ADVERTISEMENT

ಇನ್ಫೊಸಿಸ್‌ನಲ್ಲಿ ಎಲ್ಲವೂ ಸರಿಯಾಗಿದೆ: ನಂದನ್‌ ನಿಲೇಕಣಿ

ಕಾರ್ಯನಿರ್ವಾಹಕಯೇತರ ಅಧ್ಯಕ್ಷ ನಂದನ್‌ ನಿಲೇಕಣಿ

​ಪ್ರಜಾವಾಣಿ ವಾರ್ತೆ
Published 23 ಜೂನ್ 2018, 17:48 IST
Last Updated 23 ಜೂನ್ 2018, 17:48 IST
   

ಬೆಂಗಳೂರು: ‘ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪ್ರಮುಖ ಸಂಸ್ಥೆ ಇನ್ಫೊಸಿಸ್‌ನಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಈಗ ಎಲ್ಲವೂ ಸರಿಯಾಗಿದೆ’ ಎಂದುಕಾರ್ಯನಿರ್ವಾಹಕಯೇತರ ಅಧ್ಯಕ್ಷ ನಂದನ್‌ ನಿಲೇಕಣಿ ತಿಳಿಸಿದ್ದಾರೆ.

ಸಂಸ್ಥೆಯ 37ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ‘ನಾನು ಎರಡನೇ ಬಾರಿಗೆ ಕಳೆದ ಆಗಸ್ಟ್‌ನಲ್ಲಿ ಸಂಸ್ಥೆಗೆ ಬಂದಾಗ, ಸಂಸ್ಥೆಯ ಸ್ಥಿರತೆಯ ಬಗ್ಗೆ ನೀವು ಆತಂಕ ವ್ಯಕ್ತಪಡಿಸಿದ್ದಿರಿ. ವರ್ಷದುದ್ದಕ್ಕೂ ಹಲವು ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಸ್ಥಿರತೆ ಮೂಡಿಸಲಾಗಿದೆ’ ಎಂದು ಹೇಳಿದ್ದಾರೆ.

‘ಉತ್ತಮ ನಿರ್ವಹಣಾ ತಂಡ ಮತ್ತು ಆಡಳಿತ ಮಂಡಳಿ ಹೊಂದಿದ್ದೇವೆ. ಎಲ್ಲರೂ ಒಂದಾಗಿ ಕೆಲಸ ಮಾಡುತ್ತಿದ್ದು, ಬದಲಾವಣೆಯ ಅಂಚಿನಲ್ಲಿದ್ದೇವೆ.ಸಂಸ್ಥೆಯು ಕಠಿಣ ಪರಿಸ್ಥಿತಿಯಲ್ಲಿದ್ದಾಗಪಾಲುದಾರರು ಮತ್ತು ಆಡಳಿತ ಮಂಡಳಿಯಲ್ಲಿ ಇರುವ ಸಹೋದ್ಯೋಗಿಗಳು ನೀಡುತ್ತಿರುವ ಬೆಂಬಲ ಮತ್ತು ಸಹಕಾರದಿಂದ ಬಲಿಷ್ಠ ಆರ್ಥಿಕ ಪ್ರಗತಿ ಸಾಧ್ಯವಾಗಿದೆ.

ADVERTISEMENT

‘ಡಿಜಿಟಲ್‌ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಜತೆ ಜತೆಗೇ ಸಾಂಪ್ರದಾಯಿಕ ಮೂಲ ವ್ಯವಸ್ಥೆಯನ್ನೂ ಆಧುನಿಕ ಯುಗಕ್ಕೆ ತರುವ ಯೋಜನೆಯನ್ನೂ ಹೊಂದಿದ್ದೇವೆ’ ಎಂದು ಹೇಳಿದ್ದಾರೆ.

ಕಾರ್ಪೊರೇಟ್‌ ಆಡಳಿತ ತತ್ವದ ಅಸಮರ್ಪಕ ಪಾಲನೆಗೆ ಸಂಬಂಧಿಸಿದಂತೆಸಂಸ್ಥೆಯ ಸಹ ಸ್ಥಾಪಕರು ಮತ್ತು ಹಿಂದಿನ ಆಡಳಿತ ಮಂಡಳಿ ವಿರುದ್ಧ ಹಲವು ತಿಂಗಳವರೆಗೆ ಬೋರ್ಡ್‌ರೂಂ ಕಲಹ ನಡೆದಿತ್ತು.

ಆ ಬೆಳವಣಿಗೆಯ ಬೆನ್ನಲ್ಲೇ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ವಿಶಾಲ್‌ ಸಿಕ್ಕಾ ಅವರು 2017ರ ಆಗಸ್ಟ್‌ 18ರಂದು ದಿಢೀರ್‌ ರಾಜೀನಾಮೆ ನೀಡಿದ್ದರು. ನಂತರ ಅಧ್ಯಕ್ಷರಾ
ಗಿದ್ದ ಆರ್‌.ಶೇಷಸಾಯಿ ಅವರನ್ನೂ ಒಳಗೊಂಡು ಕೆಲವು ನಿರ್ದೇಶಕರು ಸಂಸ್ಥೆಯಿಂದ ಹೊರಬಂದರು. ಆಬಳಿಕ ನಿಲೇಕಣಿ ಅವರು 2017ರ ಆಗಸ್ಟ್‌ 24 ರಂದು ಕಾರ್ಯನಿರ್ವಾಹಕಯೇತರ ಅಧ್ಯಕ್ಷರಾಗಿ ನೇಮಕವಾದರು.

2018ರಂದು ಜನವರಿ 2 ರಂದು ಹೊಸ ಸಿಇಒ ಆಗಿ ಸಲೀಲ್‌ ಪಾರೇಖ್‌ ಅಧಿಕಾರ ವಹಿಸಿಕೊಂಡರು. 2017ರ ಅಕ್ಟೋಬರ್‌ನಲ್ಲಿ ಪ್ರತಿ ಷೇರಿಗೆ ₹13 ಮಧ್ಯಂತರ ಲಾಭಾಂಶ ನೀಡಲಾಗಿದೆ.

‘2018ರ ಮಾರ್ಚ್‌ 31ರ ಅಂತ್ಯಕ್ಕೆ ಪ್ರತಿ ಷೇರಿಗೆ ₹20.50ರಂತೆ ಅಂತಿಮ ಲಾಭಾಂಶ ನೀಡಲು ಆಡಳಿತ ಮಂಡಳಿ ಶಿಫಾರಸು ಮಾಡಿದೆ’ ಎಂದು ನಿಲೇಕಣಿ ಮಾಹಿತಿ ನೀಡಿದ್ದಾರೆ.

ನಾರಾಯಣ ಮೂರ್ತಿ ಗೈರು: ಇನ್ಫೊಸಿಸ್ ಸಹ ಸ್ಥಾಪಕ ಎನ್‌.ಆರ್‌. ನಾರಾಯಣ ಮೂರ್ತಿ ಅವರು ಸತತ ಎರಡನೇ ಬಾರಿಗೆ ಸಭೆಯಿಂದ ಹೊರಗುಳಿದಿದ್ದಾರೆ.

ವಿದೇಶದಲ್ಲಿರುವುದರಿಂದಅವರು ಸಭೆಯಲ್ಲಿ ಭಾಗವಹಿಸಿಲ್ಲ ಎಂದು ಅವರ ನಿಕಟವರ್ತಿಗಳು ಮಾಧ್ಯಮಗಳಿಗೆ ಹೇಳಿದ್ದಾರೆ.

ಬೋರ್ಡ್‌ರೂಂ ಕಲಹ

ದಿಂದಾಗಿ2017ರ ಜೂನ್‌ 24 ರಂದು ನಡೆದ ಸಭೆಗೂ ನಾರಾಯಣ ಮೂರ್ತಿ ಮತ್ತು ಇತರೆ ಸಹ ಸ್ಥಾಪಕರಾದ ಎಸ್‌. ಗೋಪಾಲಕೃಷ್ಣನ್‌, ಎಸ್‌.ಡಿ. ಶಿಬುಲಾಲ್‌ ಮತ್ತು ಕೆ. ದಿನೇಶ್‌ ಗೈರಾಗಿದ್ದರು.

ಪನಯಾ ಮಾರಾಟ ಪ್ರಶ್ನಿಸಿದ ಷೇರುದಾರರು

ಪನಯಾ ಸಂಸ್ಥೆಯನ್ನು ಮಾರಾಟ ಮಾಡುವ ನಿರ್ಧಾರದ ಬಗ್ಗೆ ಷೇರುದಾರರು ಸಂಸ್ಥೆಯ ನಿರ್ದೇಶಕ ಮಂಡಳಿಯನ್ನು ಪ್ರಶ್ನಿಸಿದ್ದಾರೆ. ಒಂದು ಸಂಸ್ಥೆಯನ್ನು ಖರೀದಿಸಿದ ಮೇಲೆ ಮತ್ತೆ ಅದನ್ನು ಮಾರಾಟ ಮಾಡುವ ಹಿಂದಿನ ಉದ್ದೇಶವಾದರೂ ಏನು ಎಂದು ಕೆಲವು ಷೇರುದಾರರು ಸಭೆಯಲ್ಲಿ ತಕರಾರು ಎತ್ತಿದರು. ಈ ಮಾರಾಟ ನಿರ್ಧಾರವನ್ನು ಇನ್ಫೊಸಿಸ್‌ ಬಲವಾಗಿ ಸಮರ್ಥಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.