ಮುಂಬೈ: ಬ್ಯಾಂಕ್ಗಳು ಸಾಲಗಾರರನ್ನು ‘ಉದ್ದೇಶಪೂರ್ವಕ ಸುಸ್ತಿದಾರ’ ಎಂದು ಘೋಷಿಸಲು ಇರುವ ನಿಯಮಗಳನ್ನು ಇನ್ನಷ್ಟು ಬಿಗಿಗೊಳಸಲು ಭಾರತೀಯ ರಿಸರ್ವ್ ಬ್ಯಾಂಕ್ ಮುಂದಾಗಿದೆ.
ಈ ಸಂಬಂಧ ಕರಡು ನಿಯಮಗಳನ್ನು ಆರ್ಬಿಐ ಸಿದ್ಧಪಡಿಸಿದೆ. ಅದರಂತೆ, ₹25 ಲಕ್ಷಕ್ಕೂ ಹೆಚ್ಚಿನ ಮೊತ್ತವನ್ನು ಬಾಕಿ ಉಳಿಸಿಕೊಂಡಿದ್ದು, ಸಾಲ ಮರುಪಾವತಿಸುವ ಸಾಮರ್ಥ್ಯ ಇದ್ದರೂ ಬಾಕಿ ತೀರಿಸಲು ನಿರಾಕರಿಸಿದರೆ ಅಂತಹ ಸಾಲಗಾರರನ್ನು ‘ಉದ್ದೇಶಪೂರ್ವ ಸುಸ್ತಿದಾರ’ ಎಂದು ಪರಿಗಣಿಸುವಂತೆ ಬ್ಯಾಂಕ್ಗಳಿಗೆ ಸಲಹೆ ನೀಡಿದೆ.
ವಸೂಲಾಗದ ಸಾಲದ ಖಾತೆಯನ್ನು ಉದ್ದೇಶಪೂರ್ವ ಸುಸ್ತಿದಾರ ಖಾತೆ ಎಂದು ಆರು ತಿಂಗಳ ಒಳಗಾಗಿ ಘೋಷಿಸುವಂತೆಯೂ ಹೇಳಿದೆ. ಈ ಸಂಬಂಧ ಪರಿಶೀಲನಾ ಸಮಿತಿಯೊಂದನ್ನು ರಚನೆ ಮಾಡಿ, ಉದ್ದೇಶಪೂರ್ವಕ ಸುಸ್ತಿದಾರ ಎಂದು ಘೋಷಿಸುವ ಮುನ್ನ ಸಾಲಗಾರರಿಂದ 15 ದಿನಗಳ ಒಳಗೆ ಲಿಖಿತ ರೂಪದಲ್ಲಿ ಪ್ರತಿಕ್ರಿಯೆ ಪಡೆಯುಬೇಕು. ಅಗತ್ಯ ಬಿದ್ದಲ್ಲಿ ಖುದ್ದು ವಿಚಾರಣೆ ನಡೆಸಬೇಕು ಎಂದು ಕರಡು ನೀತಿಯಲ್ಲಿ ಬ್ಯಾಂಕ್ಗಳಿಗೆ ಸಲಹೆ ನೀಡಲಾಗಿದೆ.
ಒಮ್ಮೆ ಉದ್ದೇಶಪೂರ್ವಕ ಸುಸ್ತಿದಾರ ಎಂದು ಗುರುತಿಸಿದ ಬಳಿಕ ಸಾಲ ಪಡೆದವರು ಆ ಸ್ಥಿತಿಯಿಂದ ಹೊರಬರುವವರೆಗೆ ಹೆಚ್ಚುವರಿ ಸಾಲ ನೀಡಬಾರದು ಎಂದು ಹೇಳಿದೆ. ಕರಡು ನಿಯಮಗಳ ಕುರಿತು ಪ್ರತಿಕ್ರಿಯೆ ನೀಡಲು ಅಕ್ಟೋಬರ್ 31ರವರೆಗೆ ಅವಕಾಶ ನೀಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.