಸೋನೆಪತ್‌ನಿಂದ ಮಂಗಳೂರಿಗೆ ಬಂದಿದ್ದು, ಇಲ್ಲಿಂದ ಎನ್‌ಎಂಪಿಟಿ ಮೂಲಕ ಬಾಂಗ್ಲಾದೇಶಕ್ಕೆ ಸರಕು ರವಾನಿಸಲಾಗಿದೆ. ಕಾಸರಗೋಡಿನ ಅಡಿಕೆಯನ್ನು ತಮಿಳುನಾಡಿನ ಕುಂಭಕೋಣಂಗೆ ರವಾನಿಸಲಾಗಿದೆ. ಇದೇ ರೀತಿ ಹಲವು ಸರಕುಗಳ ಸಾಗಣೆಯ ಬಗ್ಗೆ ಕಾರ್ಯಯೋಜನೆಯನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಫಲ ನೀಡಿದ ಬಿಡಿಜಿ:

ಪ್ರಯಾಣಿಕರ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ದಕ್ಷಿಣ ರೈಲ್ವೆಯು ಸರಕು ಸಾಗಣೆಯ ಅವಕಾಶಗಳನ್ನು ಬಳಸಿಕೊಳ್ಳಲು ಮುಂದಾಗಿತ್ತು.

ದಕ್ಷಿಣ ರೈಲ್ವೆ ಪಾಲ್ಘಾಟ್‌ ವಿಭಾಗೀಯ ಮಹಾಪ್ರಬಂಧಕ ಪ್ರತಾಪ್‌ಸಿಂಗ್‌ ಶಮಿ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದಿರುವ ವಹಿವಾಟು ಅಭಿವೃದ್ಧಿ ಘಟಕ(ಬುಸಿನೆಸ್ ಡೆವಲಪ್‌ಮೆಂಟ್‌ ಗ್ರೂಪ್‌)ವು, ಸಹಾಯಕ ವಿಭಾಗೀಯ ಮಹಾಪ್ರಬಂಧಕ ಸಿ.ಟಿ. ಶಕೀರ್ ಹುಸೇನ್‌, ಹಿರಿಯ ವಿಭಾಗೀಯ ನಿರ್ವಹಣಾ ಪ್ರಬಂಧಕ ಪಿ.ಎಲ್‌. ಅಶೋಕಕುಮಾರ್‌ ಉಸ್ತುವಾರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಹಿರಿಯ ವಿಭಾಗೀಯ ವಾಣಿಜ್ಯ ಪ್ರಬಂಧಕ ಜೆರಿನ್‌ ಜಿ. ಆನಂದ, ಹಿರಿಯ ಮೆಕ್ಯಾನಿಕಲ್‌ ಪ್ರಬಂಧಕ ಕೆ.ವಿ. ಸುಂದರೇಶನ್‌, ಹಿರಿಯ ವಿಭಾಗೀಯ ಹಣಕಾಸು ಪ್ರಬಂಧಕ ಎ.ಪಿ. ಸಿವಚಂದರ್ ಈ ಘಟಕದ ಸದಸ್ಯರಾಗಿದ್ದಾರೆ.

‘ಈ ಘಟಕದ ಸದಸ್ಯರು ಸರಕು ಸಾಗಣೆಯ ಹೊಸ ಸಾಧ್ಯತೆಗಳ ಬಗ್ಗೆ ಪರಿಶೀಲಿಸಿ, ಕೈಗಾರಿಕೋದ್ಯಮಿಗಳು, ವರ್ತಕರ ಸಂಘಗಳ ಜತೆಗೆ ನಿಯಮಿತವಾಗಿ ಸಂವಹನ ನಡೆಸುತ್ತಿದ್ದಾರೆ. ಸದ್ಯದ ಸರಕು ಸಾಗಣೆ ಮಾದರಿ ಹಾಗೂ ಬರಲಿರುವ ದಿನಗಳಲ್ಲಿ ಅನುಸರಿಸಬೇಕಾದ ಮಾದರಿಗಳ ಕುರಿತು ಚರ್ಚೆ ನಡೆಸುವ ಮೂಲಕ ರೈಲ್ವೆಯಿಂದ ಸರಕು ಸಾಗಣೆ ಹೆಚ್ಚಿಸಲು ಕಾರ್ಯಯೋಜನೆ ರೂಪಿಸಿದ್ದಾರೆ’ ಎಂದು ಪಾಲ್ಘಾಟ್‌ನ ವಿಭಾಗೀಯ ಮಹಾಪ್ರಬಂಧಕ ಪ್ರತಾಪ್‌ಸಿಂಗ್‌ ಶಮಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.