ADVERTISEMENT

ಸಂಕಷ್ಟದಲ್ಲಿರುವ ಶ್ರೀಲಂಕಾಕ್ಕೆ ಆರ್ಥಿಕ ನೆರವು ನೀಡಲು ಭಾರತ ಯತ್ನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಡಿಸೆಂಬರ್ 2021, 12:22 IST
Last Updated 12 ಡಿಸೆಂಬರ್ 2021, 12:22 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿರುವ ದ್ವೀಪ ರಾಷ್ಟ್ರ ಶ್ರೀಲಂಕಾಕ್ಕೆ ಸಹಾಯದ ತುರ್ತು ಪ್ಯಾಕೇಜ್ ನೀಡಿ ನೆರವಾಗಲು ಭಾರತ ಸರ್ಕಾರವು ಪ್ರಯತ್ನ ನಡೆಸುತ್ತಿದೆ ಎಂದು ಗೊತ್ತಾಗಿದೆ.

ಆಹಾರ, ಆರೋಗ್ಯ, ಇಂಧನ ಭದ್ರತೆ ಮತ್ತು ಕರೆನ್ಸಿ ವಿನಿಮಯ ಸೇರಿದಂತೆ ಹಲವು ರಂಗಗಳನ್ನು ಈ ನೆರವಿನ ಪ್ಯಾಕೇಜ್‌ ಒಳಗೊಂಡಿರುತ್ತದೆ ಎಂದು ಅಧಿಕಾರಿಗಳ ಮಾಹಿತಿ ಉಲ್ಲೇಖಿಸಿ ‘ಎಕನಾಮಿಕ್ಸ್‌ ಟೈಮ್ಸ್‌’ ವರದಿ ಮಾಡಿದೆ.
ಶ್ರೀಲಂಕಾದ ಹಣಕಾಸು ಸಚಿವರು ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ ಬೆನ್ನಿಗೇ ಭಾರತ ಸರ್ಕಾರ ಈ ಹೆಜ್ಜೆ ಇಟ್ಟಿದೆ. ಭಾರತದಿಂದ ಆಹಾರ, ಔಷಧ, ಇಂಧನ ಮತ್ತು ಇತರ ಅಗತ್ಯ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಶ್ರೀಲಂಕಾಕ್ಕೆ ಈ ಯೋಜನೆ ನೆರವಾಗಲಿದೆ.

ಶ್ರೀಲಂಕಾದ ವಿದೇಶಿ-ವಿನಿಮಯ ಕ್ಷೀಣಿಸುತ್ತಿದೆ. ಸರ್ಕಾರವು ತನ್ನ ಸಾಗರೋತ್ತರ ಸಾಲವನ್ನು ಖಂಡಿತವಾಗಿಯೂ ತೀರಿಸಲಿದೆ ಎಂದು ಶ್ರೀಲಂಕಾದ ಕೇಂದ್ರ ಬ್ಯಾಂಕ್‌ನ ಗವರ್ನರ್‌ ಇತ್ತೀಚೆಗೆ ಹೇಳಿದ್ದರು. ಈ ಮೂಲಕ ರಾಷ್ಟ್ರ ಸಾಲದ ಸುಳಿಯಲ್ಲಿದೆ ಎಂಬ ಸುಳಿವನ್ನೂ ನೀಡಿದ್ದರು.

ADVERTISEMENT

ದೀರ್ಘ ಕಾಲದ ಲಾಕ್‌ಡೌನ್‌ನ ನಂತರ ನಂತರ ಗಡಿಯನ್ನು ತೆರೆಯುವುದರೊಂದಿಗೆ ಶ್ರೀಲಂಕಾ ತನ್ನ ಪ್ರವಾಸೋದ್ಯಮವನ್ನು ಪುನಶ್ಚೇತನಗೊಳಿಸುವ ಪ್ರಯತ್ನ ನಡೆಸುತ್ತಿದೆ. ಹೆಚ್ಚಿನ ಶ್ರೀಲಂಕಾದವರು ಉದ್ಯೋಗ ಹುಡುಕಿ ವಿದೇಶಗಳಿಗೆ ತೆರಳಿರುವುದರಿಂದ ಹೆಚ್ಚಿನ ಹಣದ ಒಳಹರಿವನ್ನೂ ದೇಶ ನಿರೀಕ್ಷೆ ಮಾಡುತ್ತಿದೆ.

ಸದ್ಯ ಎರಡೂ ದೇಶಗಳ ನಡುವೆ ಅಸ್ತಿತ್ವದಲ್ಲಿರುವ ದ್ವಿಪಕ್ಷೀಯ ಆರ್ಥಿಕ ಸಂಬಂಧವನ್ನು ಮತ್ತಷ್ಟು ವಿಸ್ತರಿಸುವ ಮತ್ತು ಆಳವಾಗಿಸುವ ಮಾರ್ಗಗಳು ಮತ್ತು ವಿಧಾನಗಳನ್ನು ಉಭಯ ದೇಶಗಳು ಗುರುತಿಸಿವೆ ಎಂದು ಶ್ರೀಲಂಕಾ ಸರ್ಕಾರ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.