ADVERTISEMENT

ರಸಗೊಬ್ಬರಕ್ಕೆ ಹೆಚ್ಚುವರಿಯಾಗಿ ₹ 1.10 ಲಕ್ಷ ಕೋಟಿ ಸಬ್ಸಿಡಿ

ಪಿಟಿಐ
Published 22 ಮೇ 2022, 19:39 IST
Last Updated 22 ಮೇ 2022, 19:39 IST
   

ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ರಸಗೊಬ್ಬರ ದರ ಭಾರಿ ಏರಿಕೆ ಕಂಡಿರುವ ಬೆನ್ನಲ್ಲೇ ಕೇಂದ್ರ ಸರ್ಕಾರವು ಹೆಚ್ಚುವರಿಯಾಗಿ ₹ 1.10 ಲಕ್ಷ ಕೋಟಿ ಮೊತ್ತವನ್ನು ರಸಗೊಬ್ಬರ ಸಬ್ಸಿಡಿಗೆ ನೀಡುವುದಾಗಿ ಹೇಳಿದೆ.

ಈ ನಿರ್ಧಾರದಿಂದಾಗಿ 2022–23ನೇ ಹಣಕಾಸು ವರ್ಷಕ್ಕೆ ರಸಗೊಬ್ಬರಕ್ಕೆ ನೀಡುವ ಒಟ್ಟಾರೆ ಸಬ್ಸಿಡಿಯು ₹ 2.15 ಲಕ್ಷ ಕೋಟಿಗೆ ತಲುಪುವ ಅಂದಾಜು ಮಾಡಲಾಗಿದೆ.

ಜಾಗತಿಕ ಮಟ್ಟದಲ್ಲಿ ಆಗಿರುವ ಬೆಲೆ ಏರಿಕೆಯ ದುಷ್ಪರಿಣಾಮದಿಂದ ರೈತರನ್ನು ರಸಗೊಬ್ಬರ ಸಬ್ಸಿಡಿ ದರ ಏರಿಕೆಯ ಮೂಲಕ ರಕ್ಷಿಸಲಾಗಿದೆ. ಬಜೆಟ್‌ನಲ್ಲಿ ₹ 1.05 ಲಕ್ಷ ಕೋಟಿ ಸಬ್ಸಿಡಿ ನಿಗದಿಪಡಿಸಿದ್ದು, ಅದಲ್ಲದೆ ಹೆಚ್ಚುವರಿಯಾಗಿ ₹ 1.10 ಲಕ್ಷ ಕೋಟಿಯನ್ನು ನೀಡಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

ADVERTISEMENT

2021–22ನೇ ಹಣಕಾಸು ವರ್ಷದಲ್ಲಿ ರಸಗೊಬ್ಬರ ಸಬ್ಸಿಡಿಗೆ ₹ 1.62 ಲಕ್ಷ ಕೋಟಿ ಮೊತ್ತ ನೀಡಲಾಗಿತ್ತು.

ಉಕ್ಕಿನ ಕೆಲವು ಕಚ್ಚಾ ಸಾಮಗ್ರಿಗಳ ಮೇಲಿನ ಆಮದು ಸುಂಕವನ್ನು ಕೈಬಿಡಲಾಗಿದೆ. ಇದರಿಂದಾಗಿ ಉಕ್ಕು ಉತ್ಪನ್ನಗಳ ದರ ಕಡಿಮೆ ಆಗಲಿದೆ. ಇದರ ಜೊತೆಗೆ ಕಬ್ಬಿಣದ ಅದಿರಿನ ಲಭ್ಯತೆ ಸುಧಾರಿಸುವ ನಿಟ್ಟಿನಲ್ಲಿ ರಫ್ತು ಸುಂಕವನ್ನು ಶೇ 30ರಿಂದ ಶೇ 50ಕ್ಕೆ ಹೆಚ್ಚಿಸಲಾಗಿದೆ. ಭಾನುವಾರದಿಂದ ಈ ಬದಲಾವಣೆಗಳು ಜಾರಿಗೆ ಬರಲಿವೆ.

ಪ್ಲಾಸ್ಟಿಕ್‌ ಉದ್ಯಮದಲ್ಲಿ ಬಳಸುವ ಕಚ್ಚಾ ಸಾಮಗ್ರಿಗಳ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡಲಾಗಿದೆ. ಸಿಮೆಂಟ್‌ ಲಭ್ಯತೆಯನ್ನು ಸುಧಾರಿಸಲು ಮತ್ತು ಸಿಮೆಂಟ್ ಬೆಲೆ ಕಡಿಮೆ ಮಾಡಲು ಅಗತ್ಯವಾದ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ನಿರ್ಮಲಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.