ADVERTISEMENT

ಅಭಿವೃದ್ಧಿ ಹಿಂಜರಿತದ ಮಧ್ಯದಲ್ಲಿದೆ ಭಾರತ: ರಘುರಾಮ್‌ ರಾಜನ್‌

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2019, 9:58 IST
Last Updated 8 ಡಿಸೆಂಬರ್ 2019, 9:58 IST
   

ನವದೆಹಲಿ:‘ಭಾರತ ಸದ್ಯ ಅಭಿವೃದ್ಧಿ ಹಿಂಜರಿತದಮಧ್ಯದಲ್ಲಿ ನಿಂತಿದೆ. ಅಧಿಕಾರ ಎಂಬುದು ಅತಿಯಾಗಿ ಪ್ರಧಾನಮಂತ್ರಿ ಕಚೇರಿಯಲ್ಲಿ ಕೇಂದ್ರಿಕೃತವಾಗಿರುವುದರ ಪರಿಣಾಮಣವಿದು,’ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಮಾಜಿ ಗವರ್ನರ್‌ ರಘುರಾಮ್‌ ರಾಜನ್‌ ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿ ಮಾಧ್ಯಮ ‘ಇಂಡಿಯಾ ಟುಡೆ’ನಲ್ಲಿ ಬರೆದಿರುವ ಅಂಕಣದಲ್ಲಿ ಅವರು ಭಾರತದ ಹಣಕಾಸು ಪರಿಸ್ಥಿತಿ ಮತ್ತು ಆರ್ಥಿಕ ಹಿಂಜರಿಕೆ ಕುರಿತು ಸಾಕಷ್ಟು ಮಾತನಾಡಿದ್ದಾರೆ.

‘ಉದಾರೀಕೃತ ಬಂಡವಾಳ ವ್ಯವಸ್ಥೆ, ಭೂಮಿ ಮತ್ತು ಕಾರ್ಮಿಕ ವಲಯದಲ್ಲಿ ಸುಧಾರಣೆಗಳಾಗಬೇಕಿವೆ. ಅಭಿವೃದ್ಧಿಗೆ ಆದ್ಯತೆ ನೀಡುವಂತೆ ಹೂಡಿಕೆಗೂ ಹೆಚ್ಚಿನ ಆದ್ಯತೆ ನೀಡಬೇಕು,’ ಎಂದಿರುವ ಅವರು ‘ಆಂತರಿಕ ದಕ್ಷತೆ ಹೆಚ್ಚಿಸಲು ಮತ್ತು ಜಾಗತಿಕ ಮಾರುಕಟ್ಟೆ ಪೈಪೋಟಿಯನ್ನು ವೃದ್ಧಿಸಲು ಭಾರತ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಮ್ಮತಿ ನೀಡಬೇಕು,’ ಎಂದೂ ರಾಜನ್‌ ಹೇಳಿದ್ದಾರೆ.

ADVERTISEMENT

‘ದೇಶದ ಆರ್ಥಿಕತೆಗೆ ಏನಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕಿದ್ದರೆ ಮೊದಲಿಗೆ ನಾವು ಕೇಂದ್ರದ ಆಡಳಿತದ ಸ್ವರೂಪವನ್ನು ಅಧ್ಯಯನ ಮಾಡಬೇಕು. ನೀತಿ ನಿರ್ಧಾರಗಳನ್ನು ಕೈಗೊಂಡರೆ ಸಾಲದು. ಪ್ರಧಾನಿಯೊಬ್ಬರ ಸುತ್ತಲೂ ಇರುವವರಿಂದ ಹೊಸ ಹೊಸ ಕಲ್ಪನೆಗಳು, ಯೋಜನೆಗಳು ಹೊರ ಹೊಮ್ಮಬೇಕು,’ ಎಂದು ಅವರು ಬರೆದಿದ್ದಾರೆ.

‘ಪಕ್ಷವೊಂದರ ರಾಜಕೀಯ ಮತ್ತು ಸಾಮಾಜಿಕ ಅಜೆಂಡಾ ಯಾವಾಗ ಚೆನ್ನಾಗಿ ಕೆಲಸ ಮಾಡುತ್ತದೆ ಎಂದರೆ, ಆ ಕ್ಷೇತ್ರಕ್ಕೆ ಸಂಬಂಧಿಸಿದ ಪರಿಣತರು ಜೊತೆಯಲ್ಲಿದ್ದಾಗ. ಆ ಕೆಲಸ ಈಗಾಗಲೇ ಚೆನ್ನಾಗಿ ಆಗಿದೆ. ಆದರೆ, ಆರ್ಥಿಕತೆ ಕುರಿತ ಸೂಕ್ತ ಕಾರ್ಯ ಸೂಚಿ ಅಜೆಂಡಾಗಳು ಇಲ್ಲದಾಗ ಮತ್ತು ರಾಜ್ಯ ಮತ್ತು ರಾಷ್ಟ್ರದ ಆರ್ಥಿಕತೆ ಬಗ್ಗೆ ವ್ಯತ್ಯಾಸಗಳು ತಿಳಿಯದವರು ಇದ್ದಾಗ ಆರ್ಥಿಕ ಸುಧಾರಣೆ ಕಷ್ಟ ಸಾಧ್ಯ,’ ಎಂದೂ ರಘುರಾಮ್‌ ರಾಜನ್‌ ಅವರು ತಮ್ಮ ಅಂಕಣದಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.