ADVERTISEMENT

ಹವಾಮಾನದ ಹೊರತಾಗಿಯೂ ಜಿಡಿಪಿ ಶೇ 6.5ರಷ್ಟು ಬೆಳವಣಿಗೆ ಕಾಣಲಿದೆ: ಅರವಿಂದ ವೀರಮಣಿ

ಪಿಟಿಐ
Published 21 ಸೆಪ್ಟೆಂಬರ್ 2023, 13:46 IST
Last Updated 21 ಸೆಪ್ಟೆಂಬರ್ 2023, 13:46 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಕಚ್ಚಾ ತೈಲ ದರ ಏರಿಕೆ ಮತ್ತು ಪ್ರತಿಕೂಲ ಹವಾಮಾನದ ಹೊರತಾಗಿಯೂ ಭಾರತದ ಆರ್ಥಿಕತೆಯು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 6.5ರಷ್ಟು ಬೆಳವಣಿಗೆ ಕಾಣಲಿದೆ ಎಂದು ನೀತಿ ಆಯೋಗದ ಸದಸ್ಯ ಅರವಿಂದ ವೀರಮಣಿ ಗುರುವಾರ ಹೇಳಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆಯು ಶೇ 6.5ರಷ್ಟು (ಶೇ 0.5ರಷ್ಟು ಹೆಚ್ಚು ಅಥವಾ ಕಡಿಮೆ) ಆಗಲಿದೆ ಎಂದಿದ್ದಾರೆ.

ಕಚ್ಚಾ ತೈಲ ದರವೇ ಭಾರತ ಆರ್ಥಿಕ ಬೆಳವಣಿಗೆಗೆ ಪ್ರಮುಖ ಅಪಾಯ ಆಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಕಚ್ಚಾ ತೈಲ ದರ ಏರಿಕೆಯು ಹಣದುಬ್ಬರದ ಮೇಲೆ ಪರಿಣಾಮ ಬೀರಲಿದೆ ಎಂದಿದ್ದಾರೆ. ಅಂತರರಾಷ್ಟ್ರೀಯ ಕಚ್ಚಾ ತೈಲ ದರವು 10 ತಿಂಗಳಲ್ಲಿ ಮೊದಲಿಗೆ ಬ್ಯಾರಲ್‌ಗೆ 90 ಡಾಲರ್‌ನ ಗಡಿ ದಾಟಿದ್ದು, ಸದ್ಯ ಬ್ಯಾರಲ್‌ಗೆ 92 ಡಾಲರ್‌ನಂತೆ ಮಾರಾಟ ಆಗುತ್ತಿದೆ ಎಂದು ವೀರಮಣಿ ತಿಳಿಸಿದ್ದಾರೆ.

ADVERTISEMENT

ಆಹಾರ ಹಣದುಬ್ಬರಕ್ಕೆ ಸಂಬಂಧಿಸಿದಂತೆ ಈವರೆಗೆ ಸರ್ಕಾರವು ವಿವೇಚನೆಯಿಂದ ನಿರ್ವಹಣೆ ಮಾಡಿದೆ ಎಂದು ಅವರು ಹೇಳಿದ್ದಾರೆ.

ಚಿಲ್ಲರೆ ಹಣದುಬ್ಬರವು ಜುಲೈನಲ್ಲಿ ಶೇ 7.44ರಷ್ಟು ಇದ್ದಿದ್ದು ಆಗಸ್ಟ್‌ನಲ್ಲಿ ಶೇ 6.83ಕ್ಕೆ ಇಳಿಕೆ ಕಂಡಿದೆ. ಹೀಗಿದ್ದರೂ ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ನಿಗದಿ ಮಾಡಿಕೊಂಡಿರುವ ಗರಿಷ್ಠ ಮಟ್ಟಕ್ಕಿಂತ (ಶೇ 6) ಹೆಚ್ಚಿನ ಪ್ರಮಾಣದಲ್ಲಿಯೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.